ಹಳ್ಳಿಕಾರ್ ಹಸುಗಳ ಸೌಂದರ್ಯ ಸ್ಪರ್ಧೆಗೆ ಭರ್ಜರಿ ರೆಸ್ಪಾನ್ಸ್ 

ದೊಡ್ಡಬಳ್ಳಾಪುರ (ತೂಬಗೆರೆ) : ಅ.2 ರಂದು ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಸಮೀಪದ ಸಪ್ಪಲಮ್ಮ ದೇವಸ್ಥಾನ ಆವರಣದಲ್ಲಿ ನವ ಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ಹಳ್ಳಿಕಾರ್ ಹಸುಗಳ ಸೌಂದರ್ಯ ಪ್ರದರ್ಶನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಈ ಕುರಿತು ಹಳ್ಳಿ ರೈತ ಅಂಬರೀಶ್ ಮಾತನಾಡಿ, ವಿಜಯದಶಮಿ ಅಂಗವಾಗಿ ಹಳ್ಳಿಕಾರ್ ಹಸುಗಳ ಫ್ಯಾಷನ್ ಶೋವನ್ನು ಪ್ರಸ್ತುತಪಡಿಸಿ ಯಶಸ್ವಿಗೊಳಿಸಿದ್ದೇವೆ. ಈ ಕಾರ್ಯಕ್ರಮದ ಮೂಲಕ ಹಳ್ಳಿಕಾರ್ ತಳಿಯ ಸೌಂದರ್ಯ ಮತ್ತು ಅದರ ಸಾಂಸ್ಕೃತಿಕ ಮಹತ್ವವನ್ನು ಪ್ರಚಾರಗೊಳಿಸುವುದೇ ನಮ್ಮ ಗುರಿ. ಜೊತೆಗೆ ಸ್ಥಳೀಯ ತಳಿಗಳನ್ನು ಸಂರಕ್ಷಿಸುವ ಕುರಿತು ಜಾಗೃತಿ ಮೂಡಿಸಲು ಈ ಸ್ಪರ್ಧೆ ನೆರವಾಗಿದೆ ಎಂದರು.

ನವ ಕರ್ನಾಟಕ ಯುವಶಕ್ತಿ ವೇದಿಕೆಯ ಕಾರ್ಯದರ್ಶಿ ಉದಯ ಆರಾಧ್ಯ ಮಾತನಾಡಿ, ಕಳೆದ ವರ್ಷ ಇದೇ ಮಾದರಿಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದೇವು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ನೂರಕ್ಕೂ ಹೆಚ್ಚು ಹಳ್ಳಿಕಾರ್ ಹಸುಗಳು ಭಾಗವಹಿಸಿದ್ದವು. ಈ ಯಶಸ್ಸಿನ ಹಿನ್ನೆಲೆಯಲ್ಲಿ ಮತ್ತೊಮ್ಮೆ ಈ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಗೊಳಿಸಿದ್ದೇವೆ ಎಂದರು.

ವಕೀಲರು ಹಾಗೂ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರತಾಪ್ ಮಾತನಾಡಿ, ನವ ಕರ್ನಾಟಕ ಯುವಶಕ್ತಿ ವೇದಿಕೆ ರೈತರ ಕಲ್ಯಾಣಕ್ಕಾಗಿ ಮತ್ತು ಕನ್ನಡ ಭಾಷೆ-ಸಂಸ್ಕೃತಿಯ ಉತ್ತೇಜನಕ್ಕಾಗಿ ಶ್ರಮಿಸುತ್ತಿರುವ ಯುವ ಸಂಘಟನೆ. ಸಮಾಜಮುಖಿ ಕಾರ್ಯಗಳಲ್ಲಿ ಯುವಕರು, ರೈತರು ತೊಡಗಿಸಿಕೊಳ್ಳುವಲ್ಲಿ ಇದು ಉತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಆಯ್ಕೆ ವಿಧಾನ:

ಹಳ್ಳಿಕಾರ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ರಾಸುಗಳ ಜೋಡಿಗಳಲ್ಲಿ ಒಂದು ಹಳ್ಳಿಕಾರ್ ತಳಿಯ ಜೋಡಿಯನ್ನು ಚಾಂಪಿಯನ್ ಎಂದು ಆಯ್ಕೆ ಮಾಡಿ ಸದರಿ ರಾಸುಗಳ ಮಾಲೀಕರಿಗೆ ಹಿರೋ ದ್ವಿಚಕ್ರ ವಾಹನ ಬಹುಮಾನವಾಗಿ ನೀಡಲಾಯಿತು.

1.ಹಳ್ಳಿಕಾರ್ ಹಸು ವಿಭಾಗ

2.ಹಲ್ಲು ಇಲ್ಲದ ಎತ್ತುಗಳ ವಿಭಾಗ

3.ಎರಡು ಹಲ್ಲಿನ ಎತ್ತುಗಳ ವಿಭಾಗ

4.ನಾಲ್ಕು ಹಲ್ಲಿನ ಎತ್ತುಗಳ ವಿಭಾಗ

5.ಆರು ಹಲ್ಲಿನ ಎತ್ತುಗಳ ವಿಭಾಗ

6.ಕಡೆ ಹಲ್ಲಿನ ಎತ್ತುಗಳ ವಿಭಾಗ ಸೇರಿದಂತೆ ಈ 6 ವಿಭಾಗದಿಂದ ತಲಾ ಒಂದು ಜೋಡಿ ಆಯ್ಕೆ ಮಾಡಿ ಬಹುಮಾನವಾಗಿ ಬೈ ಸೈಕಲ್ ನೀಡಿ ಪ್ರೋತ್ಸಾಹಿಸಲಾಯಿತು.

ಸ್ಪರ್ಧೆಯಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ಹಳ್ಳಿಕಾರ್ ರಾಸುಗಳು ಪಾಲ್ಗೊಂಡು ತಮ್ಮ ಸೌಂದರ್ಯವನ್ನು ಪ್ರದರ್ಶಿಸಿತು. ಕಾರ್ಯಕ್ರಮಕ್ಕೆ ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು, ರಕ್ಷಕ್ ಬುಲೆಟ್, ಸೈಕ್ ನವಾಜ್, ಬಾಲನಟ ಮಹಾನಿಧಿ ಸಾಯಿ ತೇಜ್ ಸೇರಿದಂತೆ ಹಲವು ಚಲನಚಿತ್ರ ಕಲಾವಿದರು ಭಾಗಿಯಾಗಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನ ಸೆಳೆಯಿತು. ಪುಟಾಣಿ ಮಕ್ಕಳ ಯೋಗಪ್ರದರ್ಶನ ವಿಶೇಷ ಆಕರ್ಷಣೆಯಾಯಿತು.

ಸ್ಪರ್ಧೆಯಲ್ಲಿ ಬೆಂಗಳೂರಿನ ಬೊಮ್ಮಸಂದ್ರದ ಮಂಜುನಾಥ ಅವರ ರಾಸುಗಳು ಚಾಂಪಿಯನ್ ಆಗಿ ಆಯ್ಕೆಯಾಗಿದ್ದು, ಅವರಿಗೆ ಹಿರೋ ದ್ವಿಚಕ್ರ ವಾಹನ ಬಹುಮಾನವಾಗಿ ನೀಡಲಾಯಿತು. ಉಳಿದ ಆರು ವಿಭಾಗಗಳಲ್ಲಿ ಸೈಕಲ್ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ಮಾಲೀಕರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು ಎಂದು ನವ ಕರ್ನಾಟಕ ಯುವಶಕ್ತಿ ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಾಲಪ್ಪ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷ ಜೆ. ರಾಜೇಂದ್ರ, ವಕೀಲ ಪ್ರತಾಪ್, ತೆಂಗು ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ, ಸಪ್ಪಲಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಅಶ್ವಥಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ಮಾಜಿ ಅಧ್ಯಕ್ಷರು ಸುರೇಶ್ ಬಾಬು, ರಾಜಕುಮಾರ್, ವೈದ್ಯೆ ಸೌಮ್ಯ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನುಂಜಯ, ಮುಖಂಡರು ಕನಕದಾಸ, ಶೇಷಗಿರಿ, ಯುವ ಮುಖಂಡ ಎಚ್.ಎನ್. ನರಸಿಂಹಮೂರ್ತಿ, ಮಧು ಹಾಗೂ ನವ ಕರ್ನಾಟಕ ಯುವಶಕ್ತಿ ವೇದಿಕೆಯ ಕಾರ್ಯದರ್ಶಿ ಉದಯ ಆರಾಧ್ಯ, ಪದಾಧಿಕಾರಿಗಳು ಶ್ರೀಧರ್, ಮುಬಾರಕ್, ನಾಗರಾಜು ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!