ಆ ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನ, ದುಡಿಯುವ ಯಜಮಾನನಿಗೆ ಹಠಾತ್ ಆಗಿ ಬಂದ ಕಾಯಿಲೆ, ಮಕ್ಕಳು ಮರಿಗಳನ್ನ ಸಾಕಿ ಜೀವನ ನಡೆಸಲು ಸಾಲದ ಮೊರೆಹೋದ ಬಡ ಕುಟುಂಬ. ಆಗ ವ್ಯವಹಾರಕ್ಕಾಗಿ ಮನೆಯನ್ನ ಅಡವಿಟ್ಟು ಬ್ಯಾಂಕ್ ಒಂದರಲ್ಲಿ ಸಾಲ ಪಡೆಯಲಾಯಿತು. ಕೊರೊನಾ ಮಹಾಮಾರಿಯಿಂದ ಸಮಯಕ್ಕೆ ಸರಿಯಾಗಿ ಬ್ಯಾಂಕ್ ಸಾಲ ತೀರಿಸಲು ಸಾಧ್ಯವಾಗಿಲ್ಲ.
ಸಾಲ ಜಮೆಯಾಗದ ಹಿನ್ನಲೆ ಬ್ಯಾಂಕ್ ಸಿಬ್ಬಂದಿ ಮನೆಗೆ ಬೀಗ ಹಾಕಿದ್ದಾರೆ, ಬ್ಯಾಂಕ್ ನವರ ನಿರ್ದಾಕ್ಷಿಣ್ಯ ಕ್ರಮದಿಂದ 12 ಜನರ ದೊಡ್ಡ ಕುಟುಂಬ ಬೀದಿಗೆ ಬಂದಿದೆ, ಹಸಿದ ಕಂದಮ್ಮಗಳಿಗೆ ಊಟ ಕೊಡಲಾಗದೆ, ರೋಗಿಗಳಿಗೆ ಔಷದೋಪಚಾರ ಮಾಡಲಾಗದೆ ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ.
ನಗರದ ‘ಡಿ’ ಕ್ರಾಸ್ ಬಳಿಯ ಕುಟುಂಬದ ಸ್ಥಿತಿಯನ್ನ ನೋಡಿದ್ದಾರೆ ಎಂಥಾವರಿಗೂ ಕಣ್ಣೀರು ಬರುತ್ತದೆ, 12 ಜನರಿಗೆ ಅಶ್ರಯ ಕೊಟ್ಟ ಮನೆಗೆ ಸದ್ಯ ಬೀಗ ಹಾಕಲಾಗಿದೆ, ಮನೆಯ ಸದಸ್ಯರೆಲ್ಲರು ಮನೆಯ ಮುಂದೆ ಕುಳಿತು ಕಣ್ಣೀರು ಹಾಕುತ್ತಿದ್ದಾರೆ. ಬ್ಯಾಂಕ್ ನಲ್ಲಿ ಮಾಡಲಾದ ಸಾಲವನ್ನ ತೀರಿಸಲಾಗದೆ ಇವತ್ತು ಇಡೀ ಕುಟುಂಬವೇ ಬೀದಿಗೆ ಬಂದಿದೆ.
ಕುಟುಂಬದ ಮುಖ್ಯಸ್ಥ ಸತೀಶ್, ಮಿಲ್ಟ್ರಿ ಹೊಟೇಲ್ ನಡೆಸುತ್ತಿದ್ದ, ಕೊರೊನಾ ಬಂದ ನಂತರ ಮಿಲ್ಟ್ರಿ ಹೊಟೇಲ್ ವ್ಯಾಪಾರ ಬಂದ್ ಆಗಿತು, ಮಿಲ್ಟ್ರಿ ಹೊಟೇಲ್ ವ್ಯವಹಾರ ನಂಬಿ ಬೆಂಗಳೂರಿನ ವಾಸು ಫೈನಾನ್ಸ್ ನಲ್ಲಿ ಸಾಲ ಮಾಡಿದ್ದರು, ಹೊಟೇಲ್ ಬಂದ್ ಆಗಿದ್ದರಿಂದ ಸಾಲ ತೀರಿಸಲಾಗಿಲ್ಲ, ಸಾಧ್ಯವಾದ ಮಟ್ಟಿಗೆ ಸಾಲವನ್ನ ತೀರಿಸಿದ್ದಾರೆ. ಕೋರ್ಟ್ ಆದೇಶದೊಂದಿಗೆ ಬಂದ ಬ್ಯಾಂಕ್ ಸಿಬ್ಬಂದಿ ಮನೆಗೆ ಬೀಗ ಹಾಕಿ ಸೀಜ್ ಮಾಡಿದ್ದಾರೆ.
10 ದಿನ ಸಮಯ ಕೊಡಿ ಎಂದು ಕುಟುಂಬಸ್ಥರು ಅಂಗಲಾಚಿದ್ದಾರೆ, ಆದರೆ ಹಣದ ಮುಂದೆ ಮನವೀಯತೆಗೆ ಬೆಲೆ ಕೊಡದ ಬ್ಯಾಂಕ್ ನವರು ಮನೆಗೆ ಬೀಗ ಹಾಕಿದ್ದಾರೆ. ಅಶ್ರಯ ಕಳೆದುಕೊಂಡ ಮನೆಯ ಸದಸ್ಯರಿಗೆ ಈಗ ಮನೆಯ ಮುಂಭಾಗದ ರಸ್ತೆಯೇ ಆಶ್ರಯ ತಾಣ , ನೀರನ್ನು ಸಹ ಪಕ್ಕದ ಮನೆಯವರನ್ನ ಕೇಳಿಬೇಕಾದ ಪರಿಸ್ಥಿತಿ, ಹಸಿದ ಮಕ್ಕಳಿಗೆ ಏನು ಕೋಡಬೇಕೆಂಬುದು ತಿಳಿಯದೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ, ಅನಾರೋಗ್ಯದಿಂದ ಬಳಲುತ್ತಿರುವರಿಗೆ ಔಷದೋಪಚಾರ ಮಾಡಲಾಗದ ಸಂಕಷ್ಟ ಇಡೀ ಕುಟುಂಬವನ್ನೇ ಕಣ್ಣೀರಲ್ಲಿ ಕೈತೊಳೆಯವಂತೆ ಮಾಡಿದೆ.
ನೆಂಟರಿಷ್ಟರು ಒಂದೆರಡು ದಿನ ಊಟ, ನೀರು, ಆಶ್ರಯ ನೀಡಬಹುದು, ಮೂರನೇ ದಿನ ಅವರಿಗೂ ಹೊರೆ ಆಗುತ್ತಾರೆ. ದುಡಿಯುವ ಮನೆ ಯಜಮಾನ ಹಾಸಿಗೆ ಹಿಡಿದಿದ್ದಾರೆ. ಬಾಡಿಗೆ ಮನೆ ಮಾಡಲು ಸದ್ಯ ಹಣನೂ ಇಲ್ಲ. ಸದ್ಯ ಈ ಬಡ ಕುಟುಂಬ ತೀವ್ರ ಅತಂತ್ರ ಸ್ಥಿತಿಯಲ್ಲಿ ಇದೆ.