ನೈಟಿಂಗೇಲ್ ಮೆಡಿಕಲ್ ಟ್ರಸ್ಟ್, ಸೌಭಾಗ್ಯ ಸೇವಾ ಟ್ರಸ್ಟ್, ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ, ದೊಡ್ಡಬಳ್ಳಾಪುರ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಹಿರಿಯ ನಾಗರಿಕರ ಆರೈಕೆ ಹಾಗೂ ಡಿಮೆನ್ಶಿಯಾ (ಮರೆವು ಖಾಯಿಲೆ) ಬಗ್ಗೆ ಅರಿವು ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರದ ಗ್ರಾಮೀಣ ಅಬ್ಯುದಯ ಸೇವಾ ಸಂಸ್ಥೆಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕಂಟನಕುಂಟೆ ಗ್ರಾಮ ಪಂಚಾಯತ್ ಅಧ್ಯೆಕ್ಷೆ ಶೋಭಾ ರಾಜಗೋಪಾಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ನಾಗರಿಕರಿಗೆ ಮನೆಗಳಲ್ಲಿ ಹಾಗೂ ವಿವಿಧ ಸೇವಾ ಕ್ಷೇತ್ರಗಳಲ್ಲಿ ಗೌರವಯುತವಾದ ಸೇವೆ, ಆರೈಕೆಯನ್ನು ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಗನವಾಡಿ ಅಸೋಸಿಯೇಷನ್ ನ ಅದ್ಯಕ್ಷರಾದ ನಳಿನಾಕ್ಷಿ ಮಾತನಾಡಿ, ನೈಟಿಂಗೇಲ್ ಟ್ರಸ್ಟ್ ರವರು ತಾಲ್ಲೂಕಿನ ತಿರುಮಗೊಂಡನಹಳ್ಳಿಯಲ್ಲಿ 100 ಹಾಸಿಗೆಗಳ ಡಿಮೆನ್ಶಿಯಾ ಆರೈಕೆ ಕೇಂದ್ರ ನಿರ್ಮಿಸುತ್ತಿರುವುದು ಶ್ಲಾಘನೀಯವಾಗಿರುತ್ತದೆ. ಇದರಿಂದ ತಾಲ್ಲೂಕಿನ ಜನತೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಲಕ್ಷ್ಮೀಯವರು ಭಾಗವಹಿಸಿ ಹಿರಿಯ ನಾಗರೀಕರ ಸೇವೆಯಲ್ಲಿ ಸರ್ಕಾರದ ಹಾಗೂ ಸಂಘ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೈಟಿಂಗೇಲ್ ಸಂಸ್ಥೆಯ ಸುರೇಶ್, ಸೋಫಿಯಾ ಭಾಗವಹಿಸಿ, ಡಿಮೆನ್ಶಿಯಾ ಬಗ್ಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಅಂಗನವಾಡಿ ಕಾರ್ಯಕರ್ತೆಯರು, ಶೂಷ್ರೂಷಕಿಯರು, ಸ್ವಯಂಸೇವಾ ಕಾರ್ಯಕರ್ತೆಯರಿಗೆ ವಿವರವಾಗಿ ತಿಳಿಸಿಕೊಟ್ಟರು.