ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ರೈಲ್ವೆ ನಿಲ್ದಾಣದ ಬಳಿ ಮೇ 31, 2025ರಂದು ನಡೆದ ಒಂದು ಕರುಳು ಹಿಂಡುವ ಘಟನೆಯಲ್ಲಿ, 30 ವರ್ಷದ ಮಾನಸಿಕ ಅಸ್ವಸ್ಥಳಾದ ತುಂಬು ಗರ್ಭಿಣಿ ರೇಣುಕಾ… ಬೀದಿಯಲ್ಲಿ ಶವವಾಗಿ ಕಂಡುಬಂದಿದ್ದಾಳೆ.
ಜಂಗಮಕೋಟೆ ಮೂಲದ ಮಾನಸಿಕ ಅಸ್ವಸ್ಥಳಾದ ಈ ಮಹಿಳೆ, ದಿಕ್ಕು ದೆಸೆಯಿಲ್ಲದೆ ಬೀದಿಗಳಲ್ಲಿ ಅಲೆದಾಡುತ್ತಿದ್ದವಳು.
ಆಕೆಯನ್ನು ಯಾರೋ ದುಷ್ಕರ್ಮಿಗಳು ದೈಹಿಕವಾಗಿ ದುರ್ಬಳಕೆ ಮಾಡಿ ಗರ್ಭಿಣಿಯನ್ನಾಗಿ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ…
8 ತಿಂಗಳ ಗರ್ಭಿಣಿಯಾಗಿದ್ದ ಆಕೆ, ರೈಲ್ವೆ ನಿಲ್ದಾಣದ ಬಳಿ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದಾಳೆ. ಈ ಘಟನೆಯು ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ದಿಕ್ಕಿಲ್ಲದವರಿಗೆ ಸೂಕ್ತ ರಕ್ಷಣೆಯ ಕೊರತೆಯನ್ನು ಎತ್ತಿ ತೋರಿಸಿದೆ. ರೇಣುಕಾಳ ದಾರುಣ ಅಂತ್ಯವು ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.
ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿಎಸ್ಐ ವೇಣುಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕರ್ತವ್ಯದ ಜೊತೆಗೆ, ಅವರು ರೇಣುಕಾಳ ಶವವನ್ನು ಸಂಸ್ಕಾರಕ್ಕೆ ಒಯ್ಯಲು ಆರ್ಥಿಕ ಸಹಾಯವನ್ನು ಒದಗಿಸಿ, ಮಾನವೀಯತೆ ಮೆರೆದಿದ್ದಾರೆ.
ಈ ಕಾರ್ಯಕ್ಕೆ ಸ್ಥಳೀಯರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೇಣುಗೋಪಾಲ್ರಿಗೆ ಮೆಚ್ಚುಗೆ ವ್ಯಕ್ತವಾಗಿದೆ.