Categories: ಕೃಷಿ

ಸೇಬು ಬೆಳೆದು ಸೈ ಎನಿಸಿಕೊಂಡ ರೈತ: ಕೃಷಿಕನ‌ ಪ್ರಯೋಗಶೀಲತೆಗೆ ಭರಪೂರ ಮೆಚ್ಚುಗೆ

ಹೊಸಕೋಟೆ: ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿದಂತೆ ತಂಪು ಹವಾಗುಣದ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ಸೇಬು ಈಗ ಸರ್ವ ಋತು ಬೆಳೆಯಾಗಿ ಬದಲಾಗಿದೆ.

ಸಮಶೀತೋಷ್ಣ ಬೆಳೆ ಎನಿಸಿರುವ ಕಾಶ್ಮೀರಿ ಸೇಬನ್ನು ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಮೀಪವೇ ಇರುವ ಹೊಸಕೋಟೆಯಲ್ಲೂ ಬೆಳೆಯಲಾಗಿದೆ. ಪ್ರಯೋಗಶೀಲ ರೈತನ ಮೊದಲ ಪ್ರಯೋಗದಲ್ಲೇ ಉತ್ತಮ ಇಳುವರಿಯೊಂದಿಗೆ ಸೇಬಿನ ಬೆಳೆ ನಳನಳಿಸುತ್ತಿದೆ.

ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ಸಿದ್ದೇನಹಳ್ಳಿ ನಿವಾಸಿಯಾದ ಬಸವರಾಜು ಅವರು ರೇಷ್ಮೆ ಹಾಗೂ ತರಕಾರಿ ಬೆಳೆಯಿಂದ ಸೇಬು ಬೆಳೆಯತ್ತ ಹೊರಳಿದ್ದಾರೆ. ತರಕಾರಿ, ಸೊಪ್ಪು ಬೆಳೆಯಿಂದ ದಿಢೀರ್ ಸೇಬಿನ ಬೆಳೆಯತ್ತ ಮುಖ ಮಾಡಿದಾಗ ಬಸವರಾಜು ಅವರನ್ನು ಮೂದಲಿಸಿದವರು ಹಲವರು. ಆದರೆ, ಯಾರ ಮೂದಲಿಕೆಗೂ ಕುಗ್ಗದೇ‌ ದಿಟ್ಟ ಹೆಜ್ಜೆ ಇಟ್ಟಿದ್ದರಿಂದಲೇ ಇಂದು ಬಸವರಾಜು ಅವರು ಪ್ರಗತಿಪರ, ಪ್ರಯೋಗಶೀಲ ರೈತರಾಗಿ ಹೊರಹೊಮ್ಮಿದ್ದಾರೆ.

ಈಗಾಗಲೇ ಚಿತ್ರದುರ್ಗ, ಮಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೇಬು ಬೆಳೆಯ ಪ್ರಯೋಗ ಯಶಸ್ವಿಯಾಗಿದೆ.

ಸಿದ್ದೇನಹಳ್ಳಿಯ ಬಸವರಾಜು ಅವರು ಒಂದು‌ ಎಕರೆ ನಾಲ್ಕು ಗುಂಟೆಯಲ್ಲಿ 442 ಸೇಬಿನ ಗಿಡಗಳನ್ನು ಬೆಳೆದಿದ್ದು, ಗಿಡದಲ್ಲಿ ಹಣ್ಣಿನ ಗೊಂಚಲುಗಳು ತೊನೆದಾಡುತ್ತಿವೆ. ಸೇಬಿನ ಗಿಡಗಳನ್ನು ನೆಟ್ಟು ಒಂದು ವರ್ಷ ಎಂಟು‌ ತಿಂಗಳ ಬಳಿಕ ಹಣ್ಣುಗಳು ನಳನಳಿಸುತ್ತಿವೆ. ಪ್ರಸ್ತುತ ಬಂದಿರುವ ಇಳುವರಿ ಸುಮಾರು 2 ಟನ್ ಆಗುವ ‌ನಿರೀಕ್ಷೆ‌ ಇದೆ.

ಸೇಬು ಬೆಳೆಯಲು ಕಾರಣವೇನು..?

ಬಸವರಾಜು ಅವರು ಈ ಹಿಂದೆ ರೇಷ್ಮೆ ಬೆಳೆ ಬೆಳೆಯುತ್ತಿದ್ದರು. ಅದಾದ ಬಳಿಕ ತರಕಾರಿ ಬೆಳೆದು ಅತ್ಯಲ್ಪ‌ ಲಾಭ ಕಾಣುತ್ತಿದ್ದರು. ಬಂದ ಅಲ್ಪಸ್ವಲ್ಪ ಲಾಭದಲ್ಲೇ ಸಂಸಾರ, ಬೆಳೆ ಖರ್ಚು, ಮಕ್ಕಳ ವ್ಯಾಸಂಗದ ಖರ್ಚು ನಿಭಾಯಿಸುತ್ತಿದ್ದರು. ಒಮ್ಮೆ 6ನೇ ತರಗತಿ ಓದುತ್ತಿರುವ ಅವರ‌ ಮಗ ಆಡಿದ ಕೆಲ‌ ಮಾತುಗಳು ಬಸವರಾಜು ಅವರನ್ನು ಚಿಂತೆಗೀಡು‌ ಮಾಡಿದವು. ಅದೇನೆಂದರೆ, ಸಣ್ಣಪುಟ್ಟ ಬೆಳೆಯಿಂದ ಯಾವುದೇ ಲಾಭವಿಲ್ಲ. ಹೀಗಾದರೆ ಎಸ್ಸೆಸ್ಸೆಲ್ಸಿ ಮುಂದಿನ ಶಿಕ್ಷಣ‌ ಮಾಡುವುದು ಎಂದು ಬಸವರಾಜು ಬಳಿ ಮಗ ಕೇಳಿದ್ದರಂತೆ. ಮಗನ ಮಾತು ತೆಗೆದುಹಾಕದೇ ಯೋಚಿಸಿದಾಗ ಹೊಳೆದಿದ್ದೇ ಸೇಬು ಬೆಳೆಯ ಕಲ್ಪನೆ.

ಸೇಬು ಸಸಿ ತಂದಿದ್ದು‌ ಎಲ್ಲಿಂದ..?

ಜಿಕೆವಿಕೆ, ಕೃಷಿ ಇಲಾಖೆ, ಯೂಟ್ಯೂಬ್ ಗಳಲ್ಲಿ ಸೇಬಿನ ಬೆಳೆಯ ಬಗ್ಗೆ‌ ಸಾಕಷ್ಟು ಮಾಹಿತಿಗಾಗಿ ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ.‌ ಶಿರಾದಲ್ಲಿ ಸೇಬು ಬೆಳೆದಿರುವ ಕುರಿತು ಸ್ನೇಹಿತರೊಬ್ಬರು ಹೇಳಿದ್ದರು. ಅದರಂತೆ ಶಿರಾಗೆ ಹೋಗಿ‌ ನೋಡಿದಾಗ ಅಲ್ಲಿ ಒಂದೇ ಒಂದು ಗಿಡವಿತ್ತು. ಬೆಳೆ ವಿಧಾನದ ಕುರಿತು ಅವರೂ ಕೂಡ ಅಷ್ಟೇನೂ‌ ಮಾಹಿತಿ‌ ನೀಡಲಿಲ್ಲ. ಬಳಿಕ‌‌ ಮಂಗಳೂರು ಹೋದರೂ ಉಪಯೋಗ ಆಗಲಿಲ್ಲ.‌ ಕೊನೆಗೆ ಯೂಟ್ಯೂಬ್ ನಲ್ಲಿ ಬಿಜಾಪುರ(ವಿಜಯಪುರ)ದ ಸಚಿನ್ ಬಾಲಕೊಂಡ ಬೆಳೆದಿರುವ ಸೇಬು ಬೆಳೆಯನ್ನು ನೋಡಿ ಪೋನ್ ಮೂಲಕ‌ ಮಾಹಿತಿ ಪಡೆದರು. ಅವರಿಂದಲೇ ಪ್ರತಿ ಗಿಡಕ್ಕೆ 300 ರೂ.ಪಾವತಿಸಿ ಒಟ್ಟು 442 ಗಿಡ ಖರೀದಿಸಿದರು. ಸಚಿನ್ ಬಾಲಕೊಂಡ ಅವರೇ ಮನೆಗೆ ಸಸಿಗಳನ್ನು ಡೆಲಿವರಿ ಕೊಟ್ಟರು ಎಂದು ಬಸವರಾಜು ವಿವರಿಸಿದರು.

ಸೇಬು ಬೆಳೆಗೆ ಸಿದ್ಧತೆ ಹೇಗೆ?

ಒಂದು ಎಕರೆ ನಾಲ್ಕು ಗುಂಟೆಯಲ್ಲಿ 10 ಅಡಿ ಸುತ್ತಳತೆಗೆ ಒಂದರಂತೆ ಗಿಡ‌ ನಾಟಿ‌ ಮಾಡಲು ಗುಂಡಿ ತೆಗೆಸಿದರು. ಎರಡು ಅಡಿ ಆಳದ ಗುಂಡಿ ತೆಗೆದು ಅದಕ್ಕೆ ನಾಟಿ ಗೊಬ್ಬರ, ಬೇವು ಹಾಗೂ ಹೊಂಗೆ ಇಂಡಿ ಹಾಕಿ ಸೇಬಿನ ಗಿಡಗಳನ್ನು ಭರಣಿ ಮಳೆಯ ನಂತರ ನಾಟಿ‌ ಮಾಡಿದರು. ಪ್ರತಿ ಮೂರು ದಿನಕ್ಕೆ ಒಮ್ಮೆ ನೀರು ಹಾಯಿಸಿದರು.

ಈ ಕುರಿತು ವಿವರಿಸಿದ ಅವರು, ಗಿಡ‌ ನಾಟಿ ಮಾಡಿದ ಆರು ತಿಂಗಳ ಬಳಿಕ ಕಟಿಂಗ್ ಮಾಡಿದೆ. ಅದು ಕವಲುಗಳಾಗಿ ಬೆಳೆಯಿತು.‌ ಬರೋಬ್ಬರಿ ಒಂದು ವರ್ಷ ಎಂಟು ತಿಂಗಳಿಗೆ ಫಸಲು ಕಾಣಿಸಿತು. ಕೊನೆಗೂ ಸೇಬು ಬೆಳೆ ಕೈ ಹಿಡಿಯಿತು. ಒಂದು ಎಕರೆಗೆ ಹಾಕಿದ್ದ ₹3 ಲಕ್ಷ ಬಂಡವಾಳ ವಾಪಸ್ ಬಂತು ಎಂದು ಸಂತಸ ವ್ಯಕ್ತಪಡಿಸಿದರು.

ಸ್ಥಳೀಯವಾಗಿಯೇ ಮಾರಾಟವಾದ ಸೇಬು

ಸೇಬಿನ ಮೊದಲ ಫಸಲನ್ನು ಸುತ್ತಮುತ್ತಲ ಗ್ರಾಮಸ್ಥರಿಗೆ ಕೆ.ಜಿಗೆ ₹150 ರಂತೆ ಮಾರಾಟ ಮಾಡಿದೆ. ಇಲ್ಲಿಯವರೆಗೆ ₹1,200ಕೆ.ಜಿಯಷ್ಟು ಸೇಬು ಮಾರಾಟ‌ ಮಾಡಿದ್ದೇನೆ ಎಂದರು.

ಪ್ರಯೋಗಶೀಲ ಕೃಷಿಯಲ್ಲಿ‌ ತೊಡಗಿಸಿಕೊಂಡ ರೈತನ ಸಾಧನೆಗೆ ಕುಟುಂಬಸ್ಥರು, ಗ್ರಾಮಸ್ಥರು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳೆ ವೀಕ್ಷಿಸಲು ಬರುವವರ ಸಂಖ್ಯೆಯೂ ಹೆಚ್ಚಿದೆ.

Ramesh Babu

Journalist

Recent Posts

ಯೋಜನಾ ಪ್ರಾಧಿಕಾರಕ್ಕೆ ಮುನಿರಾಜು ಆಯ್ಕೆ: ಯುವ ಕಾಂಗ್ರೆಸ್‌ನಿಂದ ಆತ್ಮೀಯ ಅಭಿನಂದನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…

3 hours ago

ವಿಯೆಟ್ನಾಂನಿಂದ 1.38 ಕೋಟಿ ಮೌಲ್ಯದ ಹೈಡ್ರೋಫೋನಿಕ್ ಗಾಂಜಾ ಸಾಗಾಟ: ಆರೋಪಿ ಬಂಧನ

ದೇವನಹಳ್ಳಿ: ವಿಯೆಟ್ನಾಂನ ಹಾನೊಯ್ ನಗರದಿಂದ ಬೆಂಗಳೂರಿಗೆ ವಿಮಾನದ ಮೂಲಕ ಹೈಡ್ರೋಫೋನಿಕ್ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ…

5 hours ago

ಗೃಹಜ್ಯೋತಿಗೆ ಮನೆಮನೆ ಬಾಗಿಲು ತಟ್ಟಿದ ಬೆಸ್ಕಾಂ:

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಕಾರ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವೇಗ…

6 hours ago

ಜನರನ್ನು ತಾಲೂಕು ಕಚೇರಿಗೆ ಅಲೆದಾಟ ತಪ್ಪಿಸಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಿ- ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಜಾ ಸೇವಾ…

19 hours ago

ಭಾರತಕ್ಕೆ ಕ್ಸಿ ಜಿನ್‌ಪಿಂಗ್ ಭೇಟಿ: ಮೋದಿ–ಕ್ಸಿ ದ್ವಿಪಕ್ಷೀಯ ಮಾತುಕತೆ ಇಂದು

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ನವದೆಹಲಿಗೆ…

23 hours ago

ಮಧುರೆ ದೇವಾಲಯದ ಬಳಿ ಮೇಲ್ಸೇತುವೆ ಅವ್ಯವಸ್ಥೆ: ಮೇಲಕ್ಕೆ ಚಾಚಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…

1 day ago