ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ನಮ್ಮ ಸರ್ಕಾರ. ಇನ್ನೂ 5 ಸಾವಿರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುವುದು. ನಾವು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಮುನ್ನುಡಿ ಬರೆದೆವು. ಆದರೆ ಬಿಜೆಪಿಯವರು ನಮ್ಮ ಕೆಲಸವನ್ನು ಅವರು ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು “ಅಟ್ಟಿಕ್ಕಿದವರಿಗಿಂತ ಬೊಟ್ಟಿಕ್ಕಿದವರು ಮೇಲು” ಎನ್ನುವ ಗಾಧೆ ಮಾತಿನಂತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸಿದ್ದ “ಬಂಜಾರ ಭವನ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳಿಂದ ನಾವೆಲ್ಲಾ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದೆವು. ಬ್ರಿಟಿಷರು ಬಂದ ಮೇಲೆ ಶಿಕ್ಷಣದ ಅವಕಾಶಗಳು ತೆರೆದುಕೊಂಡವು. ಡಾ.ಬಿ.ಆರ್ ಅಂಬೇಡ್ಕರ್ ಅವರ ಕಾರಣದಿಂದ ವಂಚಿತರೆಲ್ಲರಿಗೂ ಶಿಕ್ಷಣ ಮೂಲಭೂತ ಹಕ್ಕಾಯಿತು. ಈ ಕಾರಣಕ್ಕೇ ನಾವೆಲ್ಲರೂ ಶಿಕ್ಷಿತರಾಗಬೇಕು. ಶಿಕ್ಷಣ ನಮ್ಮನ್ನು ಸ್ವಾಭಿಮಾನಿಯನ್ನಾಗಿಸುತ್ತದೆ. ಸ್ವಾಭಿಮಾನಿಯಾದರೆ ಶೋಷಣೆಯಿಂದ ತಪ್ಪಿಸಿಕೊಳ್ಳಬಹುದು ಎಂದರು.
ಬಂಜಾರ ಸಮುದಾಯದ ಅಭಿವೃದ್ಧಿಗೆ ಬಜೆಟ್ ನಲ್ಲಿ ರೂ.275 ಕೋಟಿ ನೀಡಲಾಗಿತ್ತು. ಸೇವಾಲಾಲ್ ವಸತಿ ಶಾಲೆ ಸೇರಿದಂತೆ ಇನ್ನಿತರೆ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಣ ನೀಡುತ್ತೇನೆ ಎಂದು ಭರವಸೆ ನೀಡಿದರು.