ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ವಿಭಾಗವು ವಿದೇಶಿ ಮೂಲದ ಡ್ರಗ್ಸ್ ಸಾಗಾಟಗಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತನಿಂದ 2 ಕೋಟಿ ಮೌಲ್ಯದ ಎಂಡಿಎಂಎ ಹರಳು, ಬಿಳಿ ಹರಳು (676 ಗ್ರಾಂ) ಕಂದು ಹರಳು (926 ಗ್ರಾಂ), ಹಳದಿ ಹರಳು (112 ಗ್ರಾಂ) ಹಾಗೂ ಪಿಂಕ್ ಹರಳು (310 ಗ್ರಾಂ) ಸೇರಿದಂತೆ ಒಟ್ಟಾರೆಯಾಗಿ 2024ಗ್ರಾಂ ನಷ್ಟು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಮೊಬೈಲ್ ಫೋನ್ ಹಾಗೂ ತೂಕದ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ತಿಳಿಸಿದರು.
ಅಕ್ರಮವಾಗಿ ಡ್ರಗ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ದೇವನಹಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳು ಬಂಧಿಸಿದ್ದಾರೆ. ಇವರಿಂದ 80 ಲಕ್ಷ ರೂಪಾಯಿ ಮೌಲ್ಯದ 850 ಗ್ರಾಂನಷ್ಟು ಕೊಕೇನ್, 2 ಮೊಬೈಲ್, ವಿದ್ಯುನ್ಮಾನ ತೂಕ ಯಂತ್ರ, ಒಂದು ಬ್ಯಾಗ್ ಹಾಗೂ 85 ಜಿಪ್ ಕವರ್ ಗಳನ್ನು ಸಾಕ್ಷಿಯಾಗಿ ವಶಪಡಿಸಿಕೊಂಡಿದ್ದಾರೆ ಎಂದರು.
ಆಟದ ಮೈದಾನಗಳಲ್ಲಿ ಯುವಕರನ್ನು ಗುರಿಯಾಗಿಸಿಕೊಂಡು ಅಕ್ರಮವಾಗಿ ನಿಷೇಧಿತ ಕೊಕೇನ್ ಮಾರಾಟ ಮಾಡುತ್ತಿದ್ದ, ಇಬ್ಬರು ವಿದೇಶಿ ಪ್ರಜೆಗಳನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 6.50 ಲಕ್ಷ ರೂಪಾಯಿ ಮೌಲ್ಯದ 81 ಗ್ರಾಂ ಕೊಕೇನ್ ಹಾಗೂ 2,200 ರೂ. ನಗದು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಏ.3ರಂದು ಹೆಣ್ಣೂರು ಪೊಲೀಸ್ ಠಾಣೆ ಅಧಿಕಾರಿಗಳು ಹಲ್ಲೆಯ ವೈರಲ್ ವಿಡಿಯೋ ಜಾಡು ಹಿಡಿದು ತ್ವರಿತವಾಗಿ ಸಂತ್ರಸ್ತನನ್ನು ಪತ್ತೆಮಾಡಿದ್ದು, ಇದರಿಂದ 05 ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿ ಹಾಗೂ ಹಲ್ಲೆಗೊಳಗಾದವ ಇಬ್ಬರೂ ಪ್ರತಿಷ್ಠಿತ ಡೈರಿ ಕಂಪನಿಯ ಉದ್ಯೋಗಿಗಳಾಗಿದ್ದು, ಕೆಲಸದ ಸ್ಥಳದಲ್ಲಿನ ವೈಷಮ್ಯ ಹಾಗೂ ಹಣಕಾಸಿನ ವ್ಯವಹಾರದಿಂದಾಗಿ ಈ ಘಟನೆ ನಡೆದಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದರು.
ಲಕ್ಷಾಂತರ ರೂಪಾಯಿ ವಂಚನೆ ಹಗರಣದಲ್ಲಿ ಹಲಸೂರು ಠಾಣೆ ಪೊಲೀಸರು ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರು ಪ್ರತಿಷ್ಠಿತ ಕಂಪನಿಗಳ ಪ್ರತಿನಿಧಿಗಳೆಂದು ಹೇಳಿಕೊಂಡು ಚಾರಿಟಬಲ್ ಟ್ರಸ್ಟ್ ಗಳನ್ನು ಸಂಪರ್ಕಿಸಿ ಕೋಟ್ಯಾಂತರ ರೂಪಾಯಿ ಸಿಎಸ್ಆರ್ ಹಣವನ್ನು ದೇಣಿಗೆ ರೂಪದಲ್ಲಿ ನೀಡುವುದಾಗಿ ಹೇಳಿ 10-15 ಲಕ್ಷ ರೂಪಾಯಿ ಹಣವನ್ನು ಪ್ರಕ್ರಿಯೆ ಶುಲ್ಕವಾಗಿ ಪಡೆದು, ವಂಚನೆ ಮಾಡುತ್ತಿದ್ದರು. ಈ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.