ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಬಂಧಿಸಿದ್ದಾರೆ.
ಸೋಮವಾರ ರಾತ್ರಿ ಎಮಿರೆಟ್ಸ್ ಏರ್ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ತಪಾಸಣೆ ಮಾಡಿದಾಗ ಅವರ ಬಳಿ 14.80 ಕೆ.ಜಿ ಚಿನ್ನ ಪತ್ತೆಯಾಗಿದೆ.
ವಿಚಾರಣೆಯ ನಂತರ ನಟಿಯನ್ನು ಬಂಧಿಸಿದ ಡಿಆರ್ಐ ಅಧಿಕಾರಿಗಳು ಆಕೆಯನ್ನು ಬೆಂಗಳೂರಿನ ಎಚ್ಬಿಆರ್ ಲೇಔಟ್ನಲ್ಲಿರುವ ಡಿಆರ್ಐ ಕಚೇರಿಗೆ ಕರೆದೊಯ್ದರು.
ಸುದೀಪ್ ನಟಿಸಿರುವ ‘ಮಾಣಿಕ್ಯ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ರನ್ಯಾ ರಾವ್, ತಾನು ಡಿಐಜಿ ಡಾ.ಕೆ.ರಾಮಚಂದ್ರರಾವ್ ಅವರ ಮಲಮಗಳು ಎಂದು ಪ್ರಾಥಮಿಕ ತನಿಖೆ ವೇಳೆ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದುಬೈನ ಚಿನ್ನ ಕಳ್ಳಸಾಗಣೆ ಜಾಲದಲ್ಲಿ ಕನ್ನಡದ ನಟಿಯೊಬ್ಬರು ಸಕ್ರಿಯರಾಗಿರುವ ಬಗ್ಗೆ ಡಿಆರ್ಐ ಅಧಿಕಾರಿಗಳಿಗೆ ಕೆಲವು ದಿನಗಳ ಹಿಂದೆ ಮಾಹಿತಿ ದೊರೆತ್ತಿತ್ತು. ಪದೇ ಪದೇ ದುಬೈಗೆ ಹೋಗಿ ಬರುತ್ತಿದ್ದ ರನ್ಯಾ ಓಡಾಟದ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದರು.
15 ದಿನಗಳಲ್ಲಿ ರನ್ಯಾ ರಾವ್ ನಾಲ್ಕು ಬಾರಿ ದುಬೈಗೆ ಹೋಗಿ ಬಂದಿದ್ದರು. ಅಧಿಕಾರಿಗಳು ಸೋಮವಾರ ರಾತ್ರಿ ಆಕೆ ಬರುವುದನ್ನೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು. ನಟಿ ಬಂದಿಳಿಯುತ್ತಲೇ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಅವರ ಶಂಕೆ ನಿಜವಾಯಿತು.
ವಿಮಾನ ನಿಲ್ದಾಣದಲ್ಲಿಯೇ ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ನಟಿಯನ್ನು ಬಂಧಿಸಿ ಡಿಆರ್ಐ ಕಚೇರಿಗೆ ಕರೆದೊಯ್ದರು.
ಕೋರಮಂಗಲದಲ್ಲಿರುವ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಆರೋಪಿಯನ್ನು ಮಂಗಳವಾರ ರಾತ್ರಿ ಹಾಜರು ಪಡಿಸಲಾಯಿತು.
ಡಿಆರ್ಐ ಅಧಿಕಾರಿಗಳು ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಕೋರದ ಕಾರಣ ನ್ಯಾಯಾಧೀಶರು ಮಾರ್ಚ್ 18ರ ವರೆಗೆ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಚಿಕ್ಕಮಗಳೂರಿನ ರನ್ಯಾ 2014ರಲ್ಲಿ ‘ಮಾಣಿಕ್ಯ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ್ದರು. ನಟ ಗಣೇಶ್ ಎದುರು ನಾಯಕಿಯಾಗಿ ‘ಪಟಾಕಿ’ ಸಿನಿಮಾ ಹಾಗೂ ತಮಿಳು ಸಿನಿಮಾವೊಂದರಲ್ಲಿ ಆಕೆ ನಟಿಸಿದ್ದಾರೆ. ಆದರೆ, ವೃತ್ತಿ ಬದುಕಿನಲ್ಲಿ ಅಷ್ಟೇನೂ ಯಶಸ್ಸು ಗಳಿಸಿರಲಿಲ್ಲ ಎಂದು ಹೇಳಲಾಗಿದೆ.