ಕನ್ನಡವನ್ನ ನಿರ್ಲಕ್ಷಿಸಿದರೆ ಸಹಿಸಲ್ಲ- ಎಲ್ಲರು ಕನ್ನಡಕ್ಕೆ ಗೌರವ ನೀಡಲೇ ಬೇಕು- ಕರವೇ (ಟಿ.ಎ ನಾರಾಯಣಗೌಡರ ಬಣ)

ನಗರದ ಖಾಸಗಿ ಒಡೆತನದ ಸವೆನ್ ಹಿಲ್ಸ್ ಆಸ್ಪತ್ರೆ ತನ್ನ ನಾಮಫಲಕದಲ್ಲಿ ಇಂಗ್ಲಿಷ್ ಬಳಕೆ ಮಾಡಿದ‌ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ ನಾರಾಯಣಗೌಡರ ಬಣ)ದ ವತಿಯಿಂದ ಆಸ್ಪತ್ರೆ ಮುಂಭಾಗ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕರವೇ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ, ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದ್ದರು ಸಹ ಆಸ್ಪತ್ರೆ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ, ಕನ್ನಡಕ್ಕೆ ಅವಮಾನಿಸಿದವರ ವಿರುದ್ಧ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ಬಣ ಸದಾ ತೊಡೆತಟ್ಟುತ್ತದೆ. ಅಲ್ಲದೆ ಸ್ಥಳೀಯವಾಗಿ ಸಣ್ಣ ಸಮಸ್ಯೆ ಆದರೂ ಬಂದು ನಿಲ್ಲುವ ಹಲವು ಮುಖಂಡರು ಕನ್ನಡಕ್ಕೆ ಸಮಸ್ಯೆ ಆದಾಗ ಬರುವುದಿಲ್ಲ ಏಕೆ ಎಂಬ ಪ್ರಶ್ನೆ ನಮ್ಮಲ್ಲಿ ಕಾಡುತ್ತಿದೆ. ಇದು ಕೇವಲ ಸಾಂಕೇತಿಕ ಹೋರಾಟ, ಆಸ್ಪತ್ರೆ ಸಿಬ್ಬಂದಿ ನಾಮಫಲಕ ಬದಲಿಸದೇ ಇದ್ದಲ್ಲಿ ಮುಂದೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆಸ್ಪತ್ರೆ ಮಾಲೀಕರೊಂದಿಗೆ ಮಾತನಾಡಿದ ಪ್ರತಿಭಟನಾಕಾರರು ಕೂಡಲೇ ನಾಮಫಲಕದ ಬೆಳಕನ್ನು ಬಂದ್ ಮಾಡುವಂತೆ ಆಗ್ರಹಿಸಿದರು, ಒತ್ತಾಯಕ್ಕೆ ಮಣಿದ ಆಸ್ಪತ್ರೆ ಸಿಬ್ಬಂದಿ ಕೂಡಲೇ ಲೈಟ್ ಆಫ್ ಮಾಡುವ ಮೂಲಕ ಹೋರಾಟಗಾರರಿಗೆ ಸ್ಪಂದಿಸಿದ್ದಾರೆ ಹಾಗೂ ಆಸ್ಪತ್ರೆ ನಾಮಪಲಕವನ್ನು ಕನ್ನಡದಲ್ಲಿ ಬದಲಿಸುವುದಾಗಿ ತಿಳಿಸಿದ್ದಾರೆ.

ಸ್ಥಳೀಯವಾಗಿ ಕನ್ನಡ ಭಾಷೆಗೆ ಸಣ್ಣಪುಟ್ಟ ಅಪಮಾನ ಅವಮಾನಗಳಾದ ತಕ್ಷಣವೇ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ರ ಬಣ ) ಸ್ಥಳಕ್ಕೆ ಧಾವಿಸಿ ಹೋರಾಟ ಅಥವಾ ಪ್ರತಿಭಟನೆ ಮಾಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸುವ ಬೆಳೆಸುವ ಉತ್ತಮ ಕಾರ್ಯವನ್ನು ಮಾಡುತ್ತಿದೆ. ನಾಡು ನುಡಿ ಜಲದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ಬದ್ಧತೆ ಮೆಚ್ಚುವಂಥದ್ದು ಎಂಬ ಮಾತುಗಳು ಸಾಮಾಜಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಕನ್ನಡ ಪರ ಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ ಎಂಬುದೇ ನಮ್ಮ ಆಶಯ ಕೂಡ..

Leave a Reply

Your email address will not be published. Required fields are marked *