390 ಕೋಟಿ ರೂ. ಹೂಡಿಕೆಯ ಐಬಿಸಿ ಗಿಗಾ ಫ್ಯಾಕ್ಟರಿಗೆ ಶಂಕುಸ್ಥಾಪನೆ: 9 ತಿಂಗಳಲ್ಲಿ ಬ್ಯಾಟರಿ ಉತ್ಪಾದನೆ ಆರಂಭ, ಶೇ.20ರಷ್ಟು ರಫ್ತು- ಸಚಿವ ಎಂ ಬಿ ಪಾಟೀಲ

ದೇವನಹಳ್ಳಿ: ವಿದ್ಯುತ್ ಚಾಲಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಬೇಕಾಗುವ ಲೀಥಿಯಂ-ಅಯಾನ್ ಬ್ಯಾಟರಿಗಳನ್ನು ತಯಾರಿಸುವ ಇಂಟರ್ ನ್ಯಾಷನಲ್ ಬ್ಯಾಟರಿ ಕಂಪನಿಯ (ಐಬಿಸಿ) ಗಿಗಾ ಫ್ಯಾಕ್ಟರಿಯ ಸ್ಥಳೀಯ ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕಂಪನಿಯು ತಯಾರಿಸುವ ಬ್ಯಾಟರಿಗಳ ಪ್ರದರ್ಶನವನ್ನು ಕೂಡ ಏರ್ಪಡಿಸಲಾಗಿತ್ತು.

ಮಹಾನಗರ ಗ್ಯಾಸ್ ಲಿಮಿಟೆಡ್ ಜತೆ ಸೇರಿ ಐಬಿಸಿ ಈ ಕಾರ್ಖಾನೆಯನ್ನು ಸ್ಥಾಪಿಸುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, `ದೇವನಹಳ್ಳಿಯ ಕೆಐಎಡಿಬಿ ಐಟಿಐಆರ್ ಕೈಗಾರಿಕಾ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಉತ್ಪಾದನಾ ಘಟಕಕ್ಕೆ ಕಂಪನಿಯು ಮೊದಲ ಹಂತದಲ್ಲಿ 390 ಕೋಟಿ ರೂ. ಹೂಡಿಕೆ ಮಾಡಲಿದ್ದು, 300 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇಲ್ಲಿ ಉತ್ಪಾದಿಸಲಾಗುವ ಬ್ಯಾಟರಿಗಳ ಪೈಕಿ ಶೇಕಡ 20ರಷ್ಟನ್ನು ಅಮೆರಿಕ ಮತ್ತು ಯೂರೋಪಿನ ದೇಶಗಳಿಗೆ ರಫ್ತು ಮಾಡಲಾಗುವುದು’ ಎಂದಿದ್ದಾರೆ.

ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಐಬಿಸಿ ಘಟಕಕ್ಕೆ 10 ಎಕರೆ ಜಾಗ ಕೊಟ್ಟಿದ್ದು, ಫಾಕ್ಸ್-ಕಾನ್ ಸಂಸ್ಥೆಯ ಸಮೀಪದಲ್ಲೇ ಇದು ಅಸ್ತಿತ್ವಕ್ಕೆ ಬರಲಿದೆ. ಮುಂದಿನ ಒಂಬತ್ತು ತಿಂಗಳಲ್ಲಿ ಈ ಘಟಕವು ಕಾರ್ಯಾಚರಣೆ ಆರಂಭಿಸಲಿದ್ದು, ಇಲ್ಲೇ ಬ್ಯಾಟರಿಗಳನ್ನು ತಯಾರಿಸಿ, ಇಲ್ಲಿಂದಲೇ ದೇಶ-ವಿದೇಶಗಳಿಗೂ ಕಳಿಸಿ ಕೊಡಲಿದೆ ಎಂದು ಅವರು ಮಾಹಿತಿ ನೀಡಿದರು.

ಸದ್ಯಕ್ಕೆ ಐಬಿಸಿ ಕಂಪನಿಯು ದಕ್ಷಿಣ ಕೊರಿಯಾದಲ್ಲಿ ಸೆಲ್ಸ್ ಉತ್ಪಾದಿಸಿ, ಅವುಗಳನ್ನು ಇಲ್ಲಿಗೆ ತಂದು ಪೂರ್ಣ ಪ್ರಮಾಣದ ಬ್ಯಾಟರಿಗಳನ್ನು ತಯಾರಿಸುತ್ತಿದೆ. ಈ ಘಟಕ ಕಾರ್ಯಾರಂಭ ಆದ ನಂತರ ಇಲ್ಲೇ ಸೆಲ್ ಗಳ ಉತ್ಪಾದನೆ ಕೂಡ ಆಗಲಿದೆ. ಇದು ದೇಶದಲ್ಲೇ ಮೊದಲ ಸೆಲ್ ಉತ್ಪಾದನಾ ಘಟಕವಾಗಲಿದೆ. ಮುಂಬರುವ ದಿನಗಳಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳ ಜತೆಗೆ ಉಳಿದ ವಾಹನಗಳಿಗೂ ಇದು ಬ್ಯಾಟರಿ ಪೂರೈಸಲಿದೆ ಎಂದು ಅವರು ವಿವರಿಸಿದರು.

ಭಾರತದಲ್ಲಿ ಶಿಕ್ಷಣ ಹಾಗೂ ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ತರಬೇತಿ ಪಡೆದ ಯುವ ಉದ್ಯಮಿಗಳು ಐಬಿಸಿ ಕಂಪನಿ ಸ್ಥಾಪಿಸಿ, ಬ್ಯಾಟರಿಗಳ ವಿನ್ಯಾಸ, ಉತ್ಪಾದನೆಗೆ ಆದ್ಯತೆ ಕೊಟ್ಟಿದ್ದಾರೆ. ಹಾಗೆಯೇ ಭಾರತದ ಅಗತ್ಯಕ್ಕೆ ಹೊಂದುವ ಹಾಗೆ ವಿನ್ಯಾಸ ಮಾಡಿರುವುದು ಮೆಚ್ಚುವಂತಹದ್ದು ಎಂದು ಸಚಿವರು ಶ್ಲಾಘಿಸಿದರು

ಇದು ಭಾರತದಲ್ಲಿ ಇಂತಹ ಪ್ರಪ್ರಥಮ ಯೋಜನೆಯಾಗಿದೆ. ಇಲ್ಲಿ ರೆಟ್ರೋಫಿಟ್ ಬ್ಯಾಟರಿಗಳನ್ನು ಕೂಡ ತಯಾರಿಸಲಾಗುವುದು. ಇದರಿಂದ ರಾಜ್ಯದ ಆರ್ಥಿಕತೆಗೆ ಹೊಸ ಬಲ ಬರಲಿದ್ದು, ಚೀನಾದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಅವರು ವಿವರಿಸಿದ್ದಾರೆ.

ನಾವು ಸುಸ್ಥಿರ, ತಂತ್ರಜ್ಞಾನಾಧಾರಿತ ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ಆರ್ಥಿಕತೆಯನ್ನು ಕಟ್ಟುವ ಗುರಿ ಇಟ್ಟುಕೊಂಡಿದ್ದೇವೆ. ಇನ್ನೊಂದೆಡೆಯಲ್ಲಿ, ಹಸಿರು ಇಂಧನ ಬಳಕೆಗೆ ಉತ್ತೇಜನ ಕೊಡುತ್ತಿದ್ದೇವೆ. ಐಬಿಸಿ ಗಿಗಾ ಫ್ಯಾಕ್ಟರಿಯು ಈ ಪರಿವರ್ತನೆಯ ಮೈಲುಗಲ್ಲಾಗಿದೆ. ಇದರಿಂದಾಗಿ ರಾಜ್ಯವು ಇಂಧನ ಕ್ಷೇತ್ರದ ಸಂಶೋಧನೆಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಐಬಿಸಿ ಸಿಇಒ ಪ್ರಿಯದರ್ಶಿ ಪಾಂಡಾ, ಸಿಎಸ್ಒ ಸುಂದರ್ ರಾಮಮೂರ್ತಿ, ಕುನಾಲ್ ಜೈನ್, ಜಾಸ್ ಟೆಕ್ ಅಧ್ಯಕ್ಷ ಜೇಸನ್ ಚುಂಗ್, ಉಪಾಧ್ಯಕ್ಷ ಡ್ಯಾನಿ ಚುಂಗ್, ಮಹಾನಗರ್ ಗ್ಯಾಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಆಶು ಸಿಂಘಾಲ್, ಡೆಪ್ಯುಟಿ ಎಂಡಿ ಸಂಜಯ್ ಶೇಂದೆ ಉಪಸ್ಥಿತರಿದ್ದರು.

Ramesh Babu

Journalist

Recent Posts

ಮಳೆಗಾಗಿ ಆಚರಣೆಗಳ ಮೊರೆ: ಬರದ ನಡುವೆ ಭರವಸೆಯ ಸಂಪ್ರದಾಯಗಳು

ಮಳೆ ಎನ್ನುವುದು ರೈತನ ಬದುಕಿನ ಜೀವನಾಡಿ. ಮುಂಗಾರು ವಿಳಂಬವಾದಾಗ ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ರೈತರು ಮಾತ್ರವಲ್ಲ, ಗ್ರಾಮೀಣ ಜೀವನವೇ…

9 hours ago

ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಾರು–ಅಶೋಕ್ ಲೇಲ್ಯಾಂಡ್ ನಡುವೆ ಅಪಘಾತ

ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಳೆದರಾತ್ರಿ ಕಾರು ಹಾಗೂ ಅಶೋಕ್ ಲೇಲ್ಯಾಂಡ್ ಸರಕು ವಾಹನದ ನಡುವೆ…

1 day ago

ರಾಷ್ಟ್ರೀಯ ಸಾಹಿತ್ಯ ಸೌರಭದಲ್ಲಿ ಕವಿ ರವಿಕುಮಾರ್ ಅವರ ‘ಅಂಚಿನ ತೊರೆ’ ಕವನ ಸಂಕಲನ ಲೋಕಾರ್ಪಣೆ

ಉಡುಪಿ: ಉಡುಪಿ ಜಿಲ್ಲೆಯ ಕೋಟದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಜ್ಞಾನಗಂಗಾ ಸಾಹಿತ್ಯ…

2 days ago

ನಾಡಕಚೇರಿ ಸರ್ವರ್ ಪದೇ ಪದೇ ಡೌನ್: ರಾಜ್ಯಾದ್ಯಂತ ಜನರಿಗೆ ಸಂಕಷ್ಟ – ತುರ್ತು ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ

ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…

2 days ago

ಮಧುರನಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಷಾಡ ಏಕಾದಶಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…

2 days ago

ಬಾಶೆಟ್ಟಿಹಳ್ಳಿ ಯೂ-ಟರ್ನ್‌ನಲ್ಲಿ ಕೆಟ್ಟು ನಿಂತ ಟ್ರಕ್: ಯಲಹಂಕ–ಹಿಂದೂಪುರ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯುವ ವೇಳೆ ಟ್ರಕ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ…

3 days ago