ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿದ ಮತದಾರ ಬಂಧುಗಳಿಗೆ, ಪಕ್ಷದ ಪರವಾಗಿ ಹಗಲಿರುಳು ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಪಕ್ಷದ ಎಲ್ಲಾ ಮುಖಂಡರಿಗೂ ಧನ್ಯವಾದಗಳನ್ನು ತಿಳಿಸಿದ ಸಿಎಂ ಸಿದ್ದರಾಮಯ್ಯ.
ಚುನಾವಣೆಯಲ್ಲಿ ಜಯಗಳಿಸಿರುವ ಕರ್ನಾಟಕ ಕಾಂಗ್ರೆಸ್ನ ಎಲ್ಲಾ 9 ಅಭ್ಯರ್ಥಿಗಳಿಗೆ ಹಾಗೂ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಅಭಿನಂದನೆಗಳು. ತಮ್ಮೆಲ್ಲರ ಮೂಲಕ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ನ್ಯಾಯದ ಪರವಾದ ಧ್ವನಿ ಸಂಸತ್ತಿನಲ್ಲಿ ಮೊಳಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. 15-20 ಸ್ಥಾನ ನಮ್ಮ ನಿರೀಕ್ಷೆಯಾಗಿತ್ತು. ಆದರೆ, 2019 ರಲ್ಲಿ ಕೇವಲ ಒಂದು ಸ್ಥಾನದಲ್ಲಿ ಗೆದ್ದಿದ್ದೆವು. ಈಗ 9 ಕ್ಕೆ ಏರಿದ್ದೇವೆ. ಈ ಬಾರಿ ನಮಗೆ ಶೇ 45.34, @BJP4Karnataka ಶೇ 46.04 ರಷ್ಟು ಮತ ಪಡಿದಿದೆ. 2019 ರಲ್ಲಿ ಬಿಜೆಪಿ ಶೇ 51.38 ರಷ್ಟು ಮತ ಗಳಿಸಿತ್ತು.
ನಮಗೆ ಶೇ31.88 ರಷ್ಟು ಮಾತ್ರ ಮತಗಳು ಬಂದಿದ್ದವು. 2019 ಕ್ಕೆ ಹೋಲಿಸಿದರೆ ನಮ್ಮ ಮತ ಪ್ರಮಾಣ ಹೆಚ್ಚಾಗಿದೆ. ಬಿಜೆಪಿ ಮತ ಪ್ರಮಾಣ ಶೇ5 ರಷ್ಟು ಕುಸಿದಿದೆ. ಜೆಡಿಎಸ್ ಜೊತೆ ಹೊಂದಾಣಿಕೆ ಬಳಿಕವೂ ಬಿಜೆಪಿ ಮತ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜೆಡಿಎಸ್ ಕೂಡ 2019ಕ್ಕಿಂತ ಕಡಿಮೆ ಪ್ರಮಾಣದ ಮತ ಪಡೆದಿದೆ. ಆದರೂ ನಾವು ನಿರೀಕ್ಷಿತ ಪ್ರಮಾಣದಲ್ಲಿ ಸೀಟು ಗೆದ್ದಿಲ್ಲ ಎಂದು ತಿಳಿಸಿದ್ದಾರೆ.
ದೇಶದಲ್ಲಿಯೂ ಸಹ ಕಾಂಗ್ರೆಸ್ ಮತ ಪ್ರಮಾಣ ಸುಮಾರು ಶೇ.3ರಷ್ಟು ಹೆಚ್ಚಾಗಿದೆ. ಬಿಜೆಪಿ ಮತಪ್ರಮಾಣ ಬಹುತೇಕ ಇದ್ದಷ್ಟೇ ಇದ್ದು, ಯಾವುದೇ ಏರಿಕೆ ಕಂಡುಬಂದಿಲ್ಲ. ಅಲ್ಲದೆ, ಬಿಜೆಪಿಯ ಸ್ಥಾನಗಳು ಸಹ 2019ರಲ್ಲಿ 303 ಹಾಗೂ 2014ರಲ್ಲಿ 282 ಇದ್ದದ್ದು ಪ್ರಸ್ತುತ 244ಕ್ಕೆ ಕುಸಿದಿದೆ. 2014ರಲ್ಲಿ ಗಳಿಸಿದ ಸ್ಥಾನಕ್ಕಿಂತಲೂ ಕಡಿಮೆ ಸ್ಥಾನವನ್ನು ಬಿಜೆಪಿ ಕಂಡಿದೆ ಎಂದಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ದೇಶದ ಜನತೆ ಭರವಸೆ ಕಳೆದುಕೊಂಡಿರುವುದನ್ನು ಈ ಅಂಕಿಅಂಶಗಳು ಸ್ಪಷ್ಟವಾಗಿ ನಿರೂಪಿಸುತ್ತಿವೆ. ಮೋದಿ ಪ್ರಧಾನಿಯಾಗಿ ದೇಶದ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ನೈತಿಕವಾಗಿ ಸೋತಿದ್ದಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಎರಡು ಯಾತ್ರೆಗಳು ಫಲ ನೀಡಿವೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ದೇಶದ ಜನತೆ ಬಹಳ ದೊಡ್ಡ ಮಟ್ಟದಲ್ಲಿ ಒಪ್ಪಿಕೊಂಡಿದ್ದಾರೆ. ಎರಡೂ ಕ್ಷೇತ್ರಗಳಲ್ಲೂ ರಾಹುಲ್ ಗಾಂಧಿ ಭರ್ಜರಿ ಮತಗಳಿಂದ ಗೆದ್ದಿದ್ದಾರೆ ಎಂದಿದ್ದಾರೆ.
ಕೈಯಲ್ಲಿ ಸಂವಿಧಾನ ಹಿಡಿದೇ ರಾಹುಲ್ ಗಾಂಧಿಯವರು ಇಡೀ ದೇಶದಲ್ಲಿ ಚುನಾವಣಾ ಪ್ರಚಾರ ಮಾಡಿದರು. ದೇಶದ ಜನ ಸಂವಿಧಾನದ ಉಳಿವಿಗೆ, ಪ್ರಜಾಪ್ರಭುತ್ವ ಉಳಿವಿಗಾಗಿ ರಾಹುಲ್ ಗಾಂಧಿಯವರ ಕೈ ಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಹತ್ತು ವರ್ಷ ದೇಶದ ಜನರ ಪಾಲಿಗೆ ಮಾತ್ರವಲ್ಲ ಕಾಂಗ್ರೆಸ್ ಪಕ್ಷಕ್ಕೆ ಕೂಡಾ ಅತ್ಯಂತ ಕಷ್ಟದ ಕಾಲ. ನಮ್ಮ ನಾಯಕರ ಮೇಲೆ ಐಟಿ-ಇಡಿ ದಾಳಿ ನಡೆಸಿದರು, ನಮ್ಮವರನ್ನು ಜೈಲಿಗೆ ಹಾಕಿದರು. ಸುಳ್ಳು ಮೊಕದ್ದಮೆ ಹೂಡಿದರು. ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಘಗಿತಗೊಳಿಸಿದರು. ನಮ್ಮ ನಾಯಕರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ದ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಚಿತ್ರಹಿಂಸೆ ನೀಡಿದರು. ನಿರಂತರವಾಗಿ ಸುಳ್ಳು ಪ್ರಚಾರ ಮಾಡಿ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಿದರು ಎಂದು ಹೇಳಿದ್ದಾರೆ.
ಇಂತಹ ಸುಳ್ಳು, ಅಪಪ್ರಚಾರ, ಚಾರಿತ್ರ್ಯಹನನದಂತಹ ಪ್ರಯತ್ನಗಳಿಂದ ಎದೆಗುಂದದೆ ರಾಹುಲ್ ಗಾಂಧಿಯವರು ಕಷ್ಟಕಾಲದಲ್ಲಿ ಪಕ್ಷವನ್ನು ಮುನ್ನಡೆಸಿದರು. ನಾಯಕರನ್ನು ಕಾರ್ಯಕರ್ತರನ್ನು ಹುರಿದುಂಬಿಸಿದರು. ಇದರಿಂದಾಗಿ ಈ ಚುನಾವಣೆಯಲ್ಲಿ ನಮ್ಮ ಪಕ್ಷ ಮತ್ತು ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳನ್ನು ದೇಶದ ಜನತೆ ಬೆಂಬಲಿಸಿದ್ದಾರೆ ಎಂದರು.
ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಮಾಧ್ಯಮಗಳ ಭವಿಷ್ಯದ ನುಡಿಯನ್ನು ಮೀರಿ ಸ್ಥಾನಗಳನ್ನು ಗಳಿಸಿ ಮುನ್ನಡೆಯಲ್ಲಿದೆ. ತೀವ್ರ ಪೈಪೋಟಿ ಇರುವುದರಿಂದ ಮುಂದಿನ ಸರ್ಕಾರವನ್ನು ಯಾರು ರಚಿಸುತ್ತಾರೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯ ಇಲ್ಲ. ಆದರೆ, ಚಾರ್ ಸೋ ಪಾರ್ ಎಂದು ದುರಹಂಕಾರದಿಂದ ಕೂಗು ಹಾಕುತ್ತಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಹೀನಾಯವಾದ ಸೋಲು ಅನುಭವಿಸುತ್ತಿದೆ. ಈಗಿನ ಟ್ರೆಂಡ್ ಪ್ರಕಾರ ಬಿಜೆಪಿಗೆ ಸ್ವಂತ ಬಲದಿಂದ ಸರ್ಕಾರ ರಚಿಸುವಷ್ಟು ಸ್ಥಾನಗಳು ದಕ್ಕಿಲ್ಲ ಎಂದು ಕುಟುಕಿದ್ದಾರೆ.
ದೇಶದ ನೊಂದ ರೈತರು, ನಿರುದ್ಯೋಗಿ ಯುವಜನರು, ದೌರ್ಜನ್ಯಕ್ಕೋಳಗಾದ ದಲಿತರು ಮತ್ತು ಮಹಿಳೆಯರು, ಕೆಲಸ ಕಳೆದುಕೊಂಡ ಕಾರ್ಮಿಕರ ಶಾಪ ಬಿಜೆಪಿ ಮತ್ತು ನರೇಂದ್ರ ಮೋದಿ ಅವರಿಗೆ ತಟ್ಟಿದೆ ಎಂದು ಹೇಳಿದ್ದಾರೆ.
ಸತತ ಸೋಲು, ಅಪಪ್ರಚಾರ ಮತ್ತು ಅಧಿಕಾರದ ದುರ್ಬಳಕೆ ಮೂಲಕ ಬಿಜೆಪಿ ನಡೆಸುತ್ತಾ ಬಂದ, ದಮನ-ದೌರ್ಜನ್ಯದಿಂದ ನಲುಗಿಹೋಗಿದ್ದ ಕಾಂಗ್ರೆಸ್ ಎಲ್ಲವನ್ನು ಎದುರಿಸಿ ಫೀನಿಕ್ಸ್ ನಂತೆ ಮತ್ತೆ ಎದ್ದು ನಿಂತಿದೆ ಎಂದು ತಿಳಿಸಿದ್ದಾರೆ.
ಇದು ಸತ್ಯ, ನ್ಯಾಯ ಮತ್ತು ನಿಜವಾದ ಧರ್ಮಕ್ಕೆ ಸಿಕ್ಕಿರುವ ಜಯ. ಸುಳ್ಳು, ಅನ್ಯಾಯ ಮತ್ತು ಅಧರ್ಮದ ಮೂಲಕ ದೇಶವನ್ನು ಹತ್ತು ವರ್ಷ ಆಳಿದ್ದ ಬಿಜೆಪಿಗೆ ದೇಶದ ಪ್ರಜ್ಞಾವಂತ ಮತದಾರರು ಪಾಠ ಕಲಿಸಿದ್ದಾರೆ. ಈ ಪ್ರಜ್ಞಾವಂತ ಮತದಾರರಿಗೆ ನನ್ನ ಮತ್ತು ನಮ್ಮ ಪಕ್ಷದ ಹಾರ್ದಿಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(KPCC)ಯ ನೂತನ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ. ಡಿಕೆ ಶಿವಕುಮಾರ್ ಅವರು ಬುಧವಾರ…
ಡಿ.ಕೆ ಶಿವಕುಮಾರ್ ಅವರು ಬುಧವಾರ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.…
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಜೂನ್ 20 ರಿಂದ ಎಸ್ಐಆರ್ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ. ತಾಲ್ಲೂಕಿನಲ್ಲಿ 2,23,457 ಮಂದಿ ಮತದಾರರಿದ್ದಾರೆ. ಈ ಪೈಕಿ…
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.…
ರಾಜ್ಯದ ಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರಿಸಿದ್ದಾರೆ. ಸಂವಿಧಾನದ ಪುಸ್ತಕ ಹಿಡಿದು, ವೀರ ಗಂಗಾಧರನ ಅಜ್ಜನ ಹೆಸರಿನಲ್ಲಿ…
ರಾಜ್ಯದ 25 ಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರಿಸಿದ್ದಾರೆ. ವೀರ ಗಂಗಾಧರನ ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ…