ಗ್ಯಾಸ್ ಲಿಕೇಜ್ನಿಂದ ಮನೆ ಹೊತ್ತಿ ಉರಿದಿದ್ದು, ಇಬ್ಬರು ಸಜೀವದಹನವಾಗಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ನಡೆದಿದೆ.
ನಾಗರಾಜ್(50) ಮತ್ತು ಶ್ರೀನಿವಾಸ್(50) ಮೃತ ದುರ್ದೈವಿಗಳು.
ಅಭಿಷೇಕ್, ಶಿವಶಂಕರ್, ಲಕ್ಷ್ಮೀದೇವಿ ಮತ್ತು ಬಸವ ಎಂಬುವವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗಯ್ಯ ಎಂಬುವವರಿಗೆ ಎರಡು ಬಾಡಿಗೆ ಮನೆಗಳು ಸೇರಿದ್ದು, ಬಳ್ಳಾರಿಯ ನಾಗರಾಜ್ ಕುಟುಂಬ ಒಂದು ಮನೆಯಲ್ಲಿ ಬಾಡಿಗೆಗೆ ಇತ್ತು. ಬೆಳಗ್ಗೆ ಕೆಲಸಕ್ಕೆ ತೆರಳುವಾಗ ನಾಗರಾಜ್ ದೇವರ ಮುಂದೆ ದೀಪ ಹಚ್ಚಿದ್ದರು. ಈ ವೇಳೆ ಖಾಲಿಯಾಗಿದ್ದ ಸಿಲಿಂಡರ್ ಬದಲಾಯಿಸಲು ಮಗ ಅಭಿಷೇಕ್ ಮುಂದಾಗಿದ್ದ. ಅಜಾಗರೂಕತೆಯಿಂದ ಸಿಲಿಂಡರ್ ಫಿಟ್ ಮಾಡುತ್ತಿದ್ದ ವೇಳೆ ಗ್ಯಾಸ್ ಲೀಕ್ ಆಗಿ ದೀಪದ ಬೆಂಕಿ ತಗುಲಿದೆ. ಬೆಂಕಿಯ ತೀವ್ರತೆಗೆ ನಾಗರಾಜ್ ಹಾಗೂ ಶ್ರೀನಿವಾಸ್ ಮೃತಪಟ್ಟಿದ್ದಾರೆ.
ಮೂಲತಃ ಬಳ್ಳಾರಿಯವರಾಗಿರುವ ನಾಗರಾಜ್ ಕುಟುಂಬ ಎರಡು ವರ್ಷದ ಹಿಂದೆ ಬಾಡಿಗೆಗೆ ಬಂದಿದ್ದರು. ನಾಗರಾಜ್ ಪತ್ನಿ ಲಕ್ಷ್ಮಿ ದೇವಿ (35), ಮಕ್ಕಳಾದ ಬಸನಗೌಡ (19) ಅಭಿಷೇಕ್ ಗೌಡ (18) ವಾಸವಿದ್ದರು. ಮನೆ ಹೊತ್ತಿ ಉರಿದಾಗ ನಾಗರಾಜ್, ಲಕ್ಷ್ಮಿದೇವಿ, ಬಸವನಗೌಡ, ಅಭಿಷೇಕ್ ಕೂಡ ಬೆಂಕಿಯಲ್ಲಿ ಸಿಲುಕಿದ್ದರು. ಈ ವೇಳೆ ಲಕ್ಷ್ಮಿದೇವಿ, ಬಸವನಗೌಡ ಮನೆಯಿಂದ ಓಡಿ ಬಂದಿದ್ದು, ನಾಗರಾಜ್ ಹಾಗೂ ಅಭಿ ಬೆಂಕಿಗೆ ಸಿಲುಕಿ ನರಳಾಡಿದ್ದಾರೆ.
ಈ ವೇಳೆ ಪಕ್ಕದ ಮನೆಯಲ್ಲಿದ್ದ ಶ್ರೀನಿವಾಸ್ ಹಾಗೂ ಮನೆ ಮಾಲೀಕ ಶಿವಶಂಕರ್ ಬೆಂಕಿ ಹಾರಿಸಲು ಮುಂದಾಗಿದ್ದರು. ಅಭಿಷೇಕ್ನನ್ನು ಉಳಿಸಲು ಶ್ರೀನಿವಾಸ್ ಹೋಗಿದ್ದು, ಇತ್ತ ನಾಗರಾಜ್ರನ್ನು ಉಳಿಸಲು ಹೋಗಿದ್ದ ಶಿವಶಂಕರ್ಗೆ ಬೆಂಕಿ ತಗುಲಿದೆ. ಕೂಡಲೇ ಸ್ಥಳಿಯರು ಬೆಂಕಿ ತಗುಲಿದವರನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.