ಯುವಸೌರಭ: ಯುವ ಪ್ರತಿಭಾವಂತರ ಪ್ರತಿಭೆಗಳನ್ನು ಗುರುತಿಸಿ  ಪ್ರೋತ್ಸಾಹ- ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್

ಯುವ ಪ್ರತಿಭಾವಂತರ ಪ್ರತಿಭೆಗಳನ್ನು ಗುರುತಿಸಿ  ಪ್ರೋತ್ಸಾಹ ನೀಡುವುದು ಯುವಸೌರಭ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ತಿಳಿಸಿದರು.

ನಗರದ ಜವಾಹರ್ ನವೋದಯ ವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಯುವಸೌರಭ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.‌

ಕನ್ನಡ ನಾಡು, ನುಡಿ, ಸಾಂಸ್ಕೃತಿಕ ಪರಂಪರೆಯ ಅರಿವು ಯುವಜನತೆಯಲ್ಲಿ ಇರಬೇಕು. ಕಲೆ ಮತ್ತು ಸಾಹಿತ್ಯದ  ಆಸಕ್ತಿಯು ಪರಿಪೂರ್ಣ ವ್ಯಕ್ತಿತ್ವದ ನಿರ್ಮಾಣದಲ್ಲಿ  ಸಹಕಾರಿ ಆಗುತ್ತದೆ ಎಂದರು.

ಜವಾಹರ್ ನವೋದಯ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವಿ.ಎಸ್.ಹೆಗಡೆ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಮತ್ತು ಸಂತಸದಾಯಕ ಕಲಿಕೆಗೆ ಸಾಂಸ್ಕೃತಿಕ ವೇದಿಕೆಗಳ ಅಗತ್ಯ ಇರುತ್ತದೆ. ನಮ್ಮ ಕನ್ನಡ  ನಾಡು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಇಂತಹ  ಪರಂಪರೆಯನ್ನು ಮುಂದಿನ‌ ತಲೆಮಾರಿಗೆ  ತಲುಪಿಸುವ. ಜವಾಬ್ದಾರಿಯನ್ನು ಯುವಜನತೆ  ನಿರ್ವಹಿಸಬೇಕಾಗಿದೆ. ಇದಕ್ಕಾಗಿ ಯುವಜನತೆ ಸಾಂಸ್ಕೃತಿಕ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಯುವ ಸೌರಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ಆರ್.ಚಕ್ರವರ್ತಿ ವಹಿಸಿದ್ದರು. ಸಮಾರಂಭದಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ  ವೆಂಕಟರಾಜು, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ. ಪಿ.ಗೋವಿಂದರಾಜು,   ನವೋದಯ ವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಜೆ.ಪಿ.ಉಪಾಧ್ಯೆ, ಜಾನಪದ ಕಲಾವಿದರುಗಳಾದ ಶ್ಯಾಕಲದೇವನಪುರ ರಾಮಚಂದ್ರಯ್ಯ, ವಿಜಯಕುಮಾರ್, ನವೋದಯ ವಿದ್ಯಾಲಯದ. ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಯುವ ಸೌರಭ ದೊಡ್ಡಬಳ್ಳಾಪುರ ಹಂಸವೇಣಿ ತಂಡದವರಿಂದ ಸಮೂಹ ನೃತ್ಯ, ದೇವನಹಳ್ಳಿ ಅರುಣ್ ಕುಮಾರ್ ತಂಡದವರಿಂದ ಸುಗಮಸಂಗೀತ,  ಅರದೇಶನಹಳ್ಳಿ ಅಂಜಲಿ ತಂಡದವರಿಂದ ವಚನಗಾಯನ, ಟಿ.ಅಗ್ರಹಾರ ದೀಪಿಕಾ ತಂಡದವರಿಂದ ಸಾಮಾಜಿಕ ನಾಟಕ ಪ್ರದರ್ಶನ, ಹೊಸಕೋಟೆ ನವೀನ್ ತಂಡದವರಿಂದ ತಮಟೆ ಮತ್ತು ದೇವನಹಳ್ಳಿ ಮಧು ತಂಡದವರಿಂದ ನಗಾರಿ   ವಾದ್ಯಗಳ ಕಾರ್ಯಕ್ರಮಗಳು ನಡೆದವು.

Leave a Reply

Your email address will not be published. Required fields are marked *