ಸೂಕ್ತ ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯಕ್ಕೊಳಗಾದ ಘಾಟಿ(ವಿಶ್ವೇಶ್ವರಯ್ಯ) ಪಿಕಪ್ ಡ್ಯಾಂ: ವಿಶ್ವೇಶ್ವರಯ್ಯನವರ ಕನಸು ನನಸು ಮಾಡುವಲ್ಲಿ ವಿಫಲವಾದ ಜನಪ್ರತಿನಿಧಿಗಳು: ಸ್ಥಳೀಯರ ಆಕ್ರೋಶ

ಸುಮಾರು ನೂರಾರು ವರ್ಷಗಳ ಇತಿಹಾಸವುಳ್ಳ ಸರ್. ಎಂ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಮಣ್ಯ ದೇವಾಸ್ಥಾನದಿಂದ ಕೇವಲ ಒಂದು ಕಿಲೋ‌ಮೀಟರ್ ದೂರದಲ್ಲಿ ಇದೆ. ಘಾಟಿ ಸುಬ್ರಹ್ಮಣ್ಯ ಸುಂದರ ಪ್ರಕೃತಿ ಸೌಂದರ್ಯದ ನಡುವೆ ವ್ಯರ್ಥವಾಗಿ ಹರಿದು ಹೊಗುತ್ತಿದ್ದ ನೀರನ್ನು ತಡೆಹಿಡಿಯಲು 1917ರಲ್ಲಿ ಜಗತ್ತು ಕಂಡ ಶ್ರೇಷ್ಠ ಇಂಜಿನಿಯರ್ ಸರ್. ಎಂ ವಿಶ್ವೇಶ್ವರಯ್ಯನವರು ಈ ಪಿಕಪ್ ಡ್ಯಾಂ ಅನ್ನು ನಿರ್ಮಿಸಿದರು.

ಪಿಕಪ್ ಡ್ಯಾಂ ನಿರ್ಮಾಣದ ಮೂಲ ಉದ್ದೇಶ

ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾರೀ ದನಗಳ ಜಾತ್ರೆ ಬಹಳ ಹಿಂದಿನ ಕಾಲದಿಂದಲೂ ಅದ್ಧೂರಿಯಾಗಿ ನಡೆದುಕೊಂಡು ಬರುತ್ತಿದೆ. ಸುಮಾರು 100-120 ವರ್ಷಗಳ ಹಿಂದೆ ಜನ ಜಾನುವಾರು ಕುಡಿಯುವ ನೀರಿಗೆ ಅಭಾವ ಹೆಚ್ಚಾಗಿತ್ತು. ಈ ಹಿನ್ನೆಲೆ ಕುಡಿಯುವ ನೀರನ್ನು ಒದಗಿಸಲು ಸಲುವಾಗಿ ಸುಂದರ ಪ್ರಕೃತಿ ಸೌಂದರ್ಯದ ನಡುವೆ ವ್ಯರ್ಥವಾಗಿ ಹರಿದು ಹೊಗುತ್ತಿದ್ದ ನೀರನ್ನು ತಡೆಹಿಡಿದು ಪಿಕಪ್ ಡ್ಯಾಂ ನಿರ್ಮಾಣ ಮಾಡಲಾಗಿದೆ ಎಂದು ಇಲ್ಲಿನ ಸ್ಥಳೀಯ ಹಿರಿಯರು ತಿಳಿಸಿದ್ದಾರೆ.

ಆಯಾಕಟ್ಟಿನ ಜಲಾನಯನ ಪ್ರದೇಶದಲ್ಲಿ ಈ ಅಣೆಕಟ್ಟು ನಿರ್ಮಾಣವಾಗಿದೆ. ಸೂಕ್ತವಾಗಿ ಈ ಅಣೆಕಟ್ಟನ್ನು ಇನ್ನಷ್ಟು‌ ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡಿದರೆ ಸುಮಾರು ಎರಡು ಪಂಚಾಯಿತಿಗಳಿಗೆ ಒಳಪಡುವ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸಬಹುದು. ಆದರೆ, ಇದ್ಯಾವುದು ಮಾಡದೇ ನೀರನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಸೂಕ್ತ ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯಕ್ಕೊಳಗಾದ ಘಾಟಿ(ವಿಶ್ವೇಶ್ವರಯ್ಯ) ಪಿಕಪ್ ಡ್ಯಾಂ

ಸುಮಾರು ಎರಡು ಪಂಚಾಯಿತಿಗಳಿಗೆ ಒಳಪಡುವ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಾಮರ್ಥ್ಯವಿರುವ ಪಿಕಪ್ ಡ್ಯಾಂ ಸೂಕ್ತ ನಿರ್ವಹಣೆ ಇಲ್ಲದೇ ಪಾಳುಬಿದ್ದಿದೆ. ಹಿನ್ನೀರು ಶೇಖರಣೆಯಾಗುವ ಭೂ ಪ್ರದೇಶವೂ ಕೂಡ ಭೂಗಳ್ಳರ ಒತ್ತುವರಿಯಿಂದ ಕಿರಿದಾಗುತ್ತಿದೆ. ಇದು ಒಂದು ಕಾಲದಲ್ಲಿ ಸುಂದರ ದೃಶ್ಯವಾಗಿತ್ತು. ಆದರೆ, ಇಂದು ಅಣೆಕಟ್ಟಿನ ಸುತ್ತಲಿನ ಪ್ರದೇಶವು ಆಹಾರ ಪೊಟ್ಟಣಗಳು, ಖಾಲಿ‌ ಮದ್ಯದ ಬಾಟೆಲ್, ನೀರಿನ ಬಾಟಲಿಗಳು, ಪ್ಲಾಸ್ಟಿಕ್ ಮತ್ತು ಸಿಗರೇಟ್ ತುಂಡುಗಳಿಂದ ತುಂಬಿದ್ದು, ಕೊಳಕು, ದುರ್ವಾಸನೆಯ ತಾಣವಾಗಿದೆ. ಡ್ಯಾಂ ಸುತ್ತಲೂ ದೊಡ್ಡ‌ ದೊಡ್ಡ ಪೊದೆಗಳು, ಬಳ್ಳಿಗಳು ಆವರಿಸಿದ್ದು, ಸುಮಾರು 8 ಮೀ. ಎತ್ತರ ಮತ್ತು 55 ಮೀ. ಉದ್ದವಿರುವ ಡ್ಯಾಂ ನ ಆಕೃತಿ ಸರಿಯಾಗಿ ಕಾಣುವುದಿಲ್ಲ. ಸಮಯಕ್ಕೆ ಸರಿಯಾಗಿ ಹೂಳು ತೆಗೆಯದೇ ನಿರ್ಲಕ್ಷ್ಯಕ್ಕೊಳಗಾಗಿದೆ.

ಹರಿದು ಬರುವ ಪ್ರವಾಸಿಗರ ದಂಡು: ಸ್ವಲ್ಪ ಯಾಮಾರಿದರೆ ಆಪತ್ತು ಗ್ಯಾರೆಂಟಿ

ಡ್ಯಾಂ ಹಾಗೂ ಇಲ್ಲಿನ ರಮಣೀಯ ಸೌಂದರ್ಯ ಸವಿಯಲು ಪ್ರವಾಸಿಗರ ದಂಡು ಹರಿದುಬರುತ್ತದೆ. ಆದರೆ, ಪ್ರವಾಸಿಗರ ಹಿತದೃಷ್ಟಿಯಿಂದ ಡ್ಯಾಂ ನ ಸುತ್ತಾ ಯಾವುದೇ ಜಾಗೃತ ಕ್ರಮಗಳನ್ನು ಅಳವಡಿಸಿಲ್ಲ. ಅಣೆಕಟ್ಟಿನ ಮೇಲಿಂದ ಯಾವುದೇ ಜೀವ ಭಯವಿಲ್ಲದೇ ನೀರು ಧುಮುಕುವುದನ್ನು ನೋಡಲು ಆಗುವುದಿಲ್ಲ. ಸ್ವಲ್ಪ ಯಾಮಾರಿದರೆ ಪ್ರಾಣಕ್ಕೆ ಕುತ್ತುಂಟುಗಾವುದು ಗ್ಯಾರೆಂಟಿ. ಏಕೆಂದರೆ ಅಣೆಕಟ್ಟಿನ ಮೇಲೆ ಪಾಚಿ‌ಕಟ್ಟಿಕೊಂಡಿದೆ. ಯಾವುದೇ ತಡೆಗೋಡೆ ಇಲ್ಲ. ಎರಡೂ ತುದಿಗಳಲ್ಲಿ ಮಾರ್ಗವು ತೆರೆದಿರುವುದರಿಂದ ಅತ್ಯಂತ ಎಚ್ಚರಿಕೆಯಿಂದ ಅಣೆಕಟ್ಟಿನ ಉದ್ದಕ್ಕೂ ಪ್ರಯಾಣಿಸಬೇಕಾಗಿದೆ. ಅಣೆಕಟ್ಟಿನ ಕೆಳಭಾಗ ಅಥವಾ ಮೇಲ್ಭಾಗವನ್ನು ತಲುಪಲು ತೀರಾ ಕಠಿಣವಾಗಿದೆ.

ಕಳ್ಳರ ಹಾವಳಿ: ಪ್ರವಾಸಿಗರಿಗೆ ಇಲ್ಲ ಸುರಕ್ಷತೆ…!

ಇಲ್ಲಿನ ಪ್ರಕೃತಿ ಸವಿದು ನೀರಿನಲ್ಲಿ ಆಟವಾಡಲು ನೂರಾರು ಪ್ರವಾಸಿಗರು ಬರುತ್ತಾರೆ. ಪ್ರೇಮಿಗಳು ಪ್ರಕೃತಿ ಮಡಿಲಿನಲ್ಲಿ ಕುಳಿತು ಕೆಲಕಾಲ ಏಕಾಂತ ಅನುಭವಿಸಲು ಬರುತ್ತಾರೆ. ಆದರೆ, ಯಾರಾದರೂ ಒಂಟಿಯಾಗಿದ್ದರೆ ಸಾಕು ಅಲ್ಲಿ ಕಳ್ಳರ ಆಟ ಶುರುವುಗತ್ತದೆ. ಪ್ರವಾಸಿಗರು, ಪ್ರೇಮಿಗಳನ್ನು ಭಯಪಡಿಸಿ ಅವರಿಂದ ಬೆಲೆಬಾಳುವ ವಸ್ತುಗಳನ್ನು ಕಸಿದು ಪರಾರಿಯಾಗುತ್ತಾರೆ. ಪ್ರವಾಸಿಗರ ಸುರಕ್ಷತೆಗಾಗಿ ಇಲ್ಲಿ ಯಾವ ಭದ್ರತಾ ಸಿಬ್ಬಂದಿಯನ್ನ ನಿಯೋಜನೆ ಮಾಡಿಲ್ಲ.

ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ….!

ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪನವರು ಗೆದ್ದಿರುವ ಕ್ಷೇತ್ರದಲ್ಲಿ ಈ ಪಿಕಪ್ ಡ್ಯಾಂ ಇದೆ. ಆದರೆ, ಪಿಕಪ್ ಡ್ಯಾಂ ನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ, ಅಭಿವೃದ್ಧಿ ಪಡಿಸುವ ಯೋಚನೆ ಮಾಡದೇ ಇರುವುದು ವಿಪರ್ಯಾಸವೇ ಸರಿ… ಕೇವಲ ಚುನಾವಣೆ ಸಂದರ್ಭದಲ್ಲಿ ಹಾಗೆ ಮಾಡುವೆ ಹೀಗೆ ಮಾಡುವೆ ಎಂದು ಜನರಿಗೆ ಆಶ್ವಾಸನೆ ಕೊಟ್ಟು, ಈಗ ಏನೂ ಮಾಡದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ ಸುಧಾಕರ್ ಈ ಭಾಗಕ್ಕೆ ಬರುವುದೇ ಅಪರೂಪ, ಇನ್ನು ಇನ್ನೆಲ್ಲಿ ಈ ಸಮಸ್ಯೆಗಳು ಗಮನಕ್ಕೆ ಬರುತ್ತದೆ. ಇತ್ತ ಅಧಿಕಾರಿಗಳು ಈ ಡ್ಯಾಂಗೂ ನಮಗೂ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಇಲ್ಲಿನ ಸ್ಥಳೀಯರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.

ಇನ್ನಾದರೂ.. ಎಚ್ಚೆತ್ತು ಯಾವ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೇ ಪಿಕಪ್ ಡ್ಯಾಂ ನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುತ್ತಾರಾ… ಜನಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರನ್ನು ಒದಗಿಸಬೇಕೆಂದು ಸರ್. ಎಂ ವಿಶ್ವೇಶ್ವರಯ್ಯ‌ನವರು ಕಂಡಿದ್ದ ಕನಸು ನನಸು ಮಾಡುತ್ತಾರಾ ಎಂಬುದು ಕಾದು ನೋಡಬೇಕಾಗಿದೆ……

Ramesh Babu

Journalist

Recent Posts

ದಿಢೀರ್ ಸಾವುಗಳ ಸುತ್ತಾ…..

ನನ್ನ ಸಾವಿನೊಂದಿಗೆ ಈ ಜಗತ್ತೂ ಇಲ್ಲವಾಗುತ್ತದೆ.......... ದಿಢೀರ್ ಸಾವುಗಳ ಸುತ್ತಾ..... ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ನೋಡುತ್ತಿದ್ದರೆ ಅನೇಕ ಯುವಕ…

1 hour ago

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಕೆ.ಜೆ ಜಾರ್ಜ್

ಬಾಣಸವಾಡಿ ರೈಲ್ವೆ ನಿಲ್ದಾಣದ ಸಮೀಪ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಸಹಕರಿಸಿ, ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಕೇಂದ್ರ ಸರ್ಕಾರದ…

13 hours ago

860 ಗ್ರಾಂ ಒಣ ಗಾಂಜಾ ವಶ: ವ್ಯಕ್ತಿ ಬಂಧನ

ದೊಡ್ಡಬಳ್ಳಾಪುರ: ಆಂಧ್ರ ಪ್ರದೇಶದಿಂದ ಒಣ ಗಾಂಜಾವನ್ನು ತಂದು ಸ್ಥಳೀಯವಾಗಿ ಮಾರಾಟ ಮಾಡಲು ಯತ್ನಿಸಿದ್ದ ವ್ಯಕ್ತಿಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿ,…

13 hours ago

ಸಿಎಂ ಕುರ್ಚಿ ಕದನ ವಿಚಾರ ಈ ತಿಂಗಳೊಳಗೆ ಪೈಸ್ಲಾಗುತ್ತೆ- ಆಹಾರ ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು ಗ್ರಾಮಾಂತರ: ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಸಿಎಂ ಕುರ್ಚಿ ಕಾದಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ಸ್ಪರ್ಶ ನೀಡುವ ಲಕ್ಷಣಗಳು…

15 hours ago

ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ- ಶಾಸಕ‌ ಧೀರಜ್ ಮುನಿರಾಜ್

ದೊಡ್ಡಬಳ್ಳಾಪುರ: ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತವೆ ಎಂದು ಶಾಸಕ ಧೀರಜ್ ಮುನಿರಾಜು…

16 hours ago