ನಗರದಲ್ಲಿ ಪೊಲೀಸರಿಂದ ಫೂಟ್ ಪೆಟ್ರೋಲಿಂಗ್

ಅಪರಾಧ ಪ್ರಕರಣಗಳ ನಿಯಂತ್ರಣ, ಕಟ್ಟುನಿಟ್ಟಿನ ಸಂಚಾರಿ ನಿಯಮಗಳ ಜಾರಿಗೆ ಟೊಂಕ‌ ಕಟ್ಟಿರುವ ಪೊಲೀಸರು ನಗರದ ವಿವಿಧೆಡೆ ನಿತ್ಯ ಫೂಟ್ ಪ್ಯಾಟ್ರೋಲಿಂಗ್(ಪಥ ಸಂಚಲನ) ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಬುಧವಾರ ರಾತ್ರಿ ನಗರ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಜಂಟಿಯಾಗಿ ಡಿವೈಎಸ್ಪಿ ಪಿ.ರವಿ ಅವರ ನೇತೃತ್ವದಲ್ಲಿ ಫೂಟ್ ಪ್ಯಾಟ್ರೋಲಿಂಗ್ ನಡೆಸಿದರು.

ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದಿಂದ ಆರಂಭವಾದ ಪಥ ಸಂಚಲನವು ಬಸ್ ನಿಲ್ದಾಣ, ವಿವೇಕಾನಂದ ರಸ್ತೆ, ಚೌಕದ ಮೂಲಕ ಮುಗವಾಳಪ್ಪ ವೃತ್ತ, ಶಾಂತಿನಗರ, ಜಾಲಪ್ಪ ಕಾಲೇಜುವರೆಗೂ ಸಾಗಿತು.

ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ಡಿ ನಿಲ್ಲಿಸಿದ್ದ ಬಸ್,ಆಟೊ, ಇತರೆ ವಾಹನ ಚಾಲಕರಿಗೆ ಸಂಚಾರಿ ನಿಯಮ ಪಾಲನೆ ಮಾಡುವಂತೆ ತಿಳಿಹೇಳಿದರು. ಬೀದಿ ಬದಿ ವ್ಯಾಪಾರಿಗಳು ರಸ್ತೆಗೆ ಬಂದು ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಿದರು. ಎಲ್ಲೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದ ಆಟೊ ಚಾಲಕರು, ದಾರಿಯಲ್ಲಿ ಬೇಕಾಬಿಟ್ಟಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಚಾಲಕರಿಗೆ ವಾರ್ನಿಂಗ್ ನೀಡಿದರು.

ಡಿವೈಎಸ್ಪಿ ಪಿ. ರವಿ, ಗ್ರಾಮಾಂತರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಡಿ.ಎಂ. ಮುನಿಕೃಷ್ಣ, ನಗರ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಎ.ಅಮರೇಶ ಗೌಡ ಅವರು ದಾರಿಯುದ್ದಕ್ಕೂ ಜನರಿಗೆ ಅರಿವು ಮೂಡಿಸುತ್ತಾ ಸಾಗಿದರು.

ಅಂಗಡಿಗಳಲ್ಲಿ ತಪಾಸಣೆ

ಜಾಲಪ್ಪ ಕಾಲೇಜು ಬಳಿ ಪೊಲೀಸರು ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ಕೈಗೊಂಡರು. 100ಮೀ ವ್ಯಾಪ್ತಿಯಲ್ಲಿ ಗುಟ್ಕಾ, ಸಿಗರೇಟು ಮಾರಾಟ ಮಾಡುತ್ತಿದ್ದ ಅಂಗಡಿಗಳಿಂದ ತಂಬಾಕು ವಸ್ತುಗಳನ್ನು ವಶಪಡಿಸಿಕೊಂಡರು. ಜೊತೆಗೆ ಇನ್ನು ಮುಂದೆ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರು. ಈ ವೇಳೆ ಸ್ಥಳೀಯರು ಪೊಲೀಸರಿಗೆ ದೂರಿನ ಸುರಿಮಳೆಗೈದರು.

ಕಾಲೇಜು ಬಿಡುವ ಹೊತ್ತಿಗೆ (ಸಂಜೆ 4ಗಂಟೆ) ಪುಂಡರು ವ್ಹೀಲಿಂಗ್ ಮಾಡುತ್ತಾರೆ. ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಹೆಚ್ಚಾಗಿದೆ. ನಿತ್ಯ ಆ ಸಮಯದಲ್ಲಿ ಪೊಲೀಸರನ್ನು ಮಫ್ತಿಯಲ್ಲಿ‌ ನಿಯೋಜಿಸಬೇಕು ಎಂದು ಮನವಿ ಮಾಡಿದರು. ಇದಲ್ಲದೇ ಕಾಲೇಜು ಮುಂದಿನ ರಸ್ತೆಯ ಹಂಪ್ ಗಳಿಗೆ ಬ್ಲಿಂಕಿಂಗ್ ಲೈಟ್ಸ್ ಅಳವಡಿಸುವಂತೆಯೂ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿವೈಎಸ್ಪಿ ರವಿ ಅವರು, ಕಾಲೇಜು ಆಡಳಿತ ಮಂಡಳಿಯವರು ತಕ್ಷಣವೇ ರಸ್ತೆಯ ಹಂಪ್ ಗಳಿಗೆ ರೇಡಿಯಂ ಅಥವಾ ಬ್ಲಿಂಕಿಂಗ್ ಲೈಟ್ಸ್ ಅಳವಡಿಸಬೇಕು. ಪೊಲೀಸ್ ಸಿಬ್ಬಂದಿ ಇನ್ನು‌ಮುಂದೆ ಗಸ್ತು ಆರಂಭಿಸಲಿದ್ದಾರೆ. ಸ್ಥಳೀಯರು ಯಾವುದೇ ಸಮಸ್ಯೆ ಇದ್ದಲ್ಲಿ‌ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಿ ತಿಳಿಸಬಹುದು. ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *