ಹೊಸಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಲೂಟಿ ಪ್ರಕರಣ: ಪ್ರಕರಣದ ನಾಲ್ವರು ಪ್ರಮುಖ ಆರೋಪಿಗಳ ಬಂಧನ

2022ರಲ್ಲಿ ಮುಖವಾಡ ಧರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್​ನೊಳಗೆ ನುಗ್ಗಿದ ಕಳ್ಳರು ಗ್ಯಾಸ್​ ಕಟರ್​ನಿಂದ ಲಾಕರ್ ಮುರಿದು ಬರೋಬ್ಬರಿ 3 ಕೋಟಿ 50 ಲಕ್ಷ ರೂ. ಮೌಲ್ಯದ 5 ಕೆ.ಜಿ ಚಿನ್ನ, 15 ಲಕ್ಷ ನಗದು ದೋಚಿ ಪರಾರಿಯಾಗಿದ್ದ ಸುಮಾರು 12 ಮಂದಿ ಕಳ್ಳರ ಪೈಕಿ 7 ಮಂದಿ ಆರೋಪಿಗಳನ್ನು ಹೊಸಹಳ್ಳಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ರಾವ್ ಗಣೇಶ್ ನೇತೃತ್ವದ ತಂಡ ಬಂಧಿಸಲಾಗಿದೆ.

ತಾಲೂಕಿನ ಹೊಸಹಳ್ಳಿ ಗ್ರಾಮದ ಕರ್ನಾಟಕ‌ ಗ್ರಾಮೀಣ ಬ್ಯಾಂಕ್ ಲೂಟಿ‌ ಪ್ರಕರಣವನ್ನು ಭೇದಿಸಿರುವ ಪೊಲೀಸರು ಅಂದಿನ ಸರ್ಕಲ್ ಇನ್ಸ್ ಪೆಕ್ಟರ್ ಹರೀಶ್ ನೇತೃತ್ವದ ತಂಡ ಮೂವರು ಖದೀಮರನ್ನು ಉತ್ತರ ಪ್ರದೇಶದ ಬದಾಯೂನ್ ಜಿಲ್ಲೆಯ ಅಲಾಪುರ್ ನಲ್ಲಿ ಬಂಧಿಸಿದ್ದರು.‌

ಇದೀಗ ಈ ಪ್ರಕರಣದ ಮತ್ತೆ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಹೊಸಹಳ್ಳಿಯಲ್ಲಿನ ಕರ್ನಾಟಕ‌ ಗ್ರಾಮೀಣ ಬ್ಯಾಂಕ್ ಸ್ಥಳ ಮಹಜರು ಮಾಡಿಸಿ, ನಗರದ ಸರ್ಕಾರಿ ಆರೋಗ್ಯ ತಪಾಸಣೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಉತ್ತರಪ್ರದೇಶ ಮೂಲದ ಅಲಾಪುರ ನಿವಾಸಿ ಟ್ರಕ್ ಚಾಲಕ ಸರ್ತಾಜ್ ಹಾಗೂ ಉಜಾನಿಯ ನಿವಾಸಿ ಕಾಳಿಚರಣ್, ಗುಡ್ಡು ಅಲಿಯಾಸ್ ಕಾಲಿಯಾ, ಅಸ್ಲಾಂ ಅಲಿಯಾಸ್ ಟನ್ ಟನ್, ಹಸ್ರತ್ ಅಲಿ, ಕಮ್ರುದ್ದೀನ್ ಅಲಿಯಾಸ್ ಬಾಬು ಸರೇಲಿ ಬಂಧಿತ ಆರೋಪಿಗಳು. 12 ಮಂದಿ ಆರೋಪಿಗಳಲ್ಲಿ 7 ಮಂದಿಯನ್ನು ಬಂಧಿಸಲಾಗಿದ್ದು, ಮಿಕ್ಕುಳಿದ 5 ಮಂದಿ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಟ್ರಕ್ ನಲ್ಲಿ ಬಂದು ಲೂಟಿ:

2022ರ ನ.25 ರಂದು ಸಿನಿಮೀಯ ಶೈಲಿಯಲ್ಲಿ ಬ್ಯಾಂಕ್ ಲೂಟಿ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದಿಂದ ಪೂರ್ವನಿಯೋಜಿತವಾಗಿ ಕಳ್ಳತನ, ಬ್ಯಾಂಕ್, ಮನೆಗಳ ಲೂಟಿ ಮಾಡಲೆಂದೆ ಕಳ್ಳರು ಬೃಹತ್ ಟ್ರಕ್ ರೆಡಿ ಮಾಡಿಕೊಂಡಿದ್ದರು.

ಈ ಟ್ರಕ್ ನಲ್ಲಿ ಕಳ್ಳತನಕ್ಕೆ ಬಳಸುವ ಉಪಕರಣಗಳು ಎಲ್ಲವೂ ಸಿದ್ಧವಿದ್ದವು. ಗ್ಯಾಸ್ ಕಟರ್, ಸಿಲಿಂಡರ್ ಸೇರಿದಂತೆ ಹಲವು ಉಪಕರಣಗಳನ್ನು ಇಟ್ಟುಕೊಂಡು ತಾಲೂಕಿನ ಸಾಸಲು ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ಕನ್ನ ಹಾಕಿದ್ದರು.

ಗ್ಯಾಸ್ ಕಟರ್ ಮೂಲಕ ಶೆಟರ್ ಹಾಗೂ ಲಾಕರ್ ತೆರೆದು 12 ಕೆ.ಜಿ. ಚಿನ್ನಾಭರಣ ಹಾಗೂ 15 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಬಹಳ ದಿನಗಳಿಂದ ಹೊಂಚು ಹಾಕಿದ ಕಳ್ಳರು, ಬ್ಯಾಂಕ್ ಬಳಿ ಚಲನವಲನಗಳನ್ನು ಗಮನಿಸಿ ಕಳುವು ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ‌ ಸೆರೆಯಾಗಿದ್ದ ಟ್ರಕ್ ಪತ್ತೆ ಹಚ್ಚಿ ಹೋದ ಪೊಲೀಸರಿಗೆ ಆರೋಪಿಗಳ ಮಹತ್ವದ ಸುಳಿವು‌ ಸಿಕ್ಕಿತ್ತು.

Leave a Reply

Your email address will not be published. Required fields are marked *