ಕೋಲಾರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದ ವಿವೇಕಾನಂದ ವೃತ್ತದಲ್ಲಿ (ಡೂಂಲೈಟ್) ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ವಿವೇಕಾನಂದ ಮಿತ್ರ ಬಳಗದ ವತಿಯಿಂದ ಶ್ರೀರಾಮನ ಭಾವಚಿತ್ರ ಅನಾವರಣಗೊಳಿಸಿ ವಿಶೇಷ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈಗಾಗಲೇ ಶ್ರೀರಾಮರ 40 ಅಡಿ ಕಟೌಟ್ ನಿರ್ಮಿಸಲಾಗಿದ್ದು, ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಕಾರ್ಯಕ್ರಮದ ಬಳಿಕ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿಗೆ ಪ್ರಸಾದ, ಪಾನಕ, ಮಜ್ಜಿಗೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಜೆ ದೀಪೋತ್ಸವ ಹಾಗೂ ಪಟಾಕಿ ಶೋ ಅನ್ನು ವಿವೇಕಾನಂದ ಮಿತ್ರ ಬಳಗದ ವತಿಯಿಂದ ನಡೆಸಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಸಂಚಾಲಕ ಶಂಕರ್ ನಾಯಕ್, 500 ವರ್ಷಗಳ ನಂತರ ನಮಗೆ ಪುಣ್ಯದ ದಿನ ದೊರೆತಿದ್ದು, ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಶುಭ ಕಾರ್ಯದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಆ ರಾಮನು ಒಳ್ಳೆಯ ಸೌಭಾಗ್ಯವನ್ನು ಕರುಣಿಸಲಿ ಎಂದು ಆಶಿಸಿದರು.
ಕಾರ್ಯಕ್ರಮದ ಆಯೋಜಕ, ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಹೋರಾಟ, ಬಲಿದಾನದ ಪರಿಶ್ರಮದಿಂದಾಗಿ ಬಾಲರಾಮನ ಪ್ರತಿಷ್ಠಾಪನೆಯಾಗಿದೆ. ಹಿಂದೂಗಳ ಪ್ರತೀಕ ರಾಮನ ದೇವಸ್ಥಾನದ ಪ್ರಾಣಪ್ರತಿಷ್ಠಾಪನೆಯು ನಮ್ಮ ಕಾಲಘಟ್ಟದಲ್ಲಿ ಆಗಿರುವುದು ಸುದೈವದ ಸಂಗತಿಯಾಗಿದೆ. ಪ್ರತಿ ಮನೆಯಲ್ಲಿಯೂ ದೀಪಾವಳಿ, ಯುಗಾದಿಯಂತೆ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್ಎಸ್ಎಸ್ ವಿಭಾಗ ಪ್ರಚಾರಕ ಪ್ರಶಾಂತ್, ಪ್ರಾಂತ್ಯ ಪ್ರಚಾರಕ ಸಿದ್ದಣ್ಣ, ನಗರಸಭೆ ಸದಸ್ಯರಾದ ರಾಕೇಶ್, ಮಂಜುನಾಥ್, ಟಿಲ್ಲಿ ಮಂಜುನಾಥ್, ಮುಖಂಡರಾದ ಸಾ.ಮಾ.ಬಾಬು, ನಾಮಲ್ ಮಂಜು, ಆಟೋ ರಮೇಶ್, ನಾಗೇಂದ್ರ, ಸತ್ಯನಾರಾಯಣ, ಮಧು, ಸಂಪರ್, ಸತೀಶ್, ಸಂದೀಪ್ ಮುಂತಾದವರು ಇದ್ದರು.