ಕೋಲಾರ: ತಾಲೂಕಿನ ವೇಮಗಲ್ ಹೋಬಳಿಯ ಪ್ರಸಿದ್ದ ಸೀತಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಪತೇಶ್ವರ ಮತ್ತು ಭೈರವೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಶುಕ್ರವಾರ ಚಾಲನೆ ದೊರಕಿತು
ಸಹಸ್ರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಧನ್ಯತಾಭಾವ ಮೆರೆದರು ಜಿಲ್ಲೆ ಹಾಗೂ ರಾಜ್ಯದ ಇತರ ಭಾಗಗಳಿಂದ ಆಗಮಿಸಿದ ಅಪಾರ ಭಕ್ತಸ್ತೋಮ ರಥೋತ್ಸವಕ್ಕೆ ಸಾಕ್ಷಿಯಾದರು ಈ ಎಲ್ಲದರ ನಡುವೆ ನೆರೆದಿದ್ದ ಭಕ್ತರು ತೇರಿಗೆ ಹೂವು, ಹಣ್ಣು ಎಸೆದು ಜೈಕಾರ ಕೂಗುತ್ತಾ ಸಂಭ್ರಮಿಸಿದರು. ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ತೇರು ಎಳೆಯಲಾಯಿತು.
ಸೀತಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿರುವ ಬೈರವೇಶ್ವರ ಸ್ವಾಮಿ ದೇವಾಲಯ ಹಾಗೂ ಗಂಗಮ್ಮ ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು ಸಹಸ್ರಾರು ಮಂದಿ ಭಕ್ತಾದಿಗಳು ದೇವರ ದರ್ಶನ ಪಡೆದರು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಇರುವ ಹಿನ್ನಲೆ ದೇವರ ಮುಂದೆ ಯಾರು ದೊಡ್ಡವರಲ್ಲ ಎಂಬ ಮನಗಂಡಿರುವ ಶಾಸಕ ಕೊತ್ತೂರು ಜಿ ಮಂಜುನಾಥ್ ಸೀತಿ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿ ಪತೇಶ್ವರ ಮತ್ತು ಭೈರವೇಶ್ವರ ಸ್ವಾಮಿಯ ರಥೋತ್ಸವಕ್ಕೆ ಕೈ ಮುಗಿದು ನಮಸ್ಕರಿಸಿ ಗ್ರಾಮದ ಗಂಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಂದಾಗಿ ಪ್ರತಿನಿತ್ಯ ಜಂಜಾಟದಲ್ಲಿ ಇರುತ್ತಾರೆ. ಇಂತಹ ಜಾತ್ರೆಗಳಿಂದ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಶಕ್ತಿಯು ಪರಮಾತ್ಮ ನೀಡುತ್ತಾನೆ. ಜಾತ್ರೆಗಳಿಂದ ಎಲ್ಲರೂ ಒಟ್ಟುಗೂಡುವ ವಾತಾವರಣ ನಿರ್ಮಾಣವಾಗುವುದರಿಂದಾಗಿ ಎಲ್ಲರೂ ಜಾತಿ, ಧರ್ಮಗಳ ಬೇಧ ಭಾವ ಮರೆತು ಸಂತಸದಿಂದ ಪಾಲ್ಗೊಂಡಾಗ ತಮ್ಮ ಮನಸ್ಸಿನಲ್ಲಿ ನೆಮ್ಮದಿ ದೈವ ಭಕ್ತಿ ಕಾಣಬಹುದು ಎಂದು ಶಾಸಕ ಕೊತ್ತೂರು ಮಂಜುನಾಥ್ ಅಭಿಪ್ರಾಯಪಟ್ಟರು.
ಪ್ರಸಿದ್ಧ ಪ್ರವಾಸಿ ತಾಣದ ಸೀತಿ ಜಾತ್ರೆಗೆ ಎಷ್ಟೇ ಬಿಸಿಲು ಇದ್ದರು ಸಹಸ್ರಾರು ಮಂದಿ ಭಕ್ತರು ಬರುವ ಹಿನ್ನಲೆ ಜಾತ್ರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ವೇಮಗಲ್ ಇನ್ಸ್ ಪೆಕ್ಟರ್ ವೆಂಕಟೇಶ್ ನೇತೃತ್ವದಲ್ಲಿ ಸೂಕ್ತ ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನ ತಾಪ ಹೆಚ್ಚಾಗಿರುವ ಯಾವುದೇ ಬೆಂಕಿ ಅವಘಡಗಳು ಸಂಭವಿಸದಂತೆ ಅಗ್ನಿಶಾಮಕ ದಳ ಮತ್ತು ಬೆಸ್ಕಾಂ ಸಿಬ್ಬಂದಿ ಜಾತ್ರೆಯಲ್ಲಿ ಕಣ್ಗಾವಲಾಗಿ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸಿದರು.
ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಭೈರವೇಶ್ವರ ಸ್ವಾಮಿ ಕೃಪೆಯಿಂದ ಪ್ರತಿ ವರ್ಷದಂತೆ ಈ ವರ್ಷವು ಸಹ ವೇಮಗಲ್ ಹೋಬಳಿ ಮಡಿವಾಳ ಗ್ರಾಮದ ಶ್ರೀನಿವಾಸ್ ಮತ್ತು ಸಹೋದರ ಕೃಷ್ಣಪ್ಪ ರವರು ಅನ್ನಸಂತರ್ಪಣೆಯನ್ನು ಆಯೋಜಿಸಿದ್ದರು. ಮುದ್ದೆ ಊಟ ಸವಿದ ಭಕ್ತಾದಿಗಳು ಆಯೋಜಕರಿಗೆ ಕೈ ಮುಗಿದು ನಮಸ್ಕರಿಸಿದರು. ಜಾತ್ರಾ ಮಹೋತ್ಸವದಲ್ಲಿ ಪಾನಕ ಮಜ್ಜಿಗೆ ಕುಡಿದು ದಾಹ ತಿರಿಸಿಕೊಂಡು
ಈ ಸಂದರ್ಭದಲ್ಲಿ ಎಂ.ಎಲ್.ಸಿ ಅನಿಲ್ ಕುಮಾರ್, ಜಿಲ್ಲಾ ಯೂನಿಯನ್ ನಿರ್ದೇಶಕ ಚಂಜಿಮಲೆ ರಮೇಶ್, ಕಾಂಗ್ರೆಸ್ ಮುಖಂಡ ನಂದಿನಿ ಪ್ರವೀಣ್, ಗ್ರಾಪಂ ಅಧ್ಯಕ್ಷ ಕವಿತಾ ಮುನಿರಾಜು, ಸದಸ್ಯರಾದ ಮುನಿರಾಜು, ಜಯಪ್ರಕಾಶ್, ವಕ್ಕಲೇರಿ ರಾಜಪ್ಪ, ಸೀತಿಹೊಸೂರು ಮುರಳಿಗೌಡ, ದೇವಾಲಯ ಕಾರ್ಯನಿರ್ವಾಹಣಾಧಿಕಾರಿ ಎಲ್. ಜಿ ಪ್ರಸಾದ್, ಪಾರುಪಾತ್ತೇದಾರ ವೆಂಕಟೇಶ್, ವೇಮಗಲ್ ರಾಜಸ್ವ ನಿರೀಕ್ಷಕ ಬಿ ಮಂಜುನಾಥ್, ಪಿಡಿಒ ಕೆ.ಎಲ್ ಲಕ್ಷ್ಮೀಪತಿ, ಗ್ರಾಪಂ ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು, ಸಹಸ್ರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.