ಅರ್ಕಾವತಿ ನದಿ ಪಾತ್ರದ ಸರ್ಕಾರಿ ಜಾಗ ಕಬಳಿಕೆ ಆರೋಪ: ಸರ್ಕಾರಿ ಭೂಮಿ ರಕ್ಷಿಸುವಂತೆ ಕರವೇ ರಾಜಘಟ್ಟ ರವಿ ಆಗ್ರಹ

ದೊಡ್ಡಬಳ್ಳಾಪುರ ನಗರ : ನಗರಕ್ಕೆ 5 ಕಿಲೋ ಮೀಟರ್ ಯಾವುದೇ ಸರ್ಕಾರಿ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶ ಮಾಡಬಾರದು ಎಂಬ ಅಧಿನಿಯಮ ಇದ್ದರೂ ಕಂದಾಯ ಇಲಾಖೆಯ ನಿವೃತ್ತ ನೌಕರನೊಬ್ಬ ವಸತಿ ಬಡಾವಣೆ ನಿರ್ಮಿಸಲು ಸರ್ಕಾರಿ ಖರಾಬು ಜಮೀನನ್ನು ಕಬಳಿಸಲು ಹುನ್ನಾರ ನೆಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಕುರುಡರಂತೆ ಕಂಡರು ಕಾಣದಂತೆ ಇದ್ದಾರೆ ಎಂದು ಕರವೇ ಸಂಘಟನೆ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ‌ಆರೋಪಿಸಿದ್ದಾರೆ.

ನಗರದ ಹೊರವಲಯದ ಐತಿಹಾಸಿಕ ಹಿನ್ನೆಲೆ ಇರುವ ಆರ್ಕಾವತಿ ನದಿ ದಂಡೆಯಲ್ಲಿರುವ ಶ್ರೀರಾಮ ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ಸರ್ಕಾರಿ ಬಂಡೆ ಹಾಗು ಖರಾಬು ಜಾಗದಲ್ಲಿ ಇದ್ದಂತಹ ಕಲ್ಲು ಬಂಡೆಯನ್ನು ರಾತ್ರಿ ವೇಳೆ ಗ್ರಾಮದ ಜನರು ನಿದ್ರೆಯ ಸಮಯದಲ್ಲಿ ಸ್ಪೋಟಿಸಿ ಕಲ್ಲುಗಳನ್ನು ಬೇರೆಕಡೆ ತೆರವು ಮಾಡಿ ಆ ಜಾಗಕ್ಕೆ ಮಣ್ಣು ತುಂಬಿದ್ದು, ಆ ಜಾಗದಲ್ಲಿ ಇದ್ದಂತಹ ಪುರಾತನ ಕಾಲದ ಮರಗಳನ್ನು ಕಡಿದು ಹಾಕಿದ್ದಾರೆ. ಪರಿಸರಕ್ಕೆ ಹಾನಿ ಉಂಟುಮಾಡಿ, ರಾಜ ಕಾಲುವೆಗಳನ್ನು ಮುಚ್ಚಲಾಗಿದೆ ಎಂದು ಆರೋಪಿಸಿದ್ದಾರೆ.

ದೊಡ್ಡಬಳ್ಳಾಪುರ ನಗರದ ವ್ಯಾಪ್ತಿಯಲ್ಲಿ ನಿಯಮ ಬಾಹಿರವಾಗಿ ಅನಧಿಕೃತವಾಗಿ ಬಡಾವಣೆ ತಲೆ ಎತ್ತುತ್ತಿವೆ ಎಂದು ಆರೋಪಿಸಿದ ರಾಜಘಟ್ಟ ರವಿ, ಬಫರ್ ಜೋನ್ ಗಳನ್ನು ತಿಂದು ಹಾಕುತ್ತಿದ್ದಾರೆ. ಲೇಔಟ್ ಮಾಫಿಯಾಗಳು ಕೆರೆ ಅಂಗಳ ಕೆರೆ ಕೆಳಗೆ ವಸತಿಗೆ ಯೋಗ್ಯವೇ ಅಲ್ಲದ ಜಮೀನುಗಳನ್ನು ನಿವೇಶನ ವಿಂಗಡಣೆ ಮಾಡಿ ಹೆಚ್ಚು ಹಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಇಂತಹವರ ಬಗ್ಗೆ ಮಾಹಿತಿ‌ ತಿಳಿದಿದ್ದರು ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಮಾಹಿತಿ ಕೇಳಿದರೆ ಉಢಾಷೆ ಉತ್ತರ ನೀಡುತ್ತಾರೆ. ಸರ್ಕಾರಿ ಜಾಗಗಳನ್ನು ಕಬಳಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾವು ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಕೆ‌ ನೀಡಿದ್ದಾರೆ.

Leave a Reply

Your email address will not be published. Required fields are marked *