ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲೇ ಮೌಲ್ಯಗಳನ್ನು ಬೆಳೆಸಿಕೊಂಡರೆ ಮಾನವೀಯತೆ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಏಜಾಕ್ಸ್ ಕಂಪನಿಯ ಸಿಎಸ್ಆರ್ ಅಧಿಕಾರಿ ಮಂಜುನಾಥ್ ಹೇಳಿದರು.
ನಗರದ ವಿದ್ಯಾನಿಧಿ ಕಾಲೇಜಿನಲ್ಲಿ ಶುಕ್ರವಾರ ನಡೆದ “ವಿದ್ಯಾರ್ಥಿಗಳಲ್ಲಿ ಮೌಲ್ಯಗಳ ಜಾಗೃತಿ” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇತ್ತೀಚಿನ ದಿನದಲ್ಲಿ ವಿದ್ಯಾರ್ಥಿಗಳಲ್ಲಿ ಗುರುಗಳಿಗೆ ತೋರುವ ಗೌರವ ಕಡಿಮೆಯಾಗುತ್ತಿದೆ. ಸಮಾಜದಲ್ಲಿ ಹಿರಿಯರೊಂದಿಗೆ ವರ್ತಿಸುವ ರೀತಿ ಬದಲಾಗುತ್ತಿದೆ. ತಂದೆ-ತಾಯಿಯರೊಂದಿಗೆ ಬೆರೆಯುವಿಕೆ ಕಡಿಮೆಯಾಗುತ್ತಿದೆ. ಬದುಕಿನಲ್ಲಿ ಪ್ರಗತಿಯೊಂದುವ ಮಾರ್ಗ ಬಿಟ್ಟು, ಬೇರೆ ಬೇರೆ ಮಾರ್ಗಗಳನ್ನು ಆಯ್ಕೆ ಮಾಡುತ್ತಿದ್ದಾರೆ, ದುಷ್ಚಟಗಳಿಗೆ ಬಲಿಯಾಗಿತ್ತಿದ್ದಾರೆ. ಇವೆಲ್ಲವುಗಳನ್ನು ಬಿಟ್ಟು ಸಾಧನೆಯತ್ತ ಸಾಗಬೇಕಾಗಿದೆ. ಕಾಲೇಜಿಗೆ ಸೇರಿದ ಉದ್ದೇಶ ಮರೆಯದೆ ಗುರಿಗಳನ್ನು ಬಲಪಡಿಸಬೇಕಿದೆ. ನಿರಂತರ ಪ್ರಯತ್ನದಿಂದ ಮುಂದಿನ ದಿನದಲ್ಲಿ ಗುರಿತಲುಪಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾನಿಧಿ ಕಾಲೇಜಿನ ಉಪನ್ಯಾಸಕ ಬಾಲಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿರುವುದರಿಂದ ಸೈಬರ್ ವಂಚನೆಗೆ ಒಳಗಾಗುವ ಸಾಧ್ಯತೆಗಳಿದೆ. ಹೀಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಜಾಗೃತರಾಗಬೇಕು. ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ ಸೈಬರ್ ವಂಚನೆಗೆ ಒಳಗಾದವರಲ್ಲಿ ಹೆಚ್ಚು ಶಿಕ್ಷಣವಂತರೆ ಎಂಬುದು ಆಶ್ಚರ್ಯದ ಸಂಗತಿ. ಬ್ಯಾಂಕ್ ಗೆ ಸಂಬಂಧಿಸಿದ ಯಾವುದೇ ಕರೆಗಳು ಬಂದರೆ ಎಚ್ಚರವಹಿಸಿ. ಒಟಿಪಿಗಳನ್ನು ನೀಡಬೇಡಿ. ಸೈಬರ್ ವಂಚನೆಗೆ ಒಳಗಾಗಿ, ಹಣ ಕಳೆದುಕೊಂಡರೆ ಕೂಡಲೇ 1930 ಕರೆ ಮಾಡಿ ದೂರು ದಾಖಲಿಸಿ. ಯಾವುದೇ ಆನ್ಲೈನ್ ಹಣದ ಜಾಲಗಳಿಗೆ ಒಳಪಡದೆ ಎಚ್ಚರವಹಿಸಿ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಗಿರೀಶ್, ದಿನೇಶ್ ಇದ್ದರು.