ಹುಲಿಕುಂಟೆ ಮೂರ್ತಿ ವೈಚಾರಿಕತೆ ಬೆಂಬಲಿಸಿದ ಕನ್ನಡ ಜಾಗೃತಿ ಪರಿಷತ್, ದಲಿತ ಪರ, ಕನ್ನಡ ಪರ ಸಂಘಟನೆಗಳು: ತೇಜೋವಧೆಗೈದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಇಸ್ರೋದಿಂದ ಇತ್ತಿಚೇಗೆ ಉಡಾವಣೆಯಾದ ಚಂದ್ರಯಾನ -3 ಉಪಗ್ರಹ ಕುರಿತು ಉಪನ್ಯಾಸಕ, ದಲಿತ ಪರ ಹೋರಾಟಗಾರ ಹುಲಿಕುಂಟೆ ಮೂರ್ತಿ ಸಾಮಾಜಿಕ ಜಾಲತಾಣದಲ್ಲಿ ‘ ಚಂದ್ರಯಾನ ಈ ಸಾರಿ ತಿರುಪತಿ ನಾಮವೇ ಗತಿ’ ಎಂಬ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈ ಪೋಸ್ಟ್ ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ವೈಯಕ್ತಿಕವಾಗಿ ಟೀಕೆ ಮಾಡಿ, ಜೀವ ಬೆದರಿಕೆಯನ್ನು ಹಾಕಿದ್ದರು. ಈ ಘಟನೆಯನ್ನು ಖಂಡಿಸಿ ಶುಕ್ರವಾರ ತಾಲ್ಲೂಕು ಕಚೇರಿ ಮುಂಭಾಗ ವಿವಿಧ ದಲಿತ ಪರ, ಕನ್ನಡ ಪರ, ಕನ್ನಡ ಜಾಗೃತಿ ಪರಿಷತ್ ವತಿಯಿಂದ ಪ್ರತಿಭಟನೆ ಮಾಡಿ ದಲಿತ ಪರ ಹೋರಾಟಗಾರ ಹುಲಿಕುಂಟೆ ಮೂರ್ತಿ ಅವರಿಗೆ ಬೆಂಬಲ ಸೂಚಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕನ್ನಡ ಜಾಗೃತಿ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್, ಸರ್ಕಾರಿ ಸಂಸ್ಥೆಗಳು ಧರ್ಮಾತೀತ, ಜಾತ್ಯಾತೀತವಾಗಿ ಕೆಲಸ ನಿರ್ವಹಿಸಬೇಕು. ವೈಜ್ಞಾನಿಕವಾಗಿ ಕೆಲಸ ಮಾಡುತ್ತಿರುವ ಇಸ್ರೋ ಸಂಸ್ಥೆಯವರು 650 ಕೋಟಿ ಖರ್ಚು ಮಾಡಿ ಚಂದ್ರಯಾನ ಉಪಗ್ರಹ ಉಡಾವಣೆ ಮಾಡಿದ್ದಾರೆ. ಆದರೆ ಮೂಢನಂಬಿಕೆ, ಮೌಲ್ಯಗಳನ್ನು ತೊಲಗಿಸಬೇಕಾದವರೆ ದೇವರ ಮೊರೆ ಹೋದದ್ದು ಸರಿಯಲ್ಲ ಎಂದು ಮೂರ್ತಿ ಅವರು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಇದನ್ನೆ ತಪ್ಪು ಎಂದು ಕೆಲ ಸಾಮಾಜಿಕ ಜಾಲತಾಣದ ಕಿಡಿಗೇಡಿಗಳು ವೈಯಕ್ತಿಕವಾಗಿ ನಿಂದಿಸಿದ್ದಾರೆ. ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರಿದರು.

ಸಂವಿಧಾನ, ಸರ್ಕಾರಿ ನಿಯಮಗಳಿಗೆ ತಕ್ಕಂತೆ ನಡೆದುಕೊಳ್ಳಬೇಕು. ಇಂದಿನ ಸಮಾಜದಲ್ಲಿ ಮನುಷ್ಯತ್ವವನ್ನೆ ಮರೆಯಲಾಗುತ್ತಿದೆ. ವ್ಯವಸ್ಥೆ ಸಾಕಷ್ಟು ವಿಕೃತವಾಗಿ ಬದಲಾಗಿದೆ. ಹೀಗಾಗಿ ನಾವು ಮನುಷ್ಯತ್ವದ ಪರ ಮಾತನಾಡುತ್ತಿದ್ದೇವೆ ಎಂದರು.

ಹಿರಿಯ ಕನ್ನಡಪರ ಹೋರಾಟಗಾರ ಸಂಜೀವನಾಯಕ್ ಮಾತನಾಡಿ, ಸ್ವಾತಂತ್ರ‍್ಯ ಬಂದು 75 ವರ್ಷಗಳಾದರೂ ಮೌಢ್ಯತೆಯ ಜಾರಿಯಲ್ಲಿರುವ ಬಗ್ಗೆ ಹುಲಿಕುಂಟೆ ಮೂರ್ತಿ ಟೀಕಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಮನುವಾದಿಗಳನ್ನು ಶಿಕ್ಷಣ ಸಚಿವರನ್ನಾಗಿ ಮಾಡಿ ಶಿಕ್ಷಣ ವ್ಯವಸ್ಥೆ ಹಾಳು ಮಾಡಲು ಯತ್ನಿಸಿದ್ದರು. 650 ಕೋಟಿ ಖರ್ಚು ಮಾಡಿ ಚಂದ್ರಯಾನ -3 ಉಪಗ್ರಹ ಉಡಾವಣೆ ಮಾಡಿರುವುದು ಏತಕ್ಕಾಗಿ? ಟ್ರೋಲ್ ಮಾಡಿ ಜೀವ ಬೆದರಿಕೆ ಹಾಕಿದ ಪುಂಡರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ವೈಜ್ಞಾನಿಕವಾಗಿ ಓರ್ವ ಉಪನ್ಯಾಸಕನಾಗಿ ಹುಲಿಕುಂಟೆ ಮೂರ್ತಿ ಮಾತನಾಡಿದ್ದಾರೆ. ಮನುವಾದಿಯನ್ನು ವಿರೋಧ ವ್ಯಕ್ತಪಡಿಸಿದಾಗ ಷಡ್ಯಂತ್ರ ಮಾಡಿ ವೈಯಕ್ತಿಕವಾಗಿ ತೇಜೋವಧೆ ಮಾಡಲಾಗುತ್ತಿದೆ.
ಮೂಢನಂಬಿಕೆ, ಜಾತಿ ವ್ಯವಸ್ಥೆ ಇತರ ಸಾಮಾಜಿಕ ಪಿಡಿಗುಗಳ ವಿರುದ್ಧ ಮೂರ್ತಿ ಹೋರಾಟ ಮಾಡುತ್ತಿದ್ದಾರೆ. ಕೇವಲ ಮನುವಾದಿಗಳು ಮೂರ್ತಿಯವರನ್ನು ಟಾರ್ಗೆಟ್ ಮಾಡಿ ತೇಜೋವಧೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಮುಖಂಡ ಗುರುರಾಜಪ್ಪ ಮಾತನಾಡಿ, ಮೂರ್ತಿ ಅವರಿಗೆ ಹಲವು ಕಿಡಿಗೇಡಿಗಳು ಜೀವ ಬೆದರಿಕೆ ಒಡ್ಡಿರುವುದರಿಂದ ಸರ್ಕಾರ ಅಂಗರಕ್ಷಕರನ್ನು ನೇಮಿಸಬೇಕು. ಇಲ್ಲವಾದಲ್ಲಿ ಗೌರಿ ಲಂಕೇಶ್ ರನ್ನು ಕೊಲೆಗೈದಂತೆ ಇವರಿಗೂ ಅಟ್ಟಹಾಸ ಮೇರೆಯುತ್ತಾರೆ. ಜೀವ ಬೆದರಿಕೆ ಕುರಿತು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ 30 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ ಎಂದರು.

ಈ ವೇಳೆ ಹೋರಾಟಗಾರರಾದ ಸತ್ಯನಾರಾಯಣ, ಡಿ.ಪಿ.ಆಂಜನೇಯ, ರಾಜು ಸಣ್ಣಕ್ಕಿ, ಗುರುರಾಜಪ್ಪ ಹನುಮಣ್ಣ, ಗಂಗರಾಜು, ಡಿಡಿ ವೆಂಕಟೇಶ್, ಬೈರೇಗೌಡ, ಚಿದಾನಂದ, ತಳಗವಾರ ಪುನೀತ್ ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *