ನೆಲಮಂಗಲ: ಶಿಕ್ಷಣ ಸಂಸ್ಥೆಗಳು ಇಂದಿನ ವಿದ್ಯಾರ್ಥಿಗಳಲ್ಲಿ ಬಿತ್ತುವ ಗುಣಾತ್ಮಕ ಚಿಂತನೆಗಳು ಭವಿಶ್ಯದ ಅಭಿವೃದ್ಧಿ ಶೀಲ ದೇಶ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಜಿಐಬಿಎಸ್ ಬಿಸಿನೆಸ್ ಸ್ಕೂಲ್ ಮುಖ್ಯಸ್ಥ ಪ್ರೊ. ಭರತ್ ಗೋಪಾಲನ್ ತಿಳಿಸಿದರು.
ತಾಲೂಕಿನ ಕಂಬಯ್ಯನ ಪಾಳ್ಯ ಗ್ರಾಮದಲ್ಲಿ ಹರ್ಷ ಸಮೂಹ ಶಿಕ್ಷಣ ಸಂಸ್ಥೆಗಳ ಫೇಸ್ 2 ರಲ್ಲಿ ಹರ್ಷ ಸಮೂಹ ಶಿಕ್ಷಣ ಸಂಸ್ಥೆಗಳ 12 ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಒಳ್ಳೆಯ ಚಿಂತನೆ ಆಲೋಚನೆಗಳಿಂದ ಗುಣಾತ್ಮಕ ಮನಸ್ಸು ರಚೆನೆಯಾಗುವಂತೆ ಪಾಲಕರ ನಿರೀಕ್ಷೆಗೆ ಮೀರಿ ಕಲಿಯುವ ಸುವರ್ಣಾವಕಾಶವನ್ನು ಹರ್ಷ ಶಿಕ್ಷಣ ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ. ಶಾಲೆಯಲ್ಲಿನ ಬಹುತೇಕ ವಿದ್ಯಾರ್ಥಿಗಳು ಕ್ರೀಡೆ,ಸಾಂಸ್ಕೃತಿಕ ಸ್ಪರ್ಧೆ ಸೇರಿದಂತೆ ಓದಿನಲ್ಲೂ ಪ್ರಶಸ್ತಿ ಪಡೆದುಕೊಂಡಿರುವುದು ಶ್ಲಾಘನೀಯ. ಶಿಕ್ಷಣ ಸಂಸ್ಥೆಗಳು ಭವಿಷ್ಯದ ಔದ್ಯೋಗಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿನ ಸ್ಪರ್ಧೆ ನೀಡಲು ಬೇಕಾದ ಕೌಶಲ್ಯಗಳನ್ನು ಮಕ್ಕಳಲ್ಲಿ ಕಲಿಸಬೇಕೆನ್ನುವುದು ಪಾಲಕರ ಆಶಯವಾಗಿರುತ್ತದೆ.
ಶಿಕ್ಷಣ, ಕಲಿಕೆಗೆ ಸಂಬಂದಿಸಿದಂತೆ ಹರ್ಷ ಸಮೂಹ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಹೊಂದಿರುವ ದೂರದೃಷ್ಟಿ ಚಿಂತನೆಗಳು ಮಹತ್ತರವಾಗಿವೆ. ಶಾಲೆಯಲ್ಲಿನ ಶಿಕ್ಷಕರು, ಪಾಲಕರು ತಮ್ಮಮಕ್ಕಳ ಕಲಿಕೆ,ಪ್ರತಿಭೆಗಳ ಅಭಿರುಚಿಗೆ ತಕ್ಕಂತೆ ಅವಶ್ಯ ವಾತಾವರಣ ವನ್ನು ಸೃಷ್ಟಿ ಮಾಡಿದಲ್ಲಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಒಳ್ಳೆಯ ಫಲಿತಾಂಶ ದೊರೆಯುವುದರಲ್ಲಿ ಸಂದೇಹವಿಲ್ಲ. ಪಾಲಕರಾದವರು ತಮ್ಮ ಮಕ್ಕಳ ಸಾಮಾರ್ಥ್ಯ ಮತ್ತು ಶಾಲಾ ಆಡಳಿತ ಮಂಡಳಿ ಮೇಲೆ ನಂಬಿಕೆ ಇಡಬೇಕಿದೆ. ಮಕ್ಕಳ ಹೋಲಿಕೆ ಮಾಡಿ ಹೀಯಾಳಿಸುವುದನ್ನು ಬಿಡಬೇಕು ಎಂದರು.
ಹರ್ಷ ಸಮೂಹ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿ ಯಶಸ್ ಶಿವಕುಮಾರ್ ಶಿಕ್ಷಣ ಸಂಸ್ಥೆ ಎಂದರೆ ಕೇವಲ ಕಟ್ಟಡವಲ್ಲ, ಬದಲಾಗಿ ದೂರದೃಷ್ಟಿ ಯೋಜನೆಗಳಿಂದ ಪಾಲಕರ ಕನಸು ನನಸಾಗಿಸುವುದಾಗಿದೆ. ಇದು ಕೇವಲ ವಾರ್ಷಿಕೋತ್ಸವ ಕಾರ್ಯಕ್ರಮವಲ್ಲ, ಪ್ರತಿಭೆಗಳ ಅನಾವರಣ, ಧರ್ಮಸಂಸ್ಕತಿಗಳ ಸಮಾಗಮವಾಗಿದೆ. ಗ್ರಾಮೀಣಭಾಗದ ಎಲ್ಲರಿಗೂ ಉತ್ತಮ ಶಿಕ್ಷಣ ಒದಗಿಸುವ ಗುರಿ ಶಿಕ್ಷಣ ಸಂಸ್ಥೆಯದ್ದಾಗಿದೆ. ಪಾಲಕರ ಸಹಕಾರ, ಶಿಕ್ಷಕರ ಪರಿಶ್ರಮ ಸೇರಿದಂತೆ ವಿದ್ಯಾರ್ಥಿಗಳ ಪ್ರಯತ್ನಗಳೆಲ್ಲವೂ ಶಿಕ್ಷಣ ಸಂಸ್ಥೆ ಪ್ರತಿ ವರ್ಷ ಎತ್ತರಕ್ಕೆ ಬೆಳೆಯಲು ಸಹಕಾರಿಯಾಗುತ್ತಿದೆ ಎಂದರು.
ಅಭಿನಂದನೆ: ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತಿಹೆಚ್ಚು ಅಂಕ ಪಡೆದ ಎಲ್ಕೆಜಿ ಯಿಂದ ದ್ವೀತಿಯ ಪಿಯುಸಿ ವರೆಗೂ ಪ್ರತಿ ತರಗತಿಯಲ್ಲಿ ಮೂರು ವಿದ್ಯಾರ್ಥಿಗಳ ಸೇರಿದಂತೆ ವಿಷಯವಾರು ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಅತ್ಯುತ್ತಮ ಶಿಕ್ಷಕ ಪ್ರಶಸ್ತಿ; ಪ್ರತಿ ವರ್ಷದಂತೆ ಈ ವರ್ಷವೂ ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ಶಾಲೆಯ ಶಿಕ್ಷಕರಾದ ವಸಂತ, ಸಹನ, ಮೊಹಮ್ಮದ್ಅಲಿ ಹಾಗೂ ಮುಜೀದ್ ಪಾಷಾ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ವಾರ್ಷಿಕೋತ್ಸವ ಕಾರ್ಯಕ್ರಮ ಹಿನ್ನಲೆ ಶಾಲೆಯ ವಿದ್ಯಾರ್ಥಿಗಳನ್ನು ಭರತನಾಟ್ಯ, ಯಕ್ಷಗಾನ ಸೇರಿದಂತೆ ವಿವಿಧ ನೃತ್ಯ ಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೇರವೇರಿಸಿಕೊಟ್ಟರು.
ಸಂದರ್ಭದಲ್ಲಿ ಹರ್ಷ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅದ್ಯಕ್ಷ ಎಸ್.ಶಿವಕುಮಾರ್, ಉಪಾದ್ಯಕ್ಷೆ ಗಿರಿಜಾಶಿವಕುಮಾರ್, ಕಾರ್ಯದರ್ಶಿ ಹರ್ಷಶಿವಕುಮಾರ್, ಹರ್ಷ ಶಾಲೆ ಮುಖ್ಯಶಿಕ್ಷಕಿ ಎಲ್.ಪೂರ್ಣಿಮಾ, ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕಿ ಬಿಂಧುಶರ್ಮಾ, ಸಹ ಮುಖ್ಯಶಿಕ್ಷಕಿ ಪ್ರೀತಿ.ಕೆ.ಚೌಧರಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಜ್ಯೋತಿಕಾಮತ್, ಉಪಪ್ರಾಂಶುಪಾಲೆ ವೀಣಾ ಮತ್ತಿತರರು ಉಪಸ್ಥಿತರಿದ್ದರು.