ಸಾಮಾಜಿಕ ಸೇವೆ ಮಾಡುವ ಮನಸ್ಸು ಎಲ್ಲರಿಗೂ ಬರುವುದಿಲ್ಲ. ನಿಷ್ಕಲ್ಮಷ ವ್ಯಕ್ತಿಗಳಿಂದ ಮಾತ್ರ ಸಾಮಾಜಿಕ ಕೆಲಸ ಸಾಧ್ಯ ಎಂದು ಪುಷ್ಪಾಂಡಜ ಮಠದ ದಿವ್ಯಜ್ಞಾನಾನಂದ ಶ್ರೀಗಳು ತಿಳಿಸಿದರು.
ನಗರದ ಭಗತ್ ಸಿಂಗ್ ಮೈದಾನದಲ್ಲಿ ಬಿಜೆಪಿ ಮುಖಂಡ ಸತ್ಯಪ್ರಕಾಶ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವ ಜನರಲ್ಲಿ ಆಹಾರ ಪದ್ಧತಿ ಸಮತೋಲನ ವಿಲ್ಲದೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿವೆ. ಹೀಗಾಗಿ
ಯುವ ಜನತೆ ಆರೋಗ್ಯದತ್ತ ಹೆಚ್ಚಿನ ಗಮನ ಹರಿಸಬೇಕು. ಇಂದಿನ ಆಹಾರ ಪದ್ಧತಿಯಲ್ಲಿಯೂ ಸಾಕಷ್ಟು ಏರುಪೇರುಗಳು ಆಗಿರುವುದರಿಂದ ಆರೋಗ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಿದೆ ಎಂದರು.
ಬಿಬಿಎಂಪಿ ಮಾಜಿ ಉಪಮೇಯರ್ ಹರೀಶ್ ಮಾತನಾಡಿ ಹಿಂದೆ ಸರಕಾರಗಳು ಉಚಿತವಾಗಿ ಶಿಕ್ಷಣ, ಆರೋಗ್ಯ ನೀಡುತ್ತಿತ್ತು. ಈಗ ಖಾಸಗಿ ವ್ಯಕ್ತಿಗಳು ನೀಡುತ್ತಿವೆ. ಇದರಿಂದ ಶಿಕ್ಷಣ ಹಾಗೂ ಆರೋಗ್ಯದ ಮೌಲ್ಯ ಕುಸಿದಿದೆ. ದೇಹದ ಎಲ್ಲಾ ಭಾಗಗಳು ಚೆನ್ನಾಗಿದ್ದರೆ ಮಾತ್ರ ಆರೋಗ್ಯ ಚೆನ್ನಾಗಿದೆ ಎಂದು ಅರ್ಥ. ಬೆಂಗಳೂರು ಡಯಾಬಿಟಿಕ್ ಸೆಂಟರ್ ಆಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಸುಮಾರು ೪೦೦ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಬಿಜೆಪಿ ಮುಖಂಡ ಕೆ.ವಿ ಸತ್ಯಪ್ರಕಾಶ್ ಮಾತನಾಡಿ ಮುಂದಿನ ದಿನಗಳಲ್ಲಿ ನಗರ ಸೇರಿದಂತೆ ಪ್ರತಿ ಹೋಬಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು. ಆರೋಗ್ಯವಿದ್ದರೆ ಮಿಕ್ಕೆದ್ದೆಲ್ಲಾ ಸರಾಗವಾಗಿ ಆಗುತ್ತದೆ ಆರೋಗ್ಯವೇ ಇಲ್ಲದಿದ್ದರೆ ಜೀವನದಲ್ಲಿ ಏನನ್ನೂ ಬಯಸಲು ಸಾಧ್ಯವಾಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ತಳಗವಾರ ಲಕ್ಷ್ಮೀನಾರಾಯಣ್, ಪ್ರಕಾಶ್, ಅಶ್ವತ್ಥನಾರಾಯಣಗೌಡ, ಪುಟ್ಟಬಸವರಾಜು, ಗೋಪಿ, ಶರತ್, ಅಶೋಕ್, ಜನಪರ ಮಂಜುನಾಥ, ಪ್ರದೀಪ್ ಮತ್ತಿತರರು ಇದ್ದರು.