ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವಾರದೊಳಗೆ ಸಭೆ- ಡಿಸಿ ಭರವಸೆ: ಧರಣಿ ತಾತ್ಕಾಲಿಕ ಸ್ಥಗಿತ

ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ಒಳಚರಂಡಿ ನೀರು ಹಾಗೂ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ವಿಷಯುಕ್ತ ತ್ಯಾಜ್ಯ ನೀರು ಅರ್ಕಾವತಿ ನದಿ ಪಾತ್ರದ ಕೆರೆಗಳ ಒಡಲು ಸೇರಿ ಅಂರ್ತಜಲ ಕಲುಷಿತಗೊಂಡಿದ್ದು,‌ ಕೆರೆಗಳ ಸೂಕ್ತ ಶುದ್ಧೀಕರಣಕ್ಕೆ ಕ್ರಮ ವಹಿಸದೇ ಇರುವುದನ್ನು ವಿರೋಧಿಸಿ ಹಾಗೂ 3ನೇ ಹಂತದ ಶುದ್ಧೀಕರಣ ಘಟಕಕ್ಕೆ ಒತ್ತಾಯಿಸಿ, ಅರ್ಕಾವತಿ ನದಿ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ತಹಶೀಲ್ದಾರ್ ಕಚೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು.

ವಿಚಾರ ತಿಳಿದು ಸತ್ಯಾಗ್ರಹದ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಭೇಟಿ ನೀಡಿ ಪ್ರತಿಭಟನಾನಿರತರೊಂದಿಗೆ ಮಾತನಾಡಿದರು.

ಈ ವೇಳೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ  ಮುಖಂಡರು, ವಿಷಕಾರಿ ತ್ಯಾಜ್ಯ ನೀರು ಚಿಕ್ಕತುಮಕೂರು ಮತ್ತು ದೊಡ್ಡತುಮಕೂರು ಕೆರೆಯ ಒಡಲು ಸೇರಿದ್ದು, ಸುತ್ತಮುತ್ತಲಿನ ಎರಡು ಗ್ರಾಮ ಪಂಚಾಯಿತಿಯ 17 ಗ್ರಾಮಗಳ ಅಂತರ್ಜಲ ನೀರು ಕುಡಿಯುವುದಕ್ಕೆ ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ. ಈ ಬಗ್ಗೆ ನಾಲ್ಕು ವರ್ಷಗಳಿಂದಲು ಹಲವಾರು ಪ್ರತಿಭಟನೆ, ಮನವಿಗಳನ್ನು ನೀಡುತ್ತಲೇ ಬರುತ್ತಿದ್ದೇವೆ. ಇದರಿಂದ ಯಾವ ಪ್ರಯೋಜನವಾಗಿಲ್ಲ. ಈ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದೆವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪನವರು ಈ ಹಿಂದೆ ನೀಡಿದ್ದ ಭರವಸೆಗಳು ಈಡೇರಿಸಿಲ್ಲ. ನೀರು ಶುದ್ಧೀಕರಣಕ್ಕೆ ಸಂಬಂಸಿದಂತೆ 150 ಕೋಟಿ ರೂ. ಯೋಜನಾ ವರದಿಯ ಮಾಹಿತಿ ಕುರಿತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಇಂತಹ ಯಾವುದೇ ಯೋಜನೆಯು ನಮ್ಮ ಇಲಾಖೆಯ ಗಮನಕ್ಕೆ ಬಂದೇ ಇಲ್ಲ. ಆದರೆ, ಶುದ್ಧೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಉತ್ತರ ನೀಡಿದ್ದಾರೆ.

ಈಗ 3ನೇ ಶುದ್ಧೀಕರಣ ಘಟಕದ ಅಗತ್ಯವಿದೆ. ಈ ಹೇಳಿಕೆಗಳು ಗೊಂದಲ ಮೂಡಿಸುತ್ತಿವೆ. ಈ ಹಿಂದೆ ಭರವಸೆ ನೀಡಿದಂತೆ ಈ ಪ್ರದೇಶಗಳಲ್ಲಿ ಕೊಳವೆ ಬಾವಿಗಳನ್ನು ತೆರೆಸಿಲ್ಲ. ಮಳೆ ನೀರು ಕೊಯ್ಲು ಅಳವಡಿಕೆಗೆ ಅನುದಾನ ಬಿಡುಗಡೆಯಾಗಿಲ್ಲ. ನೂರಾರು ಕೈಗಾರಿಕೆಗಳಿರುವ ದೊಡ್ಡಬಳ್ಳಾಪುರಕ್ಕೆ ಮಾಲಿನ್ಯ ನಿಯಂತ್ರಣ ಮಂಡಲಿ ಕಚೇರಿ ಇದುವರೆಗೂ ಸ್ಥಳಾಂತರವಾಗಿಲ್ಲ. ಚೆನ್ನೈ ಹಸಿರು ನ್ಯಾಯಮಂಡಲಿ ನೀಡಿರುವ ನಿರ್ದೇಶನಗಳನ್ನು ಸಹ ಇಲ್ಲಿನ ಅಕಾರಿಗಳು ಪಾಲಿಸುತ್ತಿಲ್ಲ ಎಂದು ಕಿಡಿಕಾರಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಸದನದಲ್ಲಿ ಚರ್ಚೆಯಾಗಿರುವಂತೆ ನಗರಸಭೆ ಒಳಚರಂಡಿ ಕಾಮಗಾರಿಯ ಹೊಸ ಮಾರ್ಗಗಳು ಹಾಗೂ ನವೀಕರಣ ಹಾಗೂ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪನೆಗೆ ಸೇರಿ ಅಂದಾಜು 137 ಕೋಟಿ ರೂ.ಗಳ ಪ್ರಸ್ತಾವನೆಯಾಗಿದ್ದು, ಇದು ಬರೀ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪನೆಗೆ ಮಾತ್ರ ಎಂದು ಬಿಂಬಿತವಾಗಿದ್ದು, ತಪ್ಪು ಸಂದೇಶ ರವಾನೆಯಾಗಿದೆ ಎಂದು ತಿಳಿಸಿದರು.

ಇದು ಸಂವಹನ ಕೊರತೆಯಿಂದಾಗಿದೆ ಹೊರತು ಉದ್ದೇಶ ಪೂರ್ವಕವಲ್ಲ. ಈ ಬಗ್ಗೆ  ಚರ್ಚೆ ನಡೆಸಿದ್ದೇವೆ. ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪನೆಗೆ 57 ಕೋಟಿ ರೂ. ಕ್ರಿಯಾಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ಎಸ್‌ಟಿಪಿ ಘಟಕಕ್ಕೆ ಜಾಗ ಸಹ ಗುರುತಿಸಲಾಗಿದೆ. ಈ ಹಿಂದೆ ಭರವಸೆ ನೀಡಿದಂತೆ ಕಾಮಗಾರಿಗಳು ವಿಳಂಬವಾಗಿರುವುದು ನಿಜ. ಆದರೆ, ಸ್ಥಗಿತವಾಗಿಲ್ಲ. ಕಾಡನೂರು ಬಳಿಯಿಂದ ಕೊಳವೆ ಬಾವಿಗಳ ಮೂಲಕ ನೀರುಣಿಸುವ 12 ಕೋಟಿ ರೂ.ಯೋಜನೆ ಸಹ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಮಳೆ ನೀರು ಕೊಯ್ಲು ಯೋಜನೆ ರೂಪಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವಾರದೊಳಗೆ ಸಭೆ: 

ಕುಡಿಯುವ ನೀರು ನಮ್ಮ ಹಕ್ಕು. ಆದರೆ ನಮಗೆ ವಿಷ ನೀರು ಕುಡಿಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಹಾಗೂ ಸರ್ಕಾರದ ನಡುವೆ ಆಗಿರುವ ಪತ್ರ ವ್ಯವಹಾರದ ಮಾಹಿತಿ ನೀಡಿ, ನಮಗೆ ಸಮಾಧಾನವಾದರೆ ಮಾತ್ರ ಸತ್ಯಾಗ್ರಹ ಕೈಬಿಡುತ್ತೇವೆ.

ಸಂಬಂಧಪಟ್ಟ ಇಲಾಖೆಯ ಸಚಿವರು ತಮಗೆ ಅರಿವಿಲ್ಲ ಎಂದು ಹೇಳುತ್ತಿರುವುದರಿಂದ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಶೀಘ್ರ ಸಭೆ ನಡೆಸಬೇಕು. ಶುದ್ಧೀಕರಣ ಘಟಕ ಸ್ಥಾಪನೆಗೆ ಸ್ಪಷ್ಟ ಭರವಸೆ ಬೇಕು. ಬಾಯಿ ಮಾತಿನ ಭರವಸೆಗಳು ನಮಗೆ ಬೇಡ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಖಂಡರ ಸಭೆ ಕರೆದು, ಕಾಮಗಾರಿಗಳ ಸ್ಥಿತಿಗತಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಇನ್ನೆರಡು ವಾರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಲು ವ್ಯವಸ್ಥೆ ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ಈ ವೇಳೆ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್, ತಾ.ಪಂ ಇಒ, ನಗರಸಭೆ ಪೌರಾಯುಕ್ತ, ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!