ಕೋಲಾರ: ಜಿಲ್ಲೆಯಲ್ಲಿನ ಅರಣ್ಯ ಒತ್ತುವರಿ ಹೆಸರಿನಲ್ಲಿ ಜಿಲ್ಲಾ ಅರಣ್ಯಾಧಿಕಾರಿ ಡಿಎಫ್ಒ ಏಡುಕೊಂಡಲು ಅವರು ನ್ಯಾಯಾಲಯ ಉಲ್ಲಂಘನೆ ಆರೋಪದಲ್ಲಿ ಸುಪ್ರೀಂ ಕೋರ್ಟ್ ಮುಂದೆ ಹಾಜರಾಗುವಂತೆ ಮಂಗಳವಾರ ಕೋರ್ಟ್ ವತಿಯಿಂದ ನೋಟೀಸ್ ನೀಡಿದ್ದಾರೆ ಎಂದು ಕೆ.ಪಿ.ಆರ್.ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್ ಸೂರ್ಯನಾರಾಯಣ ತಿಳಿಸಿದರು
ನಗರದಲ್ಲಿ ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು, ಜಿಲ್ಲೆಯ ಶ್ರೀನಿವಾಸಪುರ ಮತ್ತು ಕೋಲಾರ ತಾಲ್ಲೂಕಿನಲ್ಲಿ ಅರಣ್ಯಾಧಿಕಾರಿ ಏಡುಕೊಂಡಲು ದೌರ್ಜನ್ಯದಿಂದ ರೈತರು ಬೆಳೆದಿದ್ದ ಮಾವಿನ ಮರಗಳು ಸೇರಿದಂತೆ ತರಕಾರಿ ಬೆಳೆಗಳನ್ನು ಮಾರಣಹೋಮ ಮಾಡಿದ್ದರು. ಈ ವಿಚಾರದಲ್ಲಿ ಶ್ರೀನಿವಾಸಪುರ ತಾಲೂಕಿನ ಉಪ್ಪರಪಲ್ಲಿ ರೈತ ಗುಲ್ಜಾರ್ ಪಾಷ ಹೈಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ಅದರಂತೆ ಏಡುಕೊಂಡಲು ಅವರು ನ್ಯಾಯಾಲಯದಲ್ಲಿ ಹಾಜರಾಗಲು ತಿಳಿಸಿದರು ಹಾಜರಾಗಿಲ್ಲ ಜೊತೆಗೆ ಘಟನೆಯ ಸಂಪೂರ್ಣ ತನಿಖೆಗೆ ಏಕಸದಸ್ಯ ಪೀಠಕ್ಕೆ ಈ ಪ್ರಕರಣವನ್ನು ವರ್ಗಾವಣೆ ಮಾಡಿದ್ದರು ಅದರ ವಿರುದ್ದ ಸುಪ್ರೀಂ ಕೋರ್ಟ್ ನಲ್ಲಿ ದೂರು ನೀಡಿದ್ದರು ಎಂದು ತಿಳಿಸಿದರು.
ರೈತರ ಭೂಮಿಯನ್ನು ವಶಪಡಿಸಿಕೊಂಡ ವಿಚಾರವಾಗಿ 2023 ಆಗಸ್ಟ್ ನಲ್ಲಿ ಹೈಕೋರ್ಟ್ ನಲ್ಲಿ ದೂರು ದಾಖಲು ಆಗಿದ್ದು, ಅದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಕೋರ್ಟ್ ಮುಂದೆ ಒದಗಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಜೊತೆಗೆ ಏಡುಕೊಂಡಲು ನೇರವಾಗಿ ಕೋರ್ಟ್ ಮುಂದೆ ಹಾಜರಾಗಿಲ್ಲ ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ತರಾಟೆಗೆ ಒಳಗಾಗಿದ್ದರು. ರೈತರು ಮತ್ತು ವಕೀಲರ ಪರವಾಗಿ ಸುಪ್ರೀಂಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು ಅದಕ್ಕೆ ಉತ್ತರ ನೀಡಲು ನೇರವಾಗಿ ಸುಪ್ರೀಂ ಕೋರ್ಟ್
ಮುಂದೆ ಹಾಜರಾಗಲು ನೋಟೀಸ್ ನೀಡಲಾಗಿದೆ ಎಂದು ತಿಳಿಸಿದರು.
ಅರಣ್ಯಾಧಿಕಾರಿಗೆ ಯಾವುದೇ ಮರ ಕಡಿಯಬಾರದೆಂದು ನಿರ್ದಿಷ್ಟ ನಿರ್ದೇಶನವಿದ್ದರೂ ಅರಣ್ಯಾಧಿಕಾರಿ ಏಡುಕೊಂಡಲು ಆತನ ಸಹೊದ್ಯೊಗಿಗಳು ರೈತರಿಗೆ ದೌರ್ಜನ್ಯದಿಂದ ಉಚ್ಛ ನ್ಯಾಯಾಲಯದ ಆದೇಶವನ್ನು ಉದ್ದೇಶಪೂರಕವಾಗಿ ಉಲ್ಲಂಘನೆ ಮಾಡಿ ಜೆಸಿಬಿಗಳ ಮೂಲಕ ಮಾವಿನ ಮರಗಳ ಮಾರಣ ಹೋಮ ಮಾಡಿದ್ದರು. ಈ ನ್ಯಾಯಾಲಯ ನಿಂದನೆ ಪ್ರಕರಣವನ್ನು ಸರ್ವೊಚ್ಛ ನ್ಯಾಯಾಲಯವು ಗಂಭೀರವಾಗಿ ತೆಗೆದುಕೊಂಡು ಉಲ್ಲಂಘನೆ ಮಾಡಿರುವುದು ಹೊರ ನೋಟಕ್ಕೆ ಸಾಬೀತಾಗಿರುವುದರಿಂದ ಅರಣ್ಯಾಧಿಕಾರಿ ಏಡುಕೊಂಡಲು ಮತ್ತು ಇತರರು ನ್ಯಾಯಾಲಯ ನಿಂಧನೆಯಲ್ಲಿ ಅಪರಾಧಿಯಾಗಿ ಸರ್ವೊಚ್ಛ ನ್ಯಾಯಾಲಯದ ಮುಂದೆ ಹಾಜರಾಗಲು ನೋಟೀಸ್ ನೀಡಿದ್ದಾರೆ ಎಂದರು.
ಸರ್ವೊಚ್ಛ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ನ್ಯಾ ಬಿ.ಆರ್.ಗವಾಯಿ ಮತ್ತು ನ್ಯಾ ಸಂದೀಪ್ ಮೆಹತಾ ರವರು ಮಂಗಳವಾರ ಆದೇಶ ಮಾಡಿದ್ದು, ಅರ್ಜಿದಾರರ ಪರವಾಗಿ ಹಿರಿಯ ವಕೀಲ ಸಂಜಯ್ ನುಲಿ ಮತ್ತು ಎಂ. ಶಿವಪ್ರಕಾಶ್ ರವರುಗಳು ವಾದ ಮಂಡಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಆರ್.ಎಸ್ ಜಿಲ್ಲಾಧ್ಯಕ್ಷ ಟಿ.ಎಂ ವೆಂಕಟೇಶ್, ಕಾರ್ಯದರ್ಶಿ ಪಿ.ಆರ್ ನವೀನ್ ಕುಮಾರ್, ಉಪಾಧ್ಯಕ್ಷರಾದ ಪಿ.ಶ್ರೀನಿವಾಸ್, ವೆಂಕಟಪ್ಪ, ಸಹಕಾರ್ಯದರ್ಶಿ ನಾರಾಯಣಸ್ವಾಮಿ, ಮುಖಂಡರಾದ ಶಿವರಾಜ್, ನಾರಾಯಣಪ್ಪ ಇದ್ದರು