Categories: ಕೃಷಿ

ಸೇಬು ಬೆಳೆದು ಸೈ ಎನಿಸಿಕೊಂಡ ರೈತ: ಕೃಷಿಕನ‌ ಪ್ರಯೋಗಶೀಲತೆಗೆ ಭರಪೂರ ಮೆಚ್ಚುಗೆ

ಹೊಸಕೋಟೆ: ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿದಂತೆ ತಂಪು ಹವಾಗುಣದ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ಸೇಬು ಈಗ ಸರ್ವ ಋತು ಬೆಳೆಯಾಗಿ ಬದಲಾಗಿದೆ.

ಸಮಶೀತೋಷ್ಣ ಬೆಳೆ ಎನಿಸಿರುವ ಕಾಶ್ಮೀರಿ ಸೇಬನ್ನು ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಮೀಪವೇ ಇರುವ ಹೊಸಕೋಟೆಯಲ್ಲೂ ಬೆಳೆಯಲಾಗಿದೆ. ಪ್ರಯೋಗಶೀಲ ರೈತನ ಮೊದಲ ಪ್ರಯೋಗದಲ್ಲೇ ಉತ್ತಮ ಇಳುವರಿಯೊಂದಿಗೆ ಸೇಬಿನ ಬೆಳೆ ನಳನಳಿಸುತ್ತಿದೆ.

ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ಸಿದ್ದೇನಹಳ್ಳಿ ನಿವಾಸಿಯಾದ ಬಸವರಾಜು ಅವರು ರೇಷ್ಮೆ ಹಾಗೂ ತರಕಾರಿ ಬೆಳೆಯಿಂದ ಸೇಬು ಬೆಳೆಯತ್ತ ಹೊರಳಿದ್ದಾರೆ. ತರಕಾರಿ, ಸೊಪ್ಪು ಬೆಳೆಯಿಂದ ದಿಢೀರ್ ಸೇಬಿನ ಬೆಳೆಯತ್ತ ಮುಖ ಮಾಡಿದಾಗ ಬಸವರಾಜು ಅವರನ್ನು ಮೂದಲಿಸಿದವರು ಹಲವರು. ಆದರೆ, ಯಾರ ಮೂದಲಿಕೆಗೂ ಕುಗ್ಗದೇ‌ ದಿಟ್ಟ ಹೆಜ್ಜೆ ಇಟ್ಟಿದ್ದರಿಂದಲೇ ಇಂದು ಬಸವರಾಜು ಅವರು ಪ್ರಗತಿಪರ, ಪ್ರಯೋಗಶೀಲ ರೈತರಾಗಿ ಹೊರಹೊಮ್ಮಿದ್ದಾರೆ.

ಈಗಾಗಲೇ ಚಿತ್ರದುರ್ಗ, ಮಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೇಬು ಬೆಳೆಯ ಪ್ರಯೋಗ ಯಶಸ್ವಿಯಾಗಿದೆ.

ಸಿದ್ದೇನಹಳ್ಳಿಯ ಬಸವರಾಜು ಅವರು ಒಂದು‌ ಎಕರೆ ನಾಲ್ಕು ಗುಂಟೆಯಲ್ಲಿ 442 ಸೇಬಿನ ಗಿಡಗಳನ್ನು ಬೆಳೆದಿದ್ದು, ಗಿಡದಲ್ಲಿ ಹಣ್ಣಿನ ಗೊಂಚಲುಗಳು ತೊನೆದಾಡುತ್ತಿವೆ. ಸೇಬಿನ ಗಿಡಗಳನ್ನು ನೆಟ್ಟು ಒಂದು ವರ್ಷ ಎಂಟು‌ ತಿಂಗಳ ಬಳಿಕ ಹಣ್ಣುಗಳು ನಳನಳಿಸುತ್ತಿವೆ. ಪ್ರಸ್ತುತ ಬಂದಿರುವ ಇಳುವರಿ ಸುಮಾರು 2 ಟನ್ ಆಗುವ ‌ನಿರೀಕ್ಷೆ‌ ಇದೆ.

ಸೇಬು ಬೆಳೆಯಲು ಕಾರಣವೇನು..?

ಬಸವರಾಜು ಅವರು ಈ ಹಿಂದೆ ರೇಷ್ಮೆ ಬೆಳೆ ಬೆಳೆಯುತ್ತಿದ್ದರು. ಅದಾದ ಬಳಿಕ ತರಕಾರಿ ಬೆಳೆದು ಅತ್ಯಲ್ಪ‌ ಲಾಭ ಕಾಣುತ್ತಿದ್ದರು. ಬಂದ ಅಲ್ಪಸ್ವಲ್ಪ ಲಾಭದಲ್ಲೇ ಸಂಸಾರ, ಬೆಳೆ ಖರ್ಚು, ಮಕ್ಕಳ ವ್ಯಾಸಂಗದ ಖರ್ಚು ನಿಭಾಯಿಸುತ್ತಿದ್ದರು. ಒಮ್ಮೆ 6ನೇ ತರಗತಿ ಓದುತ್ತಿರುವ ಅವರ‌ ಮಗ ಆಡಿದ ಕೆಲ‌ ಮಾತುಗಳು ಬಸವರಾಜು ಅವರನ್ನು ಚಿಂತೆಗೀಡು‌ ಮಾಡಿದವು. ಅದೇನೆಂದರೆ, ಸಣ್ಣಪುಟ್ಟ ಬೆಳೆಯಿಂದ ಯಾವುದೇ ಲಾಭವಿಲ್ಲ. ಹೀಗಾದರೆ ಎಸ್ಸೆಸ್ಸೆಲ್ಸಿ ಮುಂದಿನ ಶಿಕ್ಷಣ‌ ಮಾಡುವುದು ಎಂದು ಬಸವರಾಜು ಬಳಿ ಮಗ ಕೇಳಿದ್ದರಂತೆ. ಮಗನ ಮಾತು ತೆಗೆದುಹಾಕದೇ ಯೋಚಿಸಿದಾಗ ಹೊಳೆದಿದ್ದೇ ಸೇಬು ಬೆಳೆಯ ಕಲ್ಪನೆ.

ಸೇಬು ಸಸಿ ತಂದಿದ್ದು‌ ಎಲ್ಲಿಂದ..?

ಜಿಕೆವಿಕೆ, ಕೃಷಿ ಇಲಾಖೆ, ಯೂಟ್ಯೂಬ್ ಗಳಲ್ಲಿ ಸೇಬಿನ ಬೆಳೆಯ ಬಗ್ಗೆ‌ ಸಾಕಷ್ಟು ಮಾಹಿತಿಗಾಗಿ ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ.‌ ಶಿರಾದಲ್ಲಿ ಸೇಬು ಬೆಳೆದಿರುವ ಕುರಿತು ಸ್ನೇಹಿತರೊಬ್ಬರು ಹೇಳಿದ್ದರು. ಅದರಂತೆ ಶಿರಾಗೆ ಹೋಗಿ‌ ನೋಡಿದಾಗ ಅಲ್ಲಿ ಒಂದೇ ಒಂದು ಗಿಡವಿತ್ತು. ಬೆಳೆ ವಿಧಾನದ ಕುರಿತು ಅವರೂ ಕೂಡ ಅಷ್ಟೇನೂ‌ ಮಾಹಿತಿ‌ ನೀಡಲಿಲ್ಲ. ಬಳಿಕ‌‌ ಮಂಗಳೂರು ಹೋದರೂ ಉಪಯೋಗ ಆಗಲಿಲ್ಲ.‌ ಕೊನೆಗೆ ಯೂಟ್ಯೂಬ್ ನಲ್ಲಿ ಬಿಜಾಪುರ(ವಿಜಯಪುರ)ದ ಸಚಿನ್ ಬಾಲಕೊಂಡ ಬೆಳೆದಿರುವ ಸೇಬು ಬೆಳೆಯನ್ನು ನೋಡಿ ಪೋನ್ ಮೂಲಕ‌ ಮಾಹಿತಿ ಪಡೆದರು. ಅವರಿಂದಲೇ ಪ್ರತಿ ಗಿಡಕ್ಕೆ 300 ರೂ.ಪಾವತಿಸಿ ಒಟ್ಟು 442 ಗಿಡ ಖರೀದಿಸಿದರು. ಸಚಿನ್ ಬಾಲಕೊಂಡ ಅವರೇ ಮನೆಗೆ ಸಸಿಗಳನ್ನು ಡೆಲಿವರಿ ಕೊಟ್ಟರು ಎಂದು ಬಸವರಾಜು ವಿವರಿಸಿದರು.

ಸೇಬು ಬೆಳೆಗೆ ಸಿದ್ಧತೆ ಹೇಗೆ?

ಒಂದು ಎಕರೆ ನಾಲ್ಕು ಗುಂಟೆಯಲ್ಲಿ 10 ಅಡಿ ಸುತ್ತಳತೆಗೆ ಒಂದರಂತೆ ಗಿಡ‌ ನಾಟಿ‌ ಮಾಡಲು ಗುಂಡಿ ತೆಗೆಸಿದರು. ಎರಡು ಅಡಿ ಆಳದ ಗುಂಡಿ ತೆಗೆದು ಅದಕ್ಕೆ ನಾಟಿ ಗೊಬ್ಬರ, ಬೇವು ಹಾಗೂ ಹೊಂಗೆ ಇಂಡಿ ಹಾಕಿ ಸೇಬಿನ ಗಿಡಗಳನ್ನು ಭರಣಿ ಮಳೆಯ ನಂತರ ನಾಟಿ‌ ಮಾಡಿದರು. ಪ್ರತಿ ಮೂರು ದಿನಕ್ಕೆ ಒಮ್ಮೆ ನೀರು ಹಾಯಿಸಿದರು.

ಈ ಕುರಿತು ವಿವರಿಸಿದ ಅವರು, ಗಿಡ‌ ನಾಟಿ ಮಾಡಿದ ಆರು ತಿಂಗಳ ಬಳಿಕ ಕಟಿಂಗ್ ಮಾಡಿದೆ. ಅದು ಕವಲುಗಳಾಗಿ ಬೆಳೆಯಿತು.‌ ಬರೋಬ್ಬರಿ ಒಂದು ವರ್ಷ ಎಂಟು ತಿಂಗಳಿಗೆ ಫಸಲು ಕಾಣಿಸಿತು. ಕೊನೆಗೂ ಸೇಬು ಬೆಳೆ ಕೈ ಹಿಡಿಯಿತು. ಒಂದು ಎಕರೆಗೆ ಹಾಕಿದ್ದ ₹3 ಲಕ್ಷ ಬಂಡವಾಳ ವಾಪಸ್ ಬಂತು ಎಂದು ಸಂತಸ ವ್ಯಕ್ತಪಡಿಸಿದರು.

ಸ್ಥಳೀಯವಾಗಿಯೇ ಮಾರಾಟವಾದ ಸೇಬು

ಸೇಬಿನ ಮೊದಲ ಫಸಲನ್ನು ಸುತ್ತಮುತ್ತಲ ಗ್ರಾಮಸ್ಥರಿಗೆ ಕೆ.ಜಿಗೆ ₹150 ರಂತೆ ಮಾರಾಟ ಮಾಡಿದೆ. ಇಲ್ಲಿಯವರೆಗೆ ₹1,200ಕೆ.ಜಿಯಷ್ಟು ಸೇಬು ಮಾರಾಟ‌ ಮಾಡಿದ್ದೇನೆ ಎಂದರು.

ಪ್ರಯೋಗಶೀಲ ಕೃಷಿಯಲ್ಲಿ‌ ತೊಡಗಿಸಿಕೊಂಡ ರೈತನ ಸಾಧನೆಗೆ ಕುಟುಂಬಸ್ಥರು, ಗ್ರಾಮಸ್ಥರು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳೆ ವೀಕ್ಷಿಸಲು ಬರುವವರ ಸಂಖ್ಯೆಯೂ ಹೆಚ್ಚಿದೆ.

Ramesh Babu

Journalist

Recent Posts

ಸಿನಿಮಾ ಸ್ಟೈಲ್‌ನಲ್ಲಿ ಪೊಲೀಸರ ಚೇಸಿಂಗ್: ಎರಡೇ ಗಂಟೆಗಳಲ್ಲಿ ಕಳವು ಮಾಡಿದ್ದ ಕ್ಯಾಷ್‌ ಸಮೇತ ಕಳ್ಳರ ಬಂಧನ

ಚಿಕ್ಕಬಳ್ಳಾಪುರ-‌ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಕ್ಷಣ ಮಾತ್ರದಲ್ಲಿ ಕಣ್ಣಿಗೆ ಕಾರದಪುಡಿ ಹಾಕಿ ಒಂದಲ್ಲ ಎರಡಲ್ಲ ಬರೋಬ್ಬರಿ ಏಳೂವರೆ…

3 hours ago

ನಮ್ಮ ದೇಶದ ಪ್ರಗತಿ ಯುವಜನರಿಂದಲೇ ಆಗಬೇಕಿದೆ-ಇಂಧನ‌ ಸಚಿವ ಕೆ.ಜೆ.ಜಾರ್ಜ್

ಸುಶಿಕ್ಷಿತ, ಪ್ರಜ್ಞಾವಂತ ಯುವಶಕ್ತಿಯಿಂದ ನಮ್ಮ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯನ್ ಅಕಾಡೆಮಿ ಆಫ್…

3 hours ago

ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭೀಕರ ಅಪಘಾತ: ಬೈಕ್ ಸವಾರ ದುರ್ಮರಣ

ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ಮೇ.12ರ ರಾತ್ರಿ…

7 hours ago

‘ಪಬ್ಲಿಕ್ ಮಿರ್ಚಿ’ ವರದಿ ಫಲಶೃತಿ: ಕೊನೆಗೂ ಹೊಸಹಳ್ಳಿ ರಸ್ತೆಗೆ ಡಾಂಬರ್ ಭಾಗ್ಯ – ಜನರಲ್ಲಿ ಸಂತಸ

ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು–ಆರೂಢಿ ಭಾಗದ ಜನರ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಗುಂಡಮಗೆರೆ–ಹೊಸಹಳ್ಳಿ ರಸ್ತೆಗೆ ಕೊನೆಗೂ ಡಾಂಬರೀಕರಣ ಕಾಮಗಾರಿ ಆರಂಭವಾಗಿದ್ದು, ಗ್ರಾಮಸ್ಥರಲ್ಲಿ…

8 hours ago

ಐದು ದಶಕಗಳಿಂದ ಗುಡಿಸಲಲ್ಲೇ ಬದುಕು: ಮೂಲಭೂತ ಸೌಲಭ್ಯಕ್ಕಾಗಿ ಹಕ್ಕಿಪಿಕ್ಕಿ ಕುಟುಂಬಗಳ ನರಳಾಟ

ದೊಡ್ಡಬಳ್ಳಾಪುರ: ಸರ್ಕಾರ ಆಶ್ರಯ ಯೋಜನೆ ಮೂಲಕ ಗುಡಿಸಲು ಮುಕ್ತ ರಾಜ್ಯ ನಿರ್ಮಾಣದ ಘೋಷಣೆ ಮಾಡುತ್ತಿದ್ದರೂ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ…

14 hours ago

ಓದು ಮುಖ್ಯ. ಗ್ರಹಿಕೆ ಅತಿಮುಖ್ಯ. ಮಾನವೀಯ ಸ್ಪಂದನೆ ಎಲ್ಲಕ್ಕಿಂತ ಮುಖ್ಯ

ಅನಕ್ಷರಸ್ಥರ ಬುದ್ದಿವಂತಿಕೆ ಪ್ರಶ್ನಿಸುವವರು ಅಕ್ಷರಸ್ಥರ ಮಾನವೀಯತೆಯನ್ನು ಪ್ರಶ್ನಿಸಬೇಕಲ್ಲವೇ........ ......ಒಂದು ಟ್ವೀಟ್... ಅಕ್ಷರ ಕಲಿಕೆ ಒಂದು ನೈಪುಣ್ಯ ಅಥವಾ ಸುಲಭವಾಗಿ ಮಾಹಿತಿ…

15 hours ago