ನಾನೇನು ಕೊಲೆಗಾರನಲ್ಲ ಯಾವುದೇ ತನಿಖೆಗೂ ಸಿದ್ಧ: ನನ್ನ ಜಾತಿ ಪ್ರಮಾಣ ಪತ್ರದ ಬಗ್ಗೆ ಕೆಲವರಿಂದ ಅಪಪ್ರಚಾರ-ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: 2018ರಲ್ಲಿ ನನ್ನ ಮೇಲೆ ಕೇಸ್‌ ದಾಖಲಾಗಿತ್ತು. ಅದರ ಮೇಲೆ ನಾನು ತಡೆಯಾಜ್ಞೆ ತಂದಿದ್ದೆ. ನಂತರ ವಜಾ ಮಾಡಲು ಕೋರಿದ್ದೆ. ಆದರೆ, ಈಗ ಅದನ್ನು ತಳ್ಳಿ ಹಾಕಿ ಪ್ರಕರಣ ಸಂಬಂಧ ನನ್ನ ಮೇಲೆ ತನಿಖೆಗೆ ಆದೇಶಿಸಲಾಗಿದೆ. ಯಾರೇ ವಿಚಾರಣೆಗೆ ಕರೆದರೂ ನಾನು ಸಹಕರಿಸುತ್ತೇನೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು

ನಗರದ ತಮ್ಮ ಕಚೇರಿಯಲ್ಲಿ ತಮ್ಮ ಮೇಲಿನ ಎಫ್‌ಐಆರ್‌ ವಿರುದ್ಧದ ಮೇಲ್ಮನವಿ ವಜಾ ಸಂಬಂಧ ಪ್ರತಿಕ್ರಿಯಿಸಿ ಅವರು ಈಗ ಏನೇನೋ ಊಹಾಪೋಹ ಎದ್ದಿದೆ. 2010ರಿಂದ ಇಂಥ ವಿಚಾರಗಳೇ ಚರ್ಚೆಯಲ್ಲಿವೆ. ಕೊತ್ತೂರು ಮಂಜುನಾಥ್‌ಗೆ ಈ ರೀತಿ ಆಗುತ್ತದೆ, ಆ ರೀತಿ ಆಗುತ್ತದೆ. ಶಾಸಕ ಸ್ಥಾನ ಹೋಗಿಬಿಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ರೀತಿ ಹೇಳಿಹೇಳಿಯೇ 2013ರ ವಿಧಾನಸಭೆ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ ನನ್ನ ಮೇಲೆ ಸೋತಿದ್ದ ಮುನಿಆಂಜಿನಪ್ಪ ಅವರನ್ನು ದಾರಿ ತಪ್ಪಿಸಿದ್ದರು. ಆತನಿಂದ ನ್ಯಾಯಾಲಯದಲ್ಲಿ ಸುಳ್ಳು ಹೇಳಿಸಿದರು. ಈಗ ಅಂಥ ಮಾತು ಮತ್ತೆ ಶುರುವಾಗಿದೆ. ಏನೇನೋ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದರು.

ನನ್ನ ಬಗ್ಗೆ ಪೂರ್ಣ ಮಾಹಿತಿ ಬೇಕೆಂದರೆ ನನ್ನ ಗ್ರಾಮ ಪಂಚಾಯಿತಿಗೆ ಹೋಗಿ ಕೇಳಿದರೆ ಸಿಗುತ್ತದೆ. ನನ್ನ ತಂದೆ, ತಾಯಿ, ಹುಟ್ಟೂರು, ಅಜ್ಜ, ಅಜ್ಜಿ ಬಗ್ಗೆ ಮಾಹಿತಿ ಗೊತ್ತಾಗುತ್ತದೆ. ಮುಳಬಾಗಿಲಿನಲ್ಲಿ ನನ್ನ ಮೇಲೆ ಯಾರಾದರೂ ಪ್ರತಿಭಟನೆ ನಡೆಸಿದ್ದಾರೆಯೇ’ ಎಂದು ಪ್ರಶ್ನಿಸಿದ ಅವರು ಪ್ರಕರಣದಲ್ಲಿ ವಿಚಾರಣೆಗೆ ಸಹಕಾರ ನೀಡುತ್ತೇನೆ. ತಪ್ಪಿಸಿಕೊಂಡು ಎಲ್ಲಿಗೂ ಹೋಗಲ್ಲ. ಸಮಸ್ಯೆ ಏನಾದರೂ ಇದ್ದಿದ್ದರೆ ಕಚೇರಿಯಲ್ಲಿ ಬಂದು ಕುಳಿತುಕೊಳ್ಳುತ್ತಿದ್ದೆನೆ ನಾನೇನು ಕೊಲೆ ಮಾಡಿದ್ದೇನೆಯೇ ಎಂದರು.

ಬಿಜೆಪಿಯವರು ಆರೋಪ ಮಾಡಿದಂತೆ ಸಿ.ಟಿ.ರವಿ ಅವರನ್ನು ಕೊಲೆ ಮಾಡಲು ಯಾರೂ ಪ್ರಯತ್ನಿಸಿಲ್ಲ. ಕೊಲೆ ಮಾಡುವುದು ಎಂದರೆ ಏನು ದೇವಸ್ಥಾನದ ಮುಂದೆ ಕೋಳಿ, ಕುರಿ ಕುಯ್ಯುವುದೇ ಅಂದು ಬೆಳಗಾವಿಯಲ್ಲಿ ಅವರನ್ನು ಪೊಲೀಸರು ಹೊರಗಡೆ ಕರೆದುಕೊಂಡು ಹೋಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಒಂದು ವೇಳೆ ಆ ಸ್ಥಳದಲ್ಲಿದ್ದು, ಗಲಾಟೆ ಆಗಿದ್ದಾರೆ ಯಾರು ಜವಾಬ್ದಾರಿ ಆಗುತ್ತಿದ್ದರು ಆಗ ಪೊಲೀಸರು ಭದ್ರತೆ ನೀಡಿಲ್ಲ ಎಂಬುದಾಗಿ ಬಿಜೆಪಿಯವರು ತಗಾದೆ ತೆಗೆಯುತ್ತಿದ್ದರು ಶಾಸಕರನ್ನು ಕೊಲೆ ಮಾಡುವುದೆಂದರೆ ತಮಾಷೆನಾ ಹುಡುಗಾಟನಾ ಬಿಜೆಪಿಯವರು ಏನೋ ಮಾತನಾಡುತ್ತಾರೆ. ಅದು ಅಷ್ಟೊಂದು ಸುಲಭದ ಕೆಲಸವಲ್ಲ ಎಂದು ತಿರುಗೇಟು ನೀಡಿದರು.

ಶಾಸಕ ಮುನಿರತ್ನ ಮೇಲೆ ಯಾರೂ ಪುಂಡರು ಮೊಟ್ಟೆ ಎಸೆದಿರಬಹುದು. ಕೊಲೆ ಮಾಡುವಂತಿದ್ದರೆ ಯಾರಾದರೂ ಹೇಳಿಕೊಂಡು ಬಂದು ಕೊಲೆ ಮಾಡುತ್ತಾರೆಯೇ? ಅದರಲ್ಲೂ ತಲೆ ಮಧ್ಯ ಭಾಗಕ್ಕೆ ಗುರಿ ಇಟ್ಟು ಮೊಟ್ಟೆ ಎಸೆದಿದ್ದಾರೆ. ಶಾರ್ಟ್‌ ಶೂಟರ್‌ಗಳಿಗೆ ಮಾತ್ರ ಅದು ಸಾಧ್ಯ. ನನ್ನ ಪ್ರಕಾರ ಮುನಿರತ್ನ ಅವರೇ ಹೇಳಿ ಮೊಟ್ಟೆ ಹೊಡೆಸಿಕೊಂಡಿರಬಹುದು. ಆಕಸ್ಮಾತ್‌ ಉದ್ದೇಶಪೂರ್ವಕವಾಗಿ ಎಸೆದಿದ್ದರೆ ತಪ್ಪು. ಅವರೊಬ್ಬ ಶಾಸಕ. ಆ ರೀತಿ ಮಾಡಬಾರದು. ಶಾಸಕರಿಗೆ ಘನತೆ, ಗೌರವವಿರುತ್ತದೆ. ಹೀಗಾಗಿ, ತನಿಖೆ ನಡೆಸಿ ಕ್ರಮ ಆಗಬೇಕು ಎಂದರು.

ಹೆಚ್ಚುವರಿ 30 ಕೋಟಿ ಅನುದಾನ: ‘ರಸ್ತೆ ಅಭಿವೃದ್ಧಿಗೆಂದು ಕೋಲಾರಕ್ಕೆ 30 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ಕಾಮಗಾರಿಗಳಿಗೆ ಟೆಂಡರ್‌ ಆಗಿದೆ. ಹಳ್ಳಿಗಳಲ್ಲೂ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಹಿಂದೆ ಪಿಎಂಜಿವೈಎಸ್‌, ಸಿಎಂಜಿವೈಎಸ್‌ ಯೋಜನೆ ಇದ್ದದ್ದು ಈಗ ಪ್ರಗತಿ ಪಥವಾಗಿದೆ. ಈ ಯೋಜನೆಯಡಿ ಪ್ರತಿ ಕ್ಷೇತ್ರದಲ್ಲಿ 40 ಕಿ.ಮೀ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಪ್ರಸ್ತಾವ ಕಳುಹಿಸಿಕೊಡಲಾಗಿದೆ’ ಎಂದರು.

‘ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ನೇತೃತ್ವದಲ್ಲಿ ಎಐಸಿಸಿ ಸಭೆ ನಡೆದು ನೂರು ವರ್ಷಗಳಾಗಿದೆ. ಆ ನೆನಪಿನಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ನಿಂದ ಸಮಾವೇಶ ನಡೆಯುತ್ತಿದ್ದು, ಶುಕ್ರವಾರದ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಎನ್.ಅಂಬರೀಷ್, ಅಫ್ಸರ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಖಾದ್ರಿಪುರ ಬಾಬು, ಕಿಲಾರಿಪೇಟೆ ಮಣಿ, ಮುಂತಾದವರು ಇದ್ದರು.

Leave a Reply

Your email address will not be published. Required fields are marked *