ಕಸ ವಿಂಗಡಣೆ ಘಟಕದ ಮೇಲೆ ಅಧಿಕಾರಿಗಳ ದಾಳಿ: ಶಾಲೆಯಿಂದ ಹೊರಗುಳಿದ 09 ಮಕ್ಕಳ ರಕ್ಷಣೆ

ಮಕ್ಕಳ ಸಹಾಯವಾಣಿಗೆ ಬ೦ದ ದೂರಿನ ಹಿನ್ನಲೆಯಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಬುಧವಾರ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಪಾಪನಹಳ್ಳಿ ಗ್ರಾಮದಲ್ಲಿರುವ ಕಸ ವಿಂಗಡಣೆ ಘಟಕದಲ್ಲಿ ಅನಿರೀಕ್ಷಿತ ದಾಳಿ ನಡೆಸಿ ತಪಾಸಣೆ ನಡೆಸಲಾಯಿತು.

ತಪಾಸಣೆ ವೇಳೆಯಲ್ಲಿ ಯಾವುದೇ ಮಕ್ಕಳು ಕೆಲಸ ನಿರ್ವಹಿಸುತ್ತಿರುವುದು ಪತ್ತೆಯಾಗಿಲ್ಲ. ಆದರೆ 09 ಮಕ್ಕಳು ಶಾಲೆಯಿಂದ ಹೊರ ಉಳಿದು ಪೋಷಕರ ಜೊತೆಯಲ್ಲಿ ವಾಸವಾಗಿದ್ದರು. ಇವರು ಮೂಲತಃ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯದವರು.

ತಪಾಸಣೆ ವೇಳೆ ಸಿಕ್ಕಂತಹ ಮಕ್ಕಳನ್ನು ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ಸರ್ವೋದಯ ಸರ್ವಿಸ್ ಸೊಸೈಟಿಯಲ್ಲಿ ಪುನರ್ ವಸತಿಗೊಳಿಸಿ, ದೇವನಹಳ್ಳಿಯ ಬಾಲಕಿಯರ ಬಾಲ ಮಂದಿರಕ್ಕೆ ಹಸ್ತಾಂತರಿಸಲಾಯಿತು.
ಮುಂದಿನ ಶುಕ್ರವಾರದಂದು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗುವುದು.

ಈ ತಪಾಸಣೆ ವೇಳೆ ಕಸ ವಿಂಗಡಣೆ ಘಟಕದಲ್ಲಿ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳು ಇಲ್ಲದಿರುವುದರಿಂದ ಅಧಿಕಾರಿಗಳ ಗಮನಕ್ಕೆ ಬಂದಿದೆ, ಮಕ್ಕಳು ಹಾಗೂ ಪೋಷಕರನ್ನು ಕಸ ವಿಂಗಡಣೆ ಘಟಕದಿಂದ ಸುಮಾರು 500 ಮೀಟರ್ ದೂರದಲ್ಲಿ ವಾಸಿಸುವುದಕ್ಕೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಶೆಡ್ ಗಳನ್ನು ನಿರ್ಮಿಸಿಕೊಡಬೇಕೆಂದು ಕಸ ವಿಂಗಡಣೆ ಘಟಕದ ಗುತ್ತಿಗೆದಾರರಿಗೆ ಅಧಿಕಾರಿಗಳು ಸೂಚಿಸಿದರು.

ಅನಿರೀಕ್ಷಿತ ತಪಾಸಣೆ ಹಾಗೂ ದಾಳಿಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ ಹೆಚ್.ಆರ್, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಸುಬ್ಬಾರಾವ್ ಎಸ್, ಕಾರ್ಮಿಕ ನಿರೀಕ್ಷಕ ಅಂಬಿಕಾ, ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿ ಸಂಜು, ಬಿಇಓ ಕಚೇರಿಯ ನಾಗಪ್ಪ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಸೌಮ್ಯ ಹಾಜರಿದ್ದರು.

Leave a Reply

Your email address will not be published. Required fields are marked *