ಹಾದ್ರೀಪುರ ಗ್ರಾಮ ಪಂಚಾಯತಿಯಲ್ಲಿ ಕಾಸ್ ಇದ್ರೆ ಮಾತ್ರ ಫೈಲ್ ಮೂವ್, ಇಲ್ಲ ಅಂದ್ರೆ ವಾಪಸ್: ಅಧ್ಯಕ್ಷ ಮತ್ತು ಪಿಡಿಒ ಅವರದ್ದೇ ದರ್ಬಾರ್ ಆರೋಪ

ದೊಡ್ಡಬಳ್ಳಾಪುರ: ಗ್ರಾಮಗಳು ಅಭಿವೃದ್ಧಿ ಆಗಬೇಕು ಎಂದರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷ ಜನರ ಪರ ಕೆಲಸ ಮಾಡಬೇಕು. ಆದರೆ, ಅಧ್ಯಕ್ಷನ ಅಪ್ಪಣೆ ಇಲ್ಲದೆ ಯಾವುದೇ ಫೈಲ್‌ ಮುಂದಕ್ಕೆ ಹೋಗುವುದಿಲ್ಲ. ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸತೀಶ್ ಕುಮಾರ್ ಮತ್ತು ಪಿಡಿಓ ಶಿವಾನಂದ ಮರಕೇರಿಯದ್ದೇ ದರ್ಬಾರ್ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅದಕ್ಕೆ ತಾಜಾ ಉದಾಹರಣೆ ಎಂದರೆ ಪಂಚಾಯತಿ ಒಳಕ್ಕೆ ಹೋಗುತ್ತಿದ್ದಂತೆ ಮೊದಲು ಕಾಣುವುದು ಅಧ್ಯಕ್ಷರ ಅಪ್ಪಣೆ ಪತ್ರಗಳು. ಪಿಡಿಓ ಕಚೇರಿಯ ಬಾಗಿಲಿನಲ್ಲಿಯೇ ಈ ಆದೇಶವನ್ನು ಅಂಟಿಸಲಾಗಿದೆ.

ಪಂಚಾಯಿತಿಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ಆಗಲ್ಲ. ಒಂದು ಇ ಖಾತೆ ಮಾಡಿಸಲು ಕನಿಷ್ಠ 25 ಸಾವಿರ ಹಣ ಬೇಡಿಕೆ ಇಡುತ್ತಾರೆ. ಹಣ ಕೊಟ್ಟವರಿಗೆ ಕೇವಲ 15 ದಿನದಲ್ಲೇ ಇ ಖಾತೆ ಬರುತ್ತದೆ. ಚೌಕಾಸಿ ಮಾಡಿದವರಿಗೆ ತಡವಾಗುತ್ತದೆ.

ಇದಕ್ಕೆ ತಾಜಾ ಉದಾಹರಣೆಗೆ ಎಂದರೆ‌ ಹಾದ್ರೀಪುರ ಗ್ರಾಮದ ಚೆನ್ನಲಕ್ಷ್ಮಯ್ಯ ಎಂಬುವವರು ಕಳೆದ ಮೂರು ತಿಂಗಳ ಹಿಂದೆ ಇ ಖಾತೆ ಮಾಡಿಸಲು ದಾಖಲೆಗಳನ್ನು ಕೊಟ್ಟರು.

ಈ ವೇಳೆ ಲಂಚಕ್ಕೆ ಆಮೀಷವೊಡ್ಡಿದ್ದಾರೆ. ಅವರು ಕೇಳಿದಷ್ಟು ಅಲ್ಲದೇ ಇದ್ದರೂ, ಲಂಚ ಅಂತೂ ಕೊಟ್ಟರೂ. ಮಳೆ ಬಂದಾಗ ಮನೆಗೆ ನೀರು ನುಗ್ಗುತ್ತದೆ. ನೀರು ನುಗ್ಗಿದಾಗ ಪ್ರತೀ ಬಾರಿ ಪಿಡಿಓಗೆ ಹೇಳಿದರೂ ಬರೀ ಹಾರಿಕೆ ಉತ್ತರ ನೀಡಿ ಸುಮ್ಮನೆ ಆಗುತ್ತಾರೆ. ಹಾಗಾಗಿ ಹೇಗೋ ಸಾಲ ಮಾಡಿ ಮನೆ ಕಟ್ಟಿಕೊಳ್ಳೋಣ ಅಂತ ಇ ಖಾತೆಗೆ ಹಾಕಿದರೆ ಮೂರು ತಿಂಗಳಿನಿಂದ ಕಚೇರಿಗೂ ಮನೆಗೂ ಅಲೆಸಿ, ಪಿಐಡಿ ನಂಬರ್ ಇಲ್ಲ, ಮಿಸ್ಸಿಂಗ್ ಪ್ರಾಪರ್ಟಿಗೆ ಸೇರಿಸಿ ಮಾಡಿಸಬೇಕು ಎಂದು ಹೇಳಿ,‌ ಈಗ ಮೂರು ದಿನಗಳ‌ ಹಿಂದೆ ಸರಕಾರ ಪಿಐಡಿ ನಂಬರ್ ಮಾಡುವುದನ್ನು ನಿಲ್ಲಿಸಿದೆ ಎಂದು ಹೇಳಿ ಫೈಲ್ ವಾಪಸ್ ನೀಡುತ್ತಾರೆ. ಮೂರು ತಿಂಗಳಿನಿಂದ ಇವರು ಏನು ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡಿದರೆ ಹಾರಿಕೆ ಉತ್ತರ ಎಂದು‌ ಚೆನ್ನಲಕ್ಷ್ಮಯ್ಯ ಆರೋಪಿಸಿದ್ದಾರೆ‌‌

*ಅಧ್ಯಕ್ಷ ಮತ್ತು ಪಿಡಿಓ ದರ್ಬಾರ್*

ಈ ಪಂಚಾಯತಿಯಲ್ಲಿ ಅಧ್ಯಕ್ಷರ ಅಪ್ಪಣೆ ಇಲ್ಲದೆ ಯಾವುದೇ ಕೆಲಸ ಆಗಲ್ಲ. ಕೆಲಸ ಆಗಬೇಕು ಎಂದರೆ ಮೊದಲು ಅಧ್ಯಕ್ಷನ‌ ಬಕೆಟ್ ಹಿಡಿಯಬೇಕು. ಇಲ್ಲದೇ ಇದ್ದರೆ ಇಲ್ಲಿ ಯಾವ ಕೆಲಸನೂ ಆಗಲ್ಲ. ಇದಕ್ಕೆ‌ ತಾಜಾ ಉದಾಹರಣೆ ಅವರು ಅಂಟಿಸಿರುವ ನೋಟೀಸ್. ಇನ್ನೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಮರಿಕೇರಿ 2016 ರಲ್ಲಿ ಹಾದ್ರೀಪುರ ಪಂಚಾಯತಿಗೆ ಬಂದರು. ಅಲ್ಲಿಂದ ಇಲ್ಲಿಯವರೆಗೆ ಇವರದ್ದೇ ದರ್ಬಾರ್. ಪಂಚಾಯತಿಯ ಪ್ರತಿ ಮನೆ ಮನೆ ಗೊತ್ತಿರುವುದರಿಂದ ಬಡವರಿಗೆ ಇವರು ಕೆಲಸವೇ ಮಾಡಲ್ಲ, ಬರೀ ಸಿರಿವಂತರಿಗೆ ಮಾತ್ರ ಕೆಲಸ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ಸರಕಾರ 5 ವರ್ಷ ಮಾತ್ರ ಒಂದು ಪಂಚಾಯತಿಯಲ್ಲಿ ಕೆಲಸ ಮಾಡಲು ಪಿಡಿಓ ಗೆ ಅವಕಾಶ ನೀಡಿರುವುದು. ಆದರೆ ಅವಧಿ ಮುಗಿದರೂ ಇನ್ನೂ ಇಲ್ಲೇ ಏಕೆ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ಈ ಖಾತೆ ಮಾಡಿಸಲು ದಾಖಲೆಗಳನ್ನು ನೀಡಿದ್ದೆ. ಕೇಳಿದಾಗ ಪ್ರತಿ ಬಾರಿ ಆ ದಾಖಲೆ ಸರಿ ಇಲ್ಲ,‌ ಮಾಡಿಸಿಕೊಂಡು ಬಾ, ಸರಿ ಪಡಿಸಿಕೊಂಡು ಹೋದರೆ ಮತ್ತೊಂದು ದಾಖಲೆ ಹೇಳುತ್ತಿದ್ದರು. ಅಧ್ಯಕ್ಷರ ಮೇಲೆ‌ ಪಿಡಿಓ, ಪಿಡಿಓ ಮೇಲೆ ಅಧ್ಯಕ್ಷರ ಹೇಳಿಕೊಂಡು, ಇಂದು ಸರಕಾರ ಪಿಐಡಿ ಮಾಡುವುದನ್ನು ಅನುಮತಿ ನೀಡಿಲ್ಲ ಎಂದು ಹೇಳಿ ದಾಖಲೆ ವಾಪಸ್ ನೀಡುತ್ತಿದ್ದಾರೆ. ಬಡವರಿಗೆ ಈ ಪಂಚಾಯತಿಯಲ್ಲಿ ನ್ಯಾಯವೇ ಇಲ್ಲ ಚೆನ್ನಲಕ್ಷ್ಮಯ್ಯ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *