ಸಬ್ ಇನ್ಸ್ ಪೆಕ್ಟರ್ ಮತ್ತು ಎ.ಎಸ್.ಐ ಲಾಂಗ್ ತೋರಿಸಿ ಯುವಕರಿಗೆ ಬೆದರಿಕೆ ಪ್ರಕರಣ: ಲಾಂಗ್ ಝಳಪಿಸಿದಕ್ಕೆ ಇಬ್ಬರು ಸಸ್ಪೆಂಡ್

ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಬಗ್ಗೆ ರಾಜ್ಯದಲ್ಲಿ ಮತ್ತು ಸಾರ್ವಜನಿಕರಲ್ಲಿ ಸದಾಭಿಪ್ರಾಯವಿದೆ. ಅವೆಷ್ಟೋ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಸಹಾಯಕ ಸಬ್ ಇನ್ಸ್ ಪೆಕ್ಟರ್ ರಾತ್ರಿಯ ಕರ್ತವ್ಯದಲ್ಲಿ ಲೋಪವೆಸಗಿ ಅಮಾನತುಗೊಂಡಿದ್ದಾರೆ.

ಅಷ್ಟಕ್ಕೂ ನಡೆದಿದ್ದು ಏನು?

ಇತ್ತೀಚಿಗೆ ಸುಂಟಿಕೊಪ್ಪ ಸಮೀಪದ ಗರಂಗಂದೂರು ಗ್ರಾಮದಲ್ಲಿ ತೆರೆ ಮಹೋತ್ಸವವೊಂದು ನಡೆದಿತ್ತು. ಈ ಕಾರ್ಯಕ್ರಮಕ್ಕೆ ಎಂಟು ಜನ ಸ್ನೇಹಿತರು ಅಲ್ಲಿಗೆ ತೆರಳಿ ಮಧ್ಯರಾತ್ರಿ ಎರಡು ಗಂಟೆಗೆ ಸುಮಾರಿಗೆ ಕಾಜುರಿಗೆ ಹೋಗುವ ದಾರಿ ಬಳಿ ಇರುವ ಬಸ್ ಶೆಲ್ಟರ್ ನಲ್ಲಿ ಆಟೋರಿಕ್ಷಕ್ಕಾಗಿ ಕಾದು ಕುಳಿತ ಸಂದರ್ಭ ಒಂದು ಓಮಿನಿ ಕಾರ್ ಹಾಗೂ ನೀಲಿ ನೆಕ್ಸಾನ್ ಕಾರಿನಲ್ಲಿ ಮಫ್ತಿಯಲ್ಲಿ ಬಂದ ಪೊಲೀಸರು ನೇರವಾಗಿ ಬಂದು ಇಸ್ಪೀಟ್ ಎಲ್ಲಿ ಆಡಿದ್ದೀರ ಎಂದು ಹೇಳಿ ಲಾಂಗ್ ಒಬ್ಬರ ಕುತ್ತಿಗೆಗೆ ಹಿಡಿದು ನಂತರ ಬೈಕಿನ 3 ಕೀ ಗಳನ್ನು, ಮೂರು ಮೊಬೈಲ್ ಗಳನ್ನು  ಪಡೆದುಕೊಂಡು ನಾಳೆ ಸ್ಟೇಷನ್ನಿಗೆ ಬರುವಂತೆ ತಿಳಿಸಿ ತೆರಳಿದ್ದಾರೆ.

ಆಟೋಕ್ಕಾಗಿ ಕಾಯುತ್ತಿರುವುದಾಗಿ ಎಂದು ಪರಿಪರಿಯಾಗಿ ಹೇಳಿಕೊಂಡರು ಕೇಳಲಿಲ್ಲ. ಅವರು ತೆರಳಿದ ನಂತರ ಬೈಕುಗಳನ್ನು ಸಮೀಪದ ಸ್ನೇಹಿತರ ಮನೆಯಲ್ಲಿಟ್ಟು ಈ ವಿಚಾರವಾಗಿ ಸುಂಟಿಕೊಪ್ಪದ ಮತ್ತೋರ್ವ ಎ. ಎಸ್ ಐ ಅವರಿಗೆ ದೂರವಾಣಿ ಮೂಲಕ ಅವರ ಸಂಬಂಧಿ ವಿಚಾರ ತಿಳಿಸಿದರು. ಮೇ ನಾಲ್ಕರಂದು ಸಂಜೆ ಠಾಣೆಗೆ ತೆರಳಿದಾಗ, ಎ. ಎಸ್ ಐ ಇವರಿಂದ 3000 ಹಣವನ್ನು ಪಡೆದುಕೊಂಡು ಮೊಬೈಲ್ ಹಾಗೂ ಬೈಕ್ ನ ಕೀ ಗಳನ್ನು ವಾಪಸ್ ನೀಡಿ, ಖಾಲಿ ಪತ್ರದಲ್ಲಿ ಸಹಿ ಮಾಡಿ ಕಳಿಸಿರುತ್ತಾರೆ ಎಂದು ತಿಳಿದುಬಂದಿದೆ.

ತಪ್ಪು ಮಾಡದೆ ಖಾಲಿ ಪತ್ರಕೆ ಸಹಿ ಹಾಕಿಸಿಕೊಂಡಿದ್ದು ಯುವಕರಿಗೆ ಸಂಶಯ ತಂದೊಡ್ಡಿ, ನೇರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಐವರು ಯುವಕರು ನಡೆದ ಘಟನೆಯ ಬಗ್ಗೆ ವಿವರ ನೀಡಿ ದೂರು ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸೋಮವಾರಪೇಟೆ  ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ತನಿಖೆ ಕೈಗೊಂಡು ನೀಡಿದ ವರದಿ ಅನ್ವಯ ಇದೀಗ ಸಬ್ ಇನ್ಸ್ ಪೆಕ್ಟರ್ ಜಗದೀಶ್, ಸಹಾಯಕ ಸಬ್ ಇನ್ಸ್ ಪೆಕ್ಟರ್ ತೀರ್ಥಕುಮಾರ್ ರವರನ್ನು ಸಸ್ಪೆಂಡ್ ಮಾಡಲಾಗಿದೆ.

ಈ ನಡುವೆ ತೀರ್ಥ ಕುಮಾರ್ ದೂರವಾಣಿ ಮೂಲಕ ನಡೆದ ಘಟನೆ ಹಾಗೂ ಪಡೆದುಕೊಂಡ ಹಣದ ಬಗ್ಗೆ ಮಾತನಾಡಿರುವ ಆಡಿಯೋ ಯುವಕರ ಕೈಗೆ ಸೇರಿದ್ದು, ಇದನ್ನು ಕೂಡ ತನಿಖಾ ಅಧಿಕಾರಿಗಳಿಗೆ ನೀಡಲಾಗಿತ್ತು. ಎಸ್.ಐ, ಹಾಗು ಎ ಎಸ್.ಐ ಅವರು ಕುಡಿದು ರಾತ್ರಿ ಅವಾಂತರ ಸೃಷ್ಟಿಸಿದ್ದಾರೆ ಎಂದು ಯುವಕರು ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ.

ಬೇರೆ ಬೇರೆ ವೃತ್ತಿಯಲ್ಲಿರುವ ಯುವಕರಿಗೆ ಇಸ್ಪೀಟ್ ಆಟ ತಿಳಿಯದಿದ್ದರೂ, ಇಸ್ಪೀಟ್ ಆಟ ಆಡುತ್ತಿದ್ದಾಗ ಲಾಂಗ್ ತೋರಿಸಿ ದಾಳಿ ನಡೆಸಲಾಗಿದೆ ಎಂದು ಪ್ರಚಾರಪಡಿಸಲಾಗಿದೆ. ಆದರೆ ಪೊಲೀಸರ ತನಿಖೆಯಿಂದ ಇದೀಗ ಯುವಕರು ನಿರಳರಾಗಿದ್ದಾರೆ.

Leave a Reply

Your email address will not be published. Required fields are marked *