ಮಕ್ಕಳು ಪರಿಸರದೊಂದಿಗೆ ಬೆರೆತಷ್ಟು ಅದರ ಮೇಲಿನ ಕಾಳಜಿ ಹೆಚ್ಚಾಗುತ್ತದೆ – ಚಿದಾನಂದ್ ಮೂರ್ತಿ

ಇಂದು ವಿಶ್ವ ಪರಿಸರ ಶಿಕ್ಷಣ ದಿನದ ಭಾಗವಾಗಿ ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್, ಐ.ಆರ್.ಡಿ ಹಾಗು ಟಿ.ಡಿ.ಯು ಸಂಸ್ಥೆಗಳ ಸಹಯೋಗದಲ್ಲಿ ಆರೂಢಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನಮ್ಮ ಸುತ್ತ ಮುತ್ತಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಶಂಸಿಸಲು ಸಹಾಯ ಮಾಡುವ ಮತ್ತು ಅನುಭವ, ವೀಕ್ಷಣೆ, ಪ್ರಯೋಗಗಳು ಮತ್ತು ಹೊರಾಂಗಣ ಕಲಿಕೆಯ ವ್ಯಾಪ್ತಿಯೊಂದಿಗೆ ಚಟುವಟಿಕೆಗಳ ಮೂಲಕ ಮುಂದಿನ ಪೀಳಿಗೆಗೆ ಆ ಸಂಪನ್ಮೂಲಗಳನ್ನು ಹೇಗೆ ಸಂರಕ್ಷಿಸುವುದು ಎಂಬುದನ್ನು ಕಲಿಯಲು, ಪರಿಸರದಲ್ಲಿ ಅಗತ್ಯ ಆಸಕ್ತಿಯನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುವ ಕಾರ್ಯಕ್ರಮವನ್ನು ಮಾಕಳಿ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೃಷ್ಣೇಗೌಡ ಮಾತನಾಡಿ, ಬೇಸಿಗೆಯಲ್ಲಿ ಅಸಹಜವಾಗಿ ಕಾಡಿಗೆ ಬೆಂಕಿ ಬೀಳುತ್ತಿದ್ದು, ಇದು ಮಾನವ ನಿರ್ಮಿತವಾಗಿದೆ ಇದರ ಬಗ್ಗೆ ಮಕ್ಕಳು ಇಂದಿನಿಂದಲೆ ಅರಿವು ಮೂಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಟಿ.ಡಿ.ಯು ನ ಉಪನ್ಯಾಸಕರಾದ ಡಾ. ಅಬ್ದುಲ್ ಕರೀಂ ಮಾತನಾಡಿ, ನಮ್ಮ ವಿದ್ಯಾರ್ಥಿ ಜೀವನದಲ್ಲಿ ಈ ರೀತಿ ಕಾಡಿನಲ್ಲಿ ಸುತ್ತಾಡುವ ಅವಕಾಶಗಳು ಸಿಗುತ್ತಿರಲಿಲ್ಲ. ಇಂದಿನ ಮಕ್ಕಳಿಗೆ ಈ ರೀತಿ ಅವಕಾಶವಿದ್ದರೂ ಉತ್ತಮ ಅರಣ್ಯ ಉಳಿದಿಲ್ಲ .ಅವುಗಳನ್ನು ಉಳಿಸಿಕೊಳ್ಳುವ ಕಡೆ ಗಮನಹರಿಸಬೇಕು ಎಂದು ಹೇಳಿದರು.

ಏ.ಆರ್.ಡಿ ಯ ಮಾನವಶಾಸ್ತ್ರಜ್ಞರಾದ ಡಾ. ರೊಮೈನ್ ಸಿಮೆನೆಲ್ ಮಾತನಾಡಿ, ಹಾರ, ಆಟಿಕೆ ತಯಾರಿಕೆ, ಸಸ್ಯಗಳೊಂದಿಗೆ ಸಂಗೀತವನ್ನು ಅನ್ವೇಷಿಸುವುದು, ಸಸ್ಯಗಳಿಂದ ಬಣ್ಣ, ಸಸ್ಯಗಳ ಔಷಧೀಯ ಉಪಯೋಗಗಳು ಈ ಎಲ್ಲಾ ಚಟುವಟಿಕೆಗಳ ಮೂಲಕ ಮಕ್ಕಳಿಗೆ ನಲಿ ಕಲಿಯ ಪ್ರಯೋಗದೊಂದಿಗೆ ಕಾನನದಲ್ಲಿ ಒಳಗೊಳಿಸುವ ಪ್ರಯತ್ನ ನಮ್ಮದಾಗಿದೆ ಎಂದು ತಿಳಿಸಿದರು.

ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಚಿದಾನಂದ್ ಮೂರ್ತಿ ಮಾತನಾಡಿ, ಮಕ್ಕಳು ಪರಿಸರದೊಂದಿಗೆ ಬೆರೆತಷ್ಟು ಅದರ ಮೇಲಿನ ಕಾಳಜಿ ಹೆಚ್ಚಾಗುತ್ತದೆ. ಆದ ಕಾರಣ ಶಿಕ್ಷಣದ ಭಾಗವಾಗಿ ಮಕ್ಕಳಿಗೆ ಪರಿಸರ ಶಿಕ್ಷಣವನ್ನು ಕಲಿಸುವ ಉದ್ದೇಶದಿಂದ ಸಸ್ಯ ವಿಜ್ಞಾನಿಗಳೊಂದಿಗೆ ಪರಿಸರವಾದಿಗಳೊಂದಿಗೆ ಮಕ್ಕಳನ್ನು ತೊಡಗಿಸಿ ಸಸ್ಯಗಳ ಬಗ್ಗೆ ಪರಿಸರ ಸಂರಕ್ಷಣೆಯ ಬಗ್ಗೆ ತಿಳಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.

ಸಸ್ಯ ವಿಜ್ಞಾನಿಗಳಾದ ಆರ್. ಗಣೇಶನ್(ಏಟ್ರಿ), ವೈಷ್ಣವಿ (ಏಟ್ರಿ), ಟಿ.ಡಿ.ಯುನಿವರ್ಸಿಟಿಯ ಅಮ್ರಿತ, ಅರುಣ್, ಸುದೇಶ್ನಾ ಪ್ರಧಾನ್ (ಐ.ಆರ್.ಡಿ), ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ನ ಮುರುಳಿ, ದಿವಾಕರ್, ನವೀನ್ ಮತ್ತು ಆರೂಢಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ. ಸಿದ್ದರಾಮಪ್ಪ ಹಾಗು ಸಹ ಶಿಕ್ಷಕರಾದ ಶ್ರೀನಿವಾಸ್, ಕಾವ್ಯ, ಮಾಲಾಶ್ರೀ ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನರಸಿಂಹಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *