ಜನಪದ ಕಲಾವಿದೆ ನಾಗಸಂದ್ರ ಪಾರ್ವತಮ್ಮಗೆ ಗೌರವ ಡಾಕ್ಟರೇಟ್  

ದೊಡ್ಡಬಳ್ಳಾಪುರ : ಹದಿನೆಂಟು ವರ್ಷಗಳ ನಿರಂತರ ಕಲಾ ಸೇವೆ ಗುರುತಿಸಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್  ರಿಸರ್ಚ್ ಯುನಿವರ್ಸಿಟಿಯು ಹಳ್ಳಿ ಪ್ರತಿಭೆ ಜನಪದ ಕಲಾವಿದೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿರುವುದು ಸಂತಸ ತಂದಿದೆ ಎಂದು ಜನಪದ ಕಲಾವಿದೆ ನಾಗಸಂದ್ರ ಪಾರ್ವತಮ್ಮ ತಿಳಿಸಿದ್ದಾರೆ.

ಸತತ 18 ವರ್ಷಗಳಿಂದ ಸೋಬಾನೇ ಪದ, ಭಜನೆ, ಭಕ್ತಿ ಗೀತೆ, ಚಿತ್ರಗೀತೆಗಳು ಸೇರಿದಂತೆ ಹಲವು ಬಗೆಯ ಹಾಡುಗಳನ್ನು ಊರೂರು ಸುತ್ತಿ ಹಾಡುತ್ತಾ ಬಂದಿದ್ದೇನೆ. ತಾನೂ ಹಾಡಿ, ಇತರರಿಗೂ ಕಲೆ ಕಲಿಸುತ್ತಿದ್ದೇನೆ ಎಂದರು.

ಕೌಟುಂಬಿಕ ಸಂಕಷ್ಟಗಳ ನಡುವೆಯೂ ಛಲ ಬಿಡದೆ ನಿರಂತರ ಕಲಾ ಸೇವೆಗೆ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ. ಬಾಲ್ಯದಲ್ಲಿ ಬೇರೆಯವರು ಹಾಡುವಾಗ ನನಗೂ ಆಡಬೇಕು ಅನಿಸುತ್ತಿತ್ತು. ಹಾಗಾಗಿ, ಹಾಡುವುದನ್ನು ಕಲಿತೆ. ಇದಕ್ಕೆ ಮನೆಯಲ್ಲಿ ನಿರಂತರ ವಿರೋಧ ವ್ಯಕ್ತವಾಗುತ್ತಿದ್ದರು, ಛಲ ಬಿಡದೆ ನನ್ನದೇ ಸ್ವಂತ ತಂಡವನ್ನು ಕಟ್ಟಿಕೊಂಡು ಹಲವಾರು ಹಾಡಿನ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಇಂದು ನಾನು ಮಾಡಿರುವ ಸೇವೆಯನ್ನು ಗುರುತಿಸಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇದರಿಂದ ಸಂತಸ ತಂದಿದೆ. ಮುಂದೆ ನನ್ನಂತೆ ನನ್ನ ತಂಡದವರು ಸಹ ಡಾಕ್ಟರೇಟ್ ಪಡೆಯುವ ಮಟ್ಟಕ್ಕೆ ಬೆಳೆಯಲಿ ಎಂಬುದೇ ನಮ್ಮೆಲ್ಲರ ಆಶಯ ಎಂದು ಕಲಾವಿದೆ ಪಾರ್ವತಮ್ಮ ಹೇಳಿದ್ದಾರೆ.

ಇಂದಿನ ಮಕ್ಕಳು ಕೇವಲ ಮೊಬೈಲ್ ಗೆ ಸೀಮಿತರಾಗಿದ್ದಾರೆ. ಅವರನ್ನು ಇಂತಹ ಜನಪದ ಕಲೆಗಳತ್ತ ಸೆಳೆಯುವ ನಿಟ್ಟಿನಲ್ಲಿ ತರಬೇತಿ ಕೊಡಿಸುವ ಉದ್ದೇಶ ನನ್ನದು. ಹಾಗಾಗಿ, ಮನೆಯಲ್ಲಿ ಅಗತ್ಯವಿರುವ ಸಂಗೀತ ವಾದ್ಯಗಳನ್ನು  ಪರಿಣಿತಿ ಪಡೆದಿರುವ ಶಿಕ್ಷಕರನ್ನು ನೇಮಿಸುವ ಮೂಲಕ  ಮಕ್ಕಳಿಗೆ ಸಂಗೀತ ಹೇಳಿ ಕೊಡಲು ಮುಂದಾಗಿದ್ದೇವೆ  ಎಂದಿದ್ದಾರೆ.

ಕಲಾವಿದ ಅರುಣ್ ಮಾತನಾಡಿ, ಯಾವುದೇ ಅಪೇಕ್ಷೆ ಇಲ್ಲದೆ ಕೇವಲ ಜನಪದ ಸಾಹಿತ್ಯವನ್ನು ಉಳಿಸುವ ನಿಟ್ಟಿನಲ್ಲಿ ನಿತ್ಯ ನಿರಂತರ ಸೇವೆ ಸಲ್ಲಿಸುತ್ತಿದ್ದೇವೆ. ನಮ್ಮ ಸೇವೆಯನ್ನು ಗುರುತಿಸಿ ನಮ್ಮ ತಾಯಿಯವರಿಗೆ ಗೌರವ ಡಾಕ್ಟರೇಟ್ ನೀಡಿರುವುದು ಸಂತಸದ ವಿಷಯವಾಗಿದೆ. ಈ ಗೌರವ ಡಾಕ್ಟರೇಟ್ ಪದವಿ ನಾವು ಮತ್ತಷ್ಟು ಹೆಚ್ಚಿನ ಕೆಲಸ ನಿರ್ವಹಿಸಲು ಶಕ್ತಿ ತುಂಬಿದೆ. ಕಲಾವಿದರನ್ನು ಬೆಳೆಸಿ ಹಾರೈಸುವ ಇಂತಹ ಸಂಸ್ಥೆಗಳು ಮತ್ತಷ್ಟು ಹೆಚ್ಚಾಗಲಿ. ಮೂಲ ಜನಪದ ಉಳಿಯಲಿ ಎಂದು ತಿಳಿಸಿದರು.

ನಮ್ಮ ತಂಡದಲ್ಲಿ ( ಪಾರ್ವತಮ್ಮ, ಒಬ್ಬಮ್ಮ,ಮುನಿಯಮ್ಮ, ನರಸಮ್ಮ, ಅರ್ಚನಾ, ರಾಜಮ್ಮ, ಕಮಲಮ್ಮ, ರತ್ನಮ್ಮ )   12ಕ್ಕೂ ಹೆಚ್ಚು ಮಂದಿ ಗಾಯಕರಿದ್ದು, ಸರ್ಕಾರಿ ಹಾಗೂ ಇತರೆ ಸೌಲಭ್ಯಗಳ ಕೊರತೆಯಿಂದ ಸೂಕ್ತ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರವು ಜನಪದ ಕಲಾವಿದರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ಮೂಲಕ  ಜನಪದ ಉಳಿವಿಗೆ ಸಹಕರಿಸಬೇಕಿದೆ ಎಂದು‌‌ ಕೋರಿದರು.

Leave a Reply

Your email address will not be published. Required fields are marked *