ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಎನ್ನುವಂತೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯ. ಅದರಲ್ಲೂ ಕ್ರೀಡೆಗಳು ದೇಹಕ್ಕೂ, ಮನಸ್ಸಿಗೂ, ಮೆದುಳಿಗೂ ಉತ್ತಮ ವ್ಯಾಯಾಮವಿದ್ದಂತೆ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಂಡು ದೇಹವನ್ನು ದಂಡಿಸಿ ಬಲಾಢ್ಯರಾಗಿ ಬೆಳೆಯಬೇಕು ಎಂದು ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ರವಿ ಮಾವಿನಕುಂಟೆ ಹೇಳಿದರು.
ನಗರದ ಎಂ.ಎಸ್.ವಿ ಪಬ್ಲಿಕ್ ಶಾಲೆಯಲ್ಲಿ 2023-24ನೇ ಸಾಲಿನ ಶಾಲಾ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸೋಲು ಗೆಲುವು ಸಹಜ ಎನ್ನುವ ಸತ್ಯವನ್ನು ಅರಿತು ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಉತ್ತಮ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದರ ಮೂಲಕ ನಾಯಕತ್ವದ ಗುಣಗಳನ್ನು ಮೇಳೈಸಿಕೊಂಡು ನಾಡಿಗೆ, ಹೆತ್ತವರಿಗೆ ಹಾಗೂ ಶಾಲೆಗೆ ಹೆಮ್ಮೆ ತರುವಂತಹ ಸತ್ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.
ಶಾಲಾ ಸಂಸ್ಥಾಪಕರಾದ ಎ. ಸುಬ್ರಮಣ್ಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಸೋಲು- ಗೆಲುವು ಸಾಮಾನ್ಯ. ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಕ್ರೀಡಾ ಮನೋಭಾವದಿಂದ ಆಡಬೇಕು. ಮಕ್ಕಳಲ್ಲಿ ಕ್ರೀಡಾ ಸ್ಫೂರ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಇಂದು ನಮ್ಮ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವವನ್ನು ಆಚರಿಸುತ್ತಿದ್ದೇವೆ. ಮಕ್ಕಳಲ್ಲಿ ಉತ್ತಮವಾದ ದೈಹಿಕ, ಬೌದ್ಧಿಕ, ನೈತಿಕ ಮತ್ತು ಗುಣಾತ್ಮಕ ಅಂಶಗಳನ್ನು ಬೆಳೆಸುವಲ್ಲಿ ನಮ್ಮ ಶಾಲೆಯು ಕಳೆದ ಸುಮಾರು ವರ್ಷಗಳಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಆಶಯ. ಈ ಮನೋಭೂಮಿಕೆಯ ಅಡಿಯಲ್ಲಿ ದೇಶದ ಭವಿಷ್ಯತ್ತಿನ ನೇತಾರರಾದ ತಾವುಗಳು ಶಿಸ್ತು, ಗಾಂಭೀರ್ಯಗಳೊಡನೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ನಾಡಿನ ಧೀಮಂತ ನಾಯಕರಾಗಿ ಬೆಳೆಯಬೇಕೆಂದು ಮಕ್ಕಳಿಗೆ ಸ್ಫೂರ್ತಿದಾಯಕ ಮಾತುಗಳನ್ನು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಪಥ ಸಂಚಲನ, ಕ್ರೀಡಾ ಜ್ಯೋತಿ ಪ್ರಜ್ವಲನ, ಪುಟಾಣಿ ಮಕ್ಕಳ ಮ್ಯಾರಾಥಾನ್, ಡ್ರಿಲ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶಾಲಾ ಕ್ರೀಡಾ ಮಹೋತ್ಸವ ವಿಜೃಂಭಣೆಯಿಂದ ಪ್ರಾರಂಭಗೊಂಡಿತು.
ಮಕ್ಕಳು ಪ್ರದರ್ಶಿಸಿದ ಯೋಗ ಹಾಗೂ ಟೇಕ್ವಾಂಡೋ ಪ್ರದರ್ಶನ ನೆರೆದಿದ್ದ ಪೋಷಕರ ಮನಗೆದ್ದಿತು. ವಿಜೇತರಿಗೆ ಪ್ರಶಸ್ತಿಪತ್ರ ಹಾಗೂ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕರಾದ ಸುಬ್ರಮಣ್ಯ.ಎ, ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಎಸ್. ಸ್ವರೂಪ್, ಶಾಲೆಯ ಟ್ರಸ್ಟಿಗಳಾದ ನಯನಾ ಸ್ವರೂಪ್, ಪ್ರಾಂಶುಪಾಲರಾದ ರಮ್ಯಾ.ಬಿ.ವಿ ಹಾಗೂ ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.
Nice pic