ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆಗೆ ಶಾಸಕ ಧೀರಾಜ್ ಮುನಿರಾಜ್ ಒತ್ತಾಯ

ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ತನಿಖೆಗೆ ತಮ್ಮ ವಿರುದ್ಧ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠ  ವಜಾಗೊಳಿಸಿದೆ. ಈ ಸಂಬಂಧ ಹೈಕೋರ್ಟ್ ತೀರ್ಪನ್ನು ಸ್ವಾಗತಿಸಲಾಗಿದೆ ಎಂದು ಆಂಧ್ರಪ್ರದೇಶದ ಎಂಎಲ್ಸಿ  ಪೊಂಗುಲೆಟ್ಟಿ ಸುಧಾಕರ್ ರೆಡ್ಡಿ ಅವರು ಹೇಳಿದರು.

ನಗರದ ಮಾರುಕಟ್ಟೆ ಚೌಕದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಆದೇಶ ನೀಡಿದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದ ಹೈಕೋರ್ಟ್ ನ ತೀರ್ಪು ಸ್ವಾಗತಾರ್ಹ. ಈಗಾಲಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ. ರಾಜ್ಯದಲ್ಲಿ ವಾಲ್ಮೀಕಿ ಹಗರಣ, ಮೂಡಹಗರಣ ಸೇರಿದಂತೆ ಹಗರಣಗಳಲ್ಲೇ ಸರ್ಕಾರ ತುಂಬಿ ಹೋಗಿದೆ. ಕಾಂಗ್ರೆಸ್  ಪಕ್ಷಕ್ಕೆ ರಾಜ್ಯದ ಜನರು ಮುಂದಿನದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಬಲಿಷ್ಠವಾದ ಆರ್ಥಿಕತೆಯ ಭಾರತ ನಿರ್ಮಾಣಕ್ಕಾಗಿ ಬಿಜೆಪಿ ಪಕ್ಷದ ಸದಸ್ಯತ್ವ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ಸ್ಥಳೀಯವಾಗಿ ಬಿಜೆಪಿ ಪಕ್ಷದ  ಶಾಸಕರಿದ್ದು, ಲೋಕಸಭಾ ಕ್ಷೇತ್ರದಲ್ಲಿ ಸಹ ಬಿಜೆಪಿಯ ಸಂಸದರು ಇದ್ದಾರೆ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಕಾರ್ಯಕರ್ಯರು ಅತ್ಯಂತ ಚುರುಕಿನಿಂದ ಕಾರ್ಯನಿರ್ವಹಿಸಿ ಬಿಜೆಪಿ ಪಕ್ಷದ ಸದಸ್ಯತ್ವದ ಪ್ರಮಾಣವನ್ನು ಹೆಚ್ಚಿನ ರೀತಿಯಲ್ಲಿ ಮಾಡಬೇಕು. ಬಿಜೆಪಿ ಪಕ್ಷಕ್ಕೆ ದೇಶವೇ ಮೊದಲು. ಈ ನಿಟ್ಟಿನಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಸದಸ್ಯರ ಸಂಖ್ಯೆ ಅಧಿಕವಾಗುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬ ಮೊದಲು ಎಂದು ವ್ಯಂಗ್ಯವಾಡಿದರು.

ಶಾಸಕ ಧೀರಜ್ ಮುನಿರಾಜು ಮಾತನಾಡಿ, ಇಂದು ಹೈಕೋರ್ಟ್ ನೀಡಿದ ಆದೇಶವು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಯಂದ್ರ ಅವರ ನೇತೃತ್ವದಲ್ಲಿ ನಡೆದ ಪಾದಯಾತ್ರಗೆ  ಸಂದ ಜಯ. ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಕ್ಷಣಗಣನೆ. ಅತೀ ಜರೂರಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ‌ ಕೇವಲ ಸಿದ್ದರಾಮಯ್ಯನವರಾಗಿ ತನಿಖೆ ಎದುರಿಸಲಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳು ನಾವು ಸ್ವಚ್ಚವಾಗಿದ್ದೇವೆ ಎಂದು ದಿನನಿತ್ಯ ಹೇಳಿಕೆ ನೀಡುತ್ತಿದ್ದಾರೆ. ಆ ರೀತಿ ಇದ್ದರೆ ಮೊದಲು ನಿರ್ದೋಷಿ ಆಗಿ ಹೊರ ಬರಲಿ ತದನಂತರ ರಾಜಕಾರಣ ಮಾಡಲಿ. ಕಳಂಕಿತರು ಯಾರೇ ಇದ್ದರೂ ಮೊದಲು ರಾಜೀನಾಮೆ ನೀಡಲಿ. ಮುಖ್ಯಮಂತ್ರಿಗಳು ತಮ್ಮ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಕ್ಷಣ ರಾಜೀನಾಮೆ ನೀಡಲಿ. ಗೌರವಯುತವಾಗಿ ರಾಜೀನಾಮೆ ಕೊಟ್ಟರೆ ಉತ್ತಮ, ಇಲ್ಲವಾದಲ್ಲಿ ನಮ್ಮ‌ ಹೋರಾಟ ಮುಂದುವರಿಯುತ್ತೆ ಎಂದರು

ನಿನ್ನೆ ನಡೆದ ನಗರಸಭಾ ಚುನಾವಣೆ ಬಿಜೆಪಿಯ ಪಾಲಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಪಕ್ಷವನ್ನು ಸಂಘಟಿಸಲು ಸಹ ಉತ್ತಮವಾದ ವಾತವರಣವಿದೆ ಎಂದು ಕಾರ್ಯಯರ್ತರಿಗೆ ಕರೆ ನೀಡಿದರು.

ರಾಜ್ಯದಲ್ಲಿ ಈಗಾಗಲೇ ಸುಮಾರು25-30ಲಕ್ಷಕ್ಕೂ‌ ಹೆಚ್ಚು ಸದಸ್ಯತ್ವ ನೋಂದಣಿ ಆಗಿದೆ. ಕನಿಷ್ಠ 2 ಕೋಟಿ ಸದಸ್ಯತ್ವ ನೋಂದಣಿ ಮಾಡುವ ಪಣ ತೊಟ್ಟಿದ್ದೇವೆ ಎಂದರು.

ಈ ವೇಳೆ  ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ನಗರ ಸಭಾ ಸದಸ್ಯರಾದ ಪದ್ಮನಾಭ್, ಭಾಸ್ಕರ್, ಮುಖಂಡರಾದ ವತ್ಸಲಾ, ಮುದ್ದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *