Categories: ಕೃಷಿ

ಸೇಬು ಬೆಳೆದು ಸೈ ಎನಿಸಿಕೊಂಡ ರೈತ: ಕೃಷಿಕನ‌ ಪ್ರಯೋಗಶೀಲತೆಗೆ ಭರಪೂರ ಮೆಚ್ಚುಗೆ

ಹೊಸಕೋಟೆ: ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿದಂತೆ ತಂಪು ಹವಾಗುಣದ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ಸೇಬು ಈಗ ಸರ್ವ ಋತು ಬೆಳೆಯಾಗಿ ಬದಲಾಗಿದೆ.

ಸಮಶೀತೋಷ್ಣ ಬೆಳೆ ಎನಿಸಿರುವ ಕಾಶ್ಮೀರಿ ಸೇಬನ್ನು ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಮೀಪವೇ ಇರುವ ಹೊಸಕೋಟೆಯಲ್ಲೂ ಬೆಳೆಯಲಾಗಿದೆ. ಪ್ರಯೋಗಶೀಲ ರೈತನ ಮೊದಲ ಪ್ರಯೋಗದಲ್ಲೇ ಉತ್ತಮ ಇಳುವರಿಯೊಂದಿಗೆ ಸೇಬಿನ ಬೆಳೆ ನಳನಳಿಸುತ್ತಿದೆ.

ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ಸಿದ್ದೇನಹಳ್ಳಿ ನಿವಾಸಿಯಾದ ಬಸವರಾಜು ಅವರು ರೇಷ್ಮೆ ಹಾಗೂ ತರಕಾರಿ ಬೆಳೆಯಿಂದ ಸೇಬು ಬೆಳೆಯತ್ತ ಹೊರಳಿದ್ದಾರೆ. ತರಕಾರಿ, ಸೊಪ್ಪು ಬೆಳೆಯಿಂದ ದಿಢೀರ್ ಸೇಬಿನ ಬೆಳೆಯತ್ತ ಮುಖ ಮಾಡಿದಾಗ ಬಸವರಾಜು ಅವರನ್ನು ಮೂದಲಿಸಿದವರು ಹಲವರು. ಆದರೆ, ಯಾರ ಮೂದಲಿಕೆಗೂ ಕುಗ್ಗದೇ‌ ದಿಟ್ಟ ಹೆಜ್ಜೆ ಇಟ್ಟಿದ್ದರಿಂದಲೇ ಇಂದು ಬಸವರಾಜು ಅವರು ಪ್ರಗತಿಪರ, ಪ್ರಯೋಗಶೀಲ ರೈತರಾಗಿ ಹೊರಹೊಮ್ಮಿದ್ದಾರೆ.

ಈಗಾಗಲೇ ಚಿತ್ರದುರ್ಗ, ಮಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೇಬು ಬೆಳೆಯ ಪ್ರಯೋಗ ಯಶಸ್ವಿಯಾಗಿದೆ.

ಸಿದ್ದೇನಹಳ್ಳಿಯ ಬಸವರಾಜು ಅವರು ಒಂದು‌ ಎಕರೆ ನಾಲ್ಕು ಗುಂಟೆಯಲ್ಲಿ 442 ಸೇಬಿನ ಗಿಡಗಳನ್ನು ಬೆಳೆದಿದ್ದು, ಗಿಡದಲ್ಲಿ ಹಣ್ಣಿನ ಗೊಂಚಲುಗಳು ತೊನೆದಾಡುತ್ತಿವೆ. ಸೇಬಿನ ಗಿಡಗಳನ್ನು ನೆಟ್ಟು ಒಂದು ವರ್ಷ ಎಂಟು‌ ತಿಂಗಳ ಬಳಿಕ ಹಣ್ಣುಗಳು ನಳನಳಿಸುತ್ತಿವೆ. ಪ್ರಸ್ತುತ ಬಂದಿರುವ ಇಳುವರಿ ಸುಮಾರು 2 ಟನ್ ಆಗುವ ‌ನಿರೀಕ್ಷೆ‌ ಇದೆ.

ಸೇಬು ಬೆಳೆಯಲು ಕಾರಣವೇನು..?

ಬಸವರಾಜು ಅವರು ಈ ಹಿಂದೆ ರೇಷ್ಮೆ ಬೆಳೆ ಬೆಳೆಯುತ್ತಿದ್ದರು. ಅದಾದ ಬಳಿಕ ತರಕಾರಿ ಬೆಳೆದು ಅತ್ಯಲ್ಪ‌ ಲಾಭ ಕಾಣುತ್ತಿದ್ದರು. ಬಂದ ಅಲ್ಪಸ್ವಲ್ಪ ಲಾಭದಲ್ಲೇ ಸಂಸಾರ, ಬೆಳೆ ಖರ್ಚು, ಮಕ್ಕಳ ವ್ಯಾಸಂಗದ ಖರ್ಚು ನಿಭಾಯಿಸುತ್ತಿದ್ದರು. ಒಮ್ಮೆ 6ನೇ ತರಗತಿ ಓದುತ್ತಿರುವ ಅವರ‌ ಮಗ ಆಡಿದ ಕೆಲ‌ ಮಾತುಗಳು ಬಸವರಾಜು ಅವರನ್ನು ಚಿಂತೆಗೀಡು‌ ಮಾಡಿದವು. ಅದೇನೆಂದರೆ, ಸಣ್ಣಪುಟ್ಟ ಬೆಳೆಯಿಂದ ಯಾವುದೇ ಲಾಭವಿಲ್ಲ. ಹೀಗಾದರೆ ಎಸ್ಸೆಸ್ಸೆಲ್ಸಿ ಮುಂದಿನ ಶಿಕ್ಷಣ‌ ಮಾಡುವುದು ಎಂದು ಬಸವರಾಜು ಬಳಿ ಮಗ ಕೇಳಿದ್ದರಂತೆ. ಮಗನ ಮಾತು ತೆಗೆದುಹಾಕದೇ ಯೋಚಿಸಿದಾಗ ಹೊಳೆದಿದ್ದೇ ಸೇಬು ಬೆಳೆಯ ಕಲ್ಪನೆ.

ಸೇಬು ಸಸಿ ತಂದಿದ್ದು‌ ಎಲ್ಲಿಂದ..?

ಜಿಕೆವಿಕೆ, ಕೃಷಿ ಇಲಾಖೆ, ಯೂಟ್ಯೂಬ್ ಗಳಲ್ಲಿ ಸೇಬಿನ ಬೆಳೆಯ ಬಗ್ಗೆ‌ ಸಾಕಷ್ಟು ಮಾಹಿತಿಗಾಗಿ ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ.‌ ಶಿರಾದಲ್ಲಿ ಸೇಬು ಬೆಳೆದಿರುವ ಕುರಿತು ಸ್ನೇಹಿತರೊಬ್ಬರು ಹೇಳಿದ್ದರು. ಅದರಂತೆ ಶಿರಾಗೆ ಹೋಗಿ‌ ನೋಡಿದಾಗ ಅಲ್ಲಿ ಒಂದೇ ಒಂದು ಗಿಡವಿತ್ತು. ಬೆಳೆ ವಿಧಾನದ ಕುರಿತು ಅವರೂ ಕೂಡ ಅಷ್ಟೇನೂ‌ ಮಾಹಿತಿ‌ ನೀಡಲಿಲ್ಲ. ಬಳಿಕ‌‌ ಮಂಗಳೂರು ಹೋದರೂ ಉಪಯೋಗ ಆಗಲಿಲ್ಲ.‌ ಕೊನೆಗೆ ಯೂಟ್ಯೂಬ್ ನಲ್ಲಿ ಬಿಜಾಪುರ(ವಿಜಯಪುರ)ದ ಸಚಿನ್ ಬಾಲಕೊಂಡ ಬೆಳೆದಿರುವ ಸೇಬು ಬೆಳೆಯನ್ನು ನೋಡಿ ಪೋನ್ ಮೂಲಕ‌ ಮಾಹಿತಿ ಪಡೆದರು. ಅವರಿಂದಲೇ ಪ್ರತಿ ಗಿಡಕ್ಕೆ 300 ರೂ.ಪಾವತಿಸಿ ಒಟ್ಟು 442 ಗಿಡ ಖರೀದಿಸಿದರು. ಸಚಿನ್ ಬಾಲಕೊಂಡ ಅವರೇ ಮನೆಗೆ ಸಸಿಗಳನ್ನು ಡೆಲಿವರಿ ಕೊಟ್ಟರು ಎಂದು ಬಸವರಾಜು ವಿವರಿಸಿದರು.

ಸೇಬು ಬೆಳೆಗೆ ಸಿದ್ಧತೆ ಹೇಗೆ?

ಒಂದು ಎಕರೆ ನಾಲ್ಕು ಗುಂಟೆಯಲ್ಲಿ 10 ಅಡಿ ಸುತ್ತಳತೆಗೆ ಒಂದರಂತೆ ಗಿಡ‌ ನಾಟಿ‌ ಮಾಡಲು ಗುಂಡಿ ತೆಗೆಸಿದರು. ಎರಡು ಅಡಿ ಆಳದ ಗುಂಡಿ ತೆಗೆದು ಅದಕ್ಕೆ ನಾಟಿ ಗೊಬ್ಬರ, ಬೇವು ಹಾಗೂ ಹೊಂಗೆ ಇಂಡಿ ಹಾಕಿ ಸೇಬಿನ ಗಿಡಗಳನ್ನು ಭರಣಿ ಮಳೆಯ ನಂತರ ನಾಟಿ‌ ಮಾಡಿದರು. ಪ್ರತಿ ಮೂರು ದಿನಕ್ಕೆ ಒಮ್ಮೆ ನೀರು ಹಾಯಿಸಿದರು.

ಈ ಕುರಿತು ವಿವರಿಸಿದ ಅವರು, ಗಿಡ‌ ನಾಟಿ ಮಾಡಿದ ಆರು ತಿಂಗಳ ಬಳಿಕ ಕಟಿಂಗ್ ಮಾಡಿದೆ. ಅದು ಕವಲುಗಳಾಗಿ ಬೆಳೆಯಿತು.‌ ಬರೋಬ್ಬರಿ ಒಂದು ವರ್ಷ ಎಂಟು ತಿಂಗಳಿಗೆ ಫಸಲು ಕಾಣಿಸಿತು. ಕೊನೆಗೂ ಸೇಬು ಬೆಳೆ ಕೈ ಹಿಡಿಯಿತು. ಒಂದು ಎಕರೆಗೆ ಹಾಕಿದ್ದ ₹3 ಲಕ್ಷ ಬಂಡವಾಳ ವಾಪಸ್ ಬಂತು ಎಂದು ಸಂತಸ ವ್ಯಕ್ತಪಡಿಸಿದರು.

ಸ್ಥಳೀಯವಾಗಿಯೇ ಮಾರಾಟವಾದ ಸೇಬು

ಸೇಬಿನ ಮೊದಲ ಫಸಲನ್ನು ಸುತ್ತಮುತ್ತಲ ಗ್ರಾಮಸ್ಥರಿಗೆ ಕೆ.ಜಿಗೆ ₹150 ರಂತೆ ಮಾರಾಟ ಮಾಡಿದೆ. ಇಲ್ಲಿಯವರೆಗೆ ₹1,200ಕೆ.ಜಿಯಷ್ಟು ಸೇಬು ಮಾರಾಟ‌ ಮಾಡಿದ್ದೇನೆ ಎಂದರು.

ಪ್ರಯೋಗಶೀಲ ಕೃಷಿಯಲ್ಲಿ‌ ತೊಡಗಿಸಿಕೊಂಡ ರೈತನ ಸಾಧನೆಗೆ ಕುಟುಂಬಸ್ಥರು, ಗ್ರಾಮಸ್ಥರು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳೆ ವೀಕ್ಷಿಸಲು ಬರುವವರ ಸಂಖ್ಯೆಯೂ ಹೆಚ್ಚಿದೆ.

Ramesh Babu

Journalist

Recent Posts

ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಹೊಸ ವೇದಿಕೆ ಒಂದೇ ಆವರಣದಲ್ಲಿ ಬಾಕ್ಸಿಂಗ್, ಕುಸ್ತಿ, ಜೂಡೋ, ಕಬ್ಬಡಿ, ಬ್ಯಾಡ್ಮಿಂಟನ್, ಸ್ಕೇಟಿಂಗ್ ಸೌಲಭ್ಯ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…

20 hours ago

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಅಭಿಯಾನ: ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕರೆತರಲು ಕ್ರಮ

  ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…

1 day ago

ಪಾಕಿಸ್ತಾನಿ ಗ್ಯಾಂಗ್‌ ಜೊತೆ ಸಂಪರ್ಕ ಆರೋಪ: ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಬಂಧನ

ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…

2 days ago

ದೊಡ್ಡಬಳ್ಳಾಪುರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…

3 days ago

ಘಾಟಿ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಸಂಭ್ರಮ; ಮಹಿಳೆಯರಿಗೆ ಬಳೆ, ಅರಶಿನ–ಕುಂಕುಮ ವಿತರಣೆ

ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…

3 days ago

ವರಮಹಾಲಕ್ಷ್ಮಿ ಹಬ್ಬ…..

ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…

3 days ago