ಅರಳುಮಲ್ಲಿಗೆ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಮಂಗಳ ಗೌರಮ್ಮ ಕೃಷ್ಣಮೂರ್ತಿ ಆಯ್ಕೆ

ತಾಲೂಕಿನ ಅರಳುಮಲ್ಲಿಗೆ ಪಂಚಾಯಿತಿಯಲ್ಲಿ ಅಧ್ಯಕ್ಷರ ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಮಂಗಳ ಗೌರಮ್ಮ ಕೃಷ್ಣಮೂರ್ತಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

18 ಸದಸ್ಯರ ಬಲ ಹೊಂದಿರುವ ಅರಳು ಮಲ್ಲಿಗೆ ಪಂಚಾಯಿತಿಯಲ್ಲಿ ಜೂನ್ 12ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, 11 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಗಳ ಗೌರಮ್ಮ ಕೃಷ್ಣಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅರಳುಮಲ್ಲಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದ ನಿರ್ಮಲಾ ಸಿದ್ದೇಗೌಡರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಮಂಗಳಗೌರಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು.

ಬೇರೆ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಮಂಗಳ ಗೌರಮ್ಮನವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.  ನೂತನ ಅಧ್ಯಕ್ಷರಿಗೆ ಪುಷ್ಪಮಾಲೆ ನೀಡಿ ಸಿಹಿ ತಿನಿಸುವ ಮೂಲಕ ಸದಸ್ಯರು, ಕಾಂಗ್ರೆಸ್ ಮುಖಂಡರು ಶುಭ ಕೋರಿದರು. ಪಟಾಕಿ ಸಿಡಿಸುವ ಮೂಲಕ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.

ನೂತನ ಅಧ್ಯಕ್ಷರಾದ ಮಂಗಳ ಗೌರಮ್ಮ ಮಾತನಾಡಿ, ಸರ್ವ ಸದಸ್ಯರು ಒಮ್ಮತದಿಂದ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ , ನಾನು ಬಡ ಕುಟುಂಬದ ಹೆಣ್ಣು ಮಗಳು ನನಗೆ ಈ ಅವಕಾಶ ಸಿಕ್ಕಿರುವುದು ಭಾಗ್ಯವೆಂದೆ ಭಾವಿಸುತ್ತೇನೆ. ಗ್ರಾಮ ಪಂಚಾಯಿತಿ ಸದಸ್ಯರಾಗಿ ಸತತ ನಾಲ್ಕು ಬಾರಿ ಜಯಗಳಿಸಿದ್ದು ಇದೇ ಮೊದಲ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂಬ ಹಂಬಲವಿದೆ, ಸರ್ವ ಸದಸ್ಯರ ಸಲಹೆ ಸೂಚನೆಗಳನ್ನು ಪಡೆದು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪಂಚಾಯ್ತಿ ಉಪಾಧ್ಯಕ್ಷ ಡಿ.ಆರ್. ಧ್ರುವಕುಮಾರ್, ಮಾಜಿ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಕೆಂಪಣ್ಣ, ನಗರಸಭಾ ಸದಸ್ಯರಾದ ಚಂದ್ರ ಮೋಹನ್, ರಘು, ಮಂಜುನಾಥ್, ಭೀಮಣ್ಣ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *