ದೊಡ್ಡಬಳ್ಳಾಪುರ: ರಾಗಿ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಮೇವು ಭಸ್ಮವಾದ ಘಟನೆ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಕಾಡತಿಪ್ಪೂರು ಗ್ರಾಮದಲ್ಲಿಂದು ನಡೆದಿದೆ.
ಗ್ರಾಮದ ವೆಂಕಟಪ್ಪ ಎಂಬುವರಿಗೆ ಸೇರಿದ ರಾಗಿ ಬಣವೆಗೆ ಇಂದು ಮಧ್ಯಾಹ್ನ ಬೆಂಕಿ ತಗುಲಿದೆ. ಬೆಂಕಿಯ ಕೆನ್ನಾಲಿಗೆಗೆ ಬಣವೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಅಂದಾಜು 1 ಲಕ್ಷ ಮೌಲ್ಯದ ರಾಗಿ ಹುಲ್ಲು ಬೆಂಕಿಗಾಹುತಿಯಾಗಿದೆ. ಕೂಡಲೇ ರೈತ ವೆಂಕಟಪ್ಪ ಹಾಗೂ ಸ್ಥಳೀಯರು ಪಕ್ಕದಲ್ಲೇ ಇದ್ದ ಹೊಂಡದಿಂದ ನೀರು ತಂದು ಸುರಿದು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರೂ, ಬೆಂಕಿಯ ಕೆನ್ನಾಲಿಗೆ ನಿಮಿಷಗಳಲ್ಲೇ ಬಣವೆಯನ್ನು ಭಸ್ಮ ಮಾಡಿತು.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ರಾಗಿ ಹುಲ್ಲು ಸಂಪೂರ್ಣ ಭಸ್ಮವಾಗಿದೆ. ಜಾನುವಾರುಗಳಿಗೆ ಮೇವಿಲ್ಲದೇ ರೈತ ವೆಂಕಟಪ್ಪ ಪರದಾಡುತ್ತಿದ್ದಾರೆ.