ಯುವ ಸಂಚಲನ (ರಿ.) ದೊಡ್ಡಬಳ್ಳಾಪುರ, ನಾಗರಕೆರೆ ಜೀವ ವೈವಿದ್ಯತೆ ಸಂರಕ್ಷಣಾ ಸಮಿತಿ ಹಾಗೂ ಸಂವಿಧಾನ ಸಾಥಿ ಇವರ ಸಂಯುಕ್ತ ಆಶ್ರಯದಲ್ಲಿ ಸರಹು ಅಭಿಯಾನ (ಅರ್ಕಾವತಿ ನದಿ ಜಲ ಮೂಲಗಳ ಸಂರಕ್ಷಣೆಗಾಗಿ ಸಾಕ್ಷ್ಯಚಿತ್ರ ಪ್ರದರ್ಶನ) ದ ಭಾಗವಾಗಿ ಇಂದು ಕೊನಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಪ್ರಾಧ್ಯಾಪಕರಾದ ಕೇಶವಮೂರ್ತಿ ಮಾತನಾಡಿ, ಕರ್ನಾಟಕದಲ್ಲಿ ಅನೇಕ ನದಿಗಳನ್ನು ಕಾಣಬಹುದು ಆದರೆ ನದಿಗಳು ಇದ್ದರೂ ಇಲ್ಲದ ಹಾಗೆ ಇರುವ ಜಿಲ್ಲೆ ಅಂದರೆ ಅದು ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆ. ಅದಕ್ಕಾಗಿ ಯುವ ಸಂಚಲನವು ಯುವಜನರಲ್ಲಿ ನದಿ ಕೆರೆಗಳ ಕುರಿತು ಜಾಗೃತಿ ಅಭಿಯಾನ ಉತ್ತಮ ಕಾರ್ಯವಾಗಿದೆ. ಇಂದು ನಾವು ಬೇರೆ-ಬೇರೆ ನದಿಗಳ ನೀರನ್ನು ಬೇಡುವ ಪರಿಸ್ಥಿತಿ ಉಂಟಾಗಿದೆ. ಅದಕ್ಕೆ ಕಾರಣ ನಮ್ಮಲ್ಲಿ ಅವೈಜ್ಞಾನಿಕವಾಗಿ ಕೃಷಿ ಭೂಮಿಯ ಹೆಚ್ಚಳ. ಅದರಲ್ಲೂ ನೀಲಗಿರಿ ಬೆಳೆಯಿಂದ ಹೆಚ್ಚಿನ ಸಮಸ್ಯೆಗೆ ಈ ಭಾಗ ತುತ್ತಾಗಿದೆ ಎಂದು ತಿಳಿಸಿದರು.
ಯುವ ಸಂಚಲನ ತಂಡದ ಅಧ್ಯಕ್ಷರಾದ ಚಿದಾನಂದ್ ಮೂರ್ತಿ ಮಾತನಾಡುತ್ತಾ.. ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಾವಿರುವ ಜಲಾನಯನ ಪ್ರದೇಶದ ಸಂಪೂರ್ಣ ಮಾಹಿತಿಯನ್ನು ಅರಿಯುವುದು ತುಂಬಾ ಮುಖ್ಯ. ಶಿಕ್ಷಣದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಂಡು ನದಿ ಕೆರೆಗಳ ಸಂರಕ್ಷಣೆಗೆ ಮುಂದಾಗ ಬೇಕಿದೆ. ಅರ್ಕಾವತಿ ನದಿ ಕುರಿತು ಅರಿವು ಮೂಡಿಸುವ ಭಾಗವಾಗಿ ದೊಡ್ಡಬಳ್ಳಾಪುರದ ಎಲ್ಲಾ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಲ್ಲಿ ಯುವ ಸಂಚಲನ ತಂಡವು ಜಾಗೃತಿ ಮೂಡಿಸಲಾಗುತ್ತಿದೆ. ಇದುವರೆಗೂ ಒಟ್ಟು 8 ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಜಾಗೃತಿ ಮೂಡಿಸುತ್ತಾ ಸರಹು ಅಭಿಯಾನವು ಸಾಗುತ್ತಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೊನೆಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕರುಗಳಾದ ಸರ್ವಮಂಗಳ, ಸುಮಂಗಳ, ಅಮೃತವಾಣಿ, ಗಂಗಪ್ಪಗೌಡ ಹಾಗೂ ಯುವ ಸಂಚಲನ ತಂಡದ ಸದಸ್ಯರಾದ ನವೀನ್ ಉಪಸ್ಥಿತರಿದ್ದರು.