ಚಡಚಣ(ವಿಜಯಪುರ ಜಿಲ್ಲೆ): ರಸ್ತೆಯುದ್ದಕ್ಕೂ ತಗ್ಗು, ಗುಂಡಿಗಳ ಕಾರುಬಾರು. ರಸ್ತೆ ಬದಿಗೆ ತಲೆಯೆತ್ತರಕ್ಕೆ ಬೆಳೆದು ನಿಂತಿರುವ ಜಾಲಿ ಗಿಡಗಳು, ಇನ್ನು ಸ್ವಲ್ಪ ಮಳೆಯಾದರೆ ಗುಂಡಿಗಳು ಹೊಂಡಮಯಗಳಾಗಿ ಪರಿವರ್ತನೆಗೊಂಡು ನಿತ್ಯವೂ ನರಕಯಾತನೆ ಅನುಭವಿಸುವುದು ಸಾಮಾನ್ಯ. ಈ ರಸ್ತೆ ಮೇಲೆ ಒಂದು ಸಲ ಸಂಚರಿಸಿದವರು ಮತ್ತೊಮ್ಮೆ ಇತ್ತ ತಿರುಗಿಯೂ ನೋಡುವುದಿಲ್ಲ. ಆದರೆ ಇಂತಹ ತೀವ್ರ ಹದಗೆಟ್ಟ ರಸ್ತೆ ಮೇಲೆಯೇ ನಿತ್ಯವೂ ಸಂಚರಿಸುವ ಅನಿವಾರ್ಯ ಮಾತ್ರ ಈ ಗ್ರಾಮದ ಜನರಿಗೆ ತಪ್ಪಿಲ್ಲ..!
ಹೌದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಟಾಕಳಿ ಗ್ರಾಮದಿಂದ ಕೆರೂರು ಮತ್ತು ಟಾಕಳಿ ಗ್ರಾಮದಿಂದ ಉಮರಾಣಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸುಮಾರು ಹತ್ತು ವರ್ಷಗಳಿಂದ ಸಂಪೂರ್ಣ ಹದಗೆಟ್ಟು ಹಾಳಾಗಿದ್ದು, ಜನ ಸಾಮಾನ್ಯರ ಸಂಚಾರ ದುಸ್ತರವಾಗಿದೆ. ಚುನಾವಣೆ ಸಮಯದಲ್ಲಿ ಮಾತ್ರ ಬಂದು ಆಶ್ವಾಸನೆ ಕೊಟ್ಟು ಮಾಯವಾಗುವ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸಹ ಗ್ರಾಮೀಣ ರಸ್ತೆಗಳ ದುರಸ್ತಿ ಕಡೆ ಕ್ಯಾರೇ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣಗಳಾದ ಚಡಚಣ, ಇಂಡಿ, ವಿಜಯಪುರಕ್ಕೆ ತೆರಳಲು ಜನರು ಮತ್ತು ರೈತರು ಹೊಲ-ಗದ್ದೆಗಳಿಗೆ, ವಿದ್ಯಾರ್ಥಿಗಳು ಶಾಲೆಗಳಿಗೆ, ರೋಗಿಗಳು ಆಸ್ಪತ್ರೆಗೆ ತೆರಳಲು ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಆದರೆ ರಸ್ತೆಯ ಎರಡು ಇಕ್ಕೆಲಗಳಲ್ಲಿ ಬೆಳೆದು ನಿಂತ ಮುಳ್ಳಿನ ಗಿಡಗಳಿಂದ ಸವಾರರಿಗೆ ಎದುರಿಗೆ ಬರುವ ವಾಹನಗಳು ಕಾಣುವುದಿಲ್ಲ. ಇನ್ನು ದ್ವಿಚಕ್ರ ವಾಹನ ಸವಾರರ ಪ್ರಯಾಣವಂತೂ ಹೇಳತೀರದು, ಬೈಕ್ ಸವಾರರು ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋಗಿ ಆಯಾತಪ್ಪಿ ಗಾಯಗಳು ಮಾಡಿಕೊಳ್ಳುತ್ತಿರುವ ದೃಶ್ಯ ಕಾಣಬಹುದು.
ಈ ರಸ್ತೆಯಲ್ಲಿ ನಿತ್ಯವೂ ಹರಸಾಹಸಪಟ್ಟು ಪ್ರಯಾಣಿಸುವ ಗ್ರಾಮಸ್ಥರು ಹಾಗೂ ರೈತರ ಗೋಳು ಕೇಳೊರಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಇದಕ್ಕೂ ತಮಗೂ ಏನು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ಗ್ರಾಮಸ್ಥರ ಕಂಗೆಣ್ಣಿಗೆ ಗುರಿಯಾಗಿದೆ.
ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯ ಸೇರಿದಂತೆ ರಸ್ತೆ ಕಾಮಗಾರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ “ದೇವರು ವರ ಕೊಟ್ಟರೂ, ಪೂಜಾರಿ ವರ ಕೊಡಲ್ಲ” ಎಂಬುವಂತೆ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆ ಜತೆಗೆ ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಸರ್ಕಾರದ ಅನೇಕ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗದೇ ಗ್ರಾಮೀಣ ಭಾಗದಲ್ಲಿ ಒಳ್ಳೆಯ ಶಾಲೆ, ಶಿಕ್ಷಕರ ಕೊರತೆ, ಸರಿಯಾದ ರಸೆ, ಬಸ್ ಸಂಪರ್ಕವಿಲ್ಲದೆ ಜನರು ಅಭಿವೃದ್ಧಿಯಿಂದ ಬಹಳಷ್ಟು ದೂರ ಉಳಿದು, ವಂಚಿತರಾಗಿರುವುದು ಇಂದಿಗೂ ಕಾಣುತ್ತಿದ್ದೇವೆ.
ಆದಷ್ಟು ಬೇಗ ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೊಸ ರಸ್ತೆ ಮಾಡಿಸುವ ಮೂಲಕ ರೈತಾಪಿ ಜನರ ಸಂಚಾರ ಹಾಗೂ ಪಟ್ಟಣದ ಮಾರುಕಟ್ಟೆಗಳಿಗೆ ರೈತರ ಬೆಳೆಗಳನ್ನು ಸಾಗಿಸಲು ಒಳ್ಳೆಯ ರಸ್ತೆ ಸಂಪರ್ಕದ ಅನುಕೂಲ ಕಲ್ಪಿಸಬೇಕಿದೆ.
“ಅಧಿಕ ಮಳೆ ಬಂದರೆ ಪಕ್ಕದಲ್ಲಿರುವ ಭೀಮಾ ನದಿ ನೀರು ಹರಿದು ಟಾಕಳಿ-ಕೆರೂರ ರಸ್ತೆ ನಡುವಿನ ಹಳ್ಳಕ್ಕೆ ಸೇತುವೆ ಇಲ್ಲದ ಕಾರಣ ಸಂಚಾರ ಸ್ಥಗಿತವಾಗುತ್ತದೆ. ರಸ್ತೆ ಹದಗೆಟ್ಟ ಕಾರಣ ಗ್ರಾಮಕ್ಕೆ ಬರುವ ಬಸ್ ಕೂಡ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಗರ್ಭೀಣಿಯರು ಈ ರಸ್ತೆಯಲ್ಲಿ ಸಾಗಲು ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಟಾಕಳಿಯಿಂದ ಕೆರೂರಕ್ಕೆ ಮತ್ತು ಟಾಕಳಿಯಿಂದ ಉಮರಾಣಿಗೆ ಸಂಪರ್ಕಿಸುವ ರಸ್ತೆ ಡಾಂಬರಿಕರಣ ಮಾಡಲು ಮುಂದಾಗಬೇಕುʼ ಎಂದು ಅಮಸಿದ್ದ ಮಲ್ಲಪ್ಪ ಒಡೆಯರ (ಗ್ರಾಮಸ್ಥರು, ಟಾಕಳಿ ಗ್ರಾಮ) ಒತ್ತಾಯಿಸಿದರು.
ವರದಿ: ರೇವಣಸಿದ್ಧ ಬಗಲಿ*
ಬಿಲ್ ಕಲೆಕ್ಟರ್ ಲೋಕಾ ಬಲೆಗೆ ಬಿದ್ದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.. ಲೋಕಾ ಬಲೆಗೆ ಬಿದ್ದ ಬಿಲ್ ಕಲೆಕ್ಟರ್ 'ಇ' ಖಾತೆ…
ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಚಾಲಕ ಸಾವನ್ನಪ್ಪಿರುವ ಘಟನೆ ದಾಬಸ್ ಪೇಟೆ - ಹೊಸಕೋಟೆ…
ಇಚ್ಚಾ ಶಕ್ತಿಯ ಕೊರತೆ ಅಥವಾ ಕಪಟ ನಾಟಕ ಅಥವಾ ಸ್ವ ಹಿತಾಸಕ್ತಿ...... ಮತದಾರರ ಪಟ್ಟಿ ಪರಿಷ್ಕರಣೆ, ಲೋಕಸಭಾ ಕ್ಷೇತ್ರಗಳ ಪುನರ್…
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದೆ. ವಿಧೇಯಕ ಅಂಗೀಕಾರವಾಗಲು 326 ಸದಸ್ಯರ ಬೆಂಬಲ ಬೇಕಿತ್ತು. ಒಟ್ಟಾರೆ 489 ಸದಸ್ಯರು ಮತ…
2016ರಲ್ಲಿ ಧಾರವಾಡದಲ್ಲಿ ಜಿಲ್ಲಾ ಪಂಚಾಯಿತಿಯ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡ ಹತ್ಯೆ ಪ್ರಕರಣದಲ್ಲಿ ದೋಷಿಗಳಾದ ಮಾಜಿ ಸಚಿವ ಹಾಗೂ ಹಾಲಿ…
ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್ ನೌಕರನ ಬಳಿ 100 ಐಪಿಎಲ್ ಟಿಕೆಟ್ ಪತ್ತೆಯಾಗಿದೆ. ಕ್ಯಾಂಟೀನ್ ನೌಕರ 100ಕ್ಕೂ ಹೆಚ್ಚು ಐಪಿಎಲ್ ಟಿಕೆಟ್ಗಳನ್ನು…