ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಲೇಸರ್ ಶೋ, ಬೃಹತ್ ರಾವಣ ದಹನ ಮತ್ತು ಆಕರ್ಷಕ ಸಿಡಿಮದ್ದುಗಳ ಅದ್ಧೂರಿ ಪ್ರದರ್ಶನ

ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಶ್ರೀ ರಾಮೋತ್ಸವ ಹಾಗೂ ಬೃಹತ್ ಶ್ರೀರಾಮ ಶೋಭಾಯಾತ್ರೆ ಏ.11ರಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು.

ನಗರದಾದ್ಯಂತ ಏ.13ರಂದು ಬೃಹತ್ ಶ್ರೀರಾಮ ಶೋಭಾಯಾತ್ರೆ ನಡೆಯಿತು. ಕಾರ್‍ಯಕ್ರಮದ ಅಂಗವಾಗಿ ವಾಹನ ಜಾಥಾ, ಹೋಮ ಹವನಾದಿಗಳು, ಕಲ್ಯಾಣೋತ್ಸವ ನಡೆಯಿತು.

ಭಾನುವಾರ ಸಂಜೆ ಬಹತ್ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಭಾರತ ಮಾತೆ, ಶ್ರೀರಾಮ, ಹನುಮ, ಶಿವ, ಭುವನೇಶ್ವರಿ, ಡಾ.ಬಿ.ಆರ್.ಅಂಬೇಡ್ಕರ್, ಶಿವಾಜಿ ಪ್ರತಿಮೆಗಳೊಂದಿಗೆ ವಿವಿಧ ಕಲಾತಂಡಗಳು ಶೋಭಾಯಾತ್ರೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಶ್ರೀರಾಮನ ಚಿತ್ರವುಳ್ಳ ಕೇಸರಿ ಧ್ವಜ ಹಿಡಿದು ‘ಜೈ ಶ್ರೀರಾಮ್’ ಘೋಷಣೆಯೊಂದಿಗೆ ಸಾವಿರಾರು ಜನ ಭಾಗವಹಿಸಿದ್ದರು. ಶೋಭಾ ಯಾತ್ರೆ ಸಾಗುವ ರಸ್ತೆಯ ಎರಡೂ ಬದಿಯಲ್ಲೂ ಜನರು ಸಾಲುಗಟ್ಟಿ ನಿಂತು ಬೃಹ್ ಮೆರವಣಿಗೆ ವೀಕ್ಷಣೆ ಮಾಡಿದರು.

ಶೋಭಾ ಯಾತ್ರೆಯಲ್ಲಿ ಸಾವಿರಾರು ಯುವಕರು ಶ್ರೀರಾಮನ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರೆ, ಯುವತಿಯರು ತಮಟೆ ನಾದಕ್ಕೆ ಕುಣಿಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ನಂತರ ಸಂಜೆ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಲೇಸರ್ ಶೋ, ಬೃಹತ್ ರಾವಣ ದಹನ ಮತ್ತು ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ಕಾರ್‍ಯಕ್ರಮಗಳು ಅದ್ಧೂರಿಯಾಗಿ ನಡೆದವು.

Leave a Reply

Your email address will not be published. Required fields are marked *