ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ನ ಮಹಾಶಿವರಾತ್ರಿ ಆಚರಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಭಾಗವಹಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಉಭಯ ಪಕ್ಷದ ನಾಯಕರು ಒಟ್ಟಿಗೆ ಇರುವ ಫೋಟೋಗಳು ವೈರಲ್ ಆಗುತ್ತಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಒಟ್ಟಿಗೆ ಇರುವುದು ರಾಜಕೀಯವಾಗಿ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.
ರಾಹುಲ್ ಗೆ ಅವಮಾನಿಸಿದ್ದ ಜಗ್ಗಿ ವಾಸುದೇವ್, ಅಮಿತ್ ಶಾ ಜೊತೆ ವೇದಿಕೆ ಹಂಚಿಕೆಕೊಂಡಿದ್ದಾರೆ. ಇದೆಲ್ಲಾ ಸರಿ ಅಲ್ಲ… ಎಂದು ಡಿಕೆಶಿಗೆ ಹೈಕಮಾಂಡ್ ವಾರ್ನಿಂಗ್ ಕೂಡ ಕೊಟ್ಟಿದೆ.
ಸದ್ಗುರು ಅವರ ಮಾತುಗಳಲ್ಲಿ ಆಳವಾದ ತತ್ವಗಳ ಜೊತೆ ಸೌಮ್ಯವಾದ ಹಾಸ್ಯದ ಸಂಯೋಜನೆ ಇರುತ್ತದೆ. ಬದುಕಿನ ಒಳಹುಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದೆವು. ಗಂಭೀರ ವಿಚಾರಗಳ ಮಧ್ಯೆ, ಹಾಸ್ಯದ ಝಲಕ್ ಗಳು ಮನಸ್ಸಿಗೆ ಹಿತ ನೀಡಿದವು ಎಂದು ಎಕ್ಸ್ ಖಾತೆಯಲ್ಲಿ ಡಿಸಿಎಂ ಡಿಕೆಶಿ ಬರೆದುಕೊಂಡಿದ್ದಾರೆ.
ಜೀವನವೆಂದರೆ ಅನಂತ ಯಾತ್ರೆ. ಪ್ರತಿ ಕ್ಷಣವೂ ಒಂದು ಅಧ್ಯಾಯ, ಪ್ರತಿ ನಗುವೂ ಮತ್ತು ಆಲೋಚನೆಯೂ ನಮ್ಮ ಆಂತರಿಕ ಬೆಳಕಿಗೆ ಪೂರಕ. ನಿಜವಾದ ಸಂಪತ್ತು ಅಂದರೆ, ಆಂತರಿಕ ಶಾಂತಿ, ಆತ್ಮ-ಸಾಕ್ಷಾತ್ಕಾರ ಮತ್ತು ಆ ಭಾವನೆ, ಬದುಕಿನ ಪ್ರತಿಯೊಂದು ಕ್ಷಣದಲ್ಲಿ ಜೀವಂತವಾಗಿರುವ ಸತ್ಯ ಎಂದು ಬರೆದಿದ್ದಾರೆ.
ಬದುಕು, ಆಧ್ಯಾತ್ಮದ ಕುರಿತು ಸದ್ಗುರು ಅವರೊಂದಿಗೆ ಸುದೀರ್ಘ ಮಾತುಕತೆ. ಇಲ್ಲಿ ಜ್ಞಾನವು ನದಿಯಂತೆ ಹರಿಯಿತು, ಅವರ ಪ್ರತೀ ಮಾತುಗಳೂ ತಾರ್ಕಿತ ಸತ್ಯ ಎನಿಸಿದವು. ಜೀವನ, ಆಧ್ಯಾತ್ಮಿಕತೆ ಮತ್ತು ಅದರಾಚೆಗಿನ ನನ್ನ ಸಂದೇಹಗಳು – ಸದ್ಗುರುವಿನ ಸಮ್ಮುಖದಲ್ಲಿ ಅನಾವರಣಗೊಂಡವು, ಅವಕ್ಕೆ ಸೂಕ್ತ ಉತ್ತರಗಳೂ ಸಿಕ್ಕವು ಎಂದು ತಿಳಿಸಿದ್ದಾರೆ.