
ದೊಡ್ಡಬಳ್ಳಾಪುರ: ರೈತರೆ ಸಂಘಟಿಸಿಕೊಂಡಿರುವ ಸಹಜ ಸಮೃದ್ಧ ಸಾವಯವ ರೈತ ಉತ್ಪಾದಕ ಕಂಪನಿಯು ಇಡೀ ರಾಜ್ಯದಲ್ಲಿಯೇ ಸಾವಯವ ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಮೆಚ್ಚುಗೆಯನ್ನು ಪಡೆದಿದೆ ಎಂದು ಸಹಜ ಸಮೃದ್ಧ ಸಾವಯವ ರೈತ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಸೋಮೇಶ್ ಹೇಳಿದರು.
ತಾಲ್ಲೂಕಿನ ಮಧುರನಹೊಸಹಳ್ಳಿ ಸಮೀಪದ ತಬರನತೋಟದಲ್ಲಿ ಸೋಮವಾರ ನಡೆದ ರಾಜ್ಯ ರೈತ ಸಂಘದ ರೈತ ನಾಯಕ ದಿವಂಗತ ಡಾ.ಎನ್.ವೆಂಕಟರೆಡ್ಡಿ ಅವರ 13ನೇ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಇಂದು ತೋಟಗಾರಿಕೆ ಇಲಾಖೆ ಲೆಕ್ಕದಲ್ಲಿ ನೂರಾರು ರೈತ ಉತ್ಪಾದಕ ಕಂಪನಿಗಳು ನೋಂದಣಿಯಾಗಿವೆ. ಸೂಕ್ತ ಕಾರ್ಯನಿರ್ವಹಣೆಯಲ್ಲಿ ಸೋತಿದ್ದು, ರಸಗೊಬ್ಬರ, ಬೀಜ ಮಾರಾಟಕ್ಕೆ ಮಾತ್ರ ಸೀಮಿತವಾಗಿವೆ. ಆದರೆ, ಸಹಜ ಸಮೃದ್ಧ ಸಾವಯವ ರೈತ ಉತ್ಪಾದಕ ಕಂಪನಿಯ ಸಂಪೂರ್ಣ ರೈತರಿಂದಲೇ ನಡೆಯುತ್ತಿದ್ದು, ಕೋಟಿಗಟ್ಟಲೆ ಸಾವಯವ ಕೃಷಿ ಉತ್ಪನ್ನಗಳ ವಹಿವಾಟು ನಡೆಸುತ್ತಿದೆ. ಇದರಿಂದ ಗ್ರಾಹಕರಿಗು ಕಲಬೆರಿಕೆ ಇಲ್ಲದ ಸಾವಯವ ಉತ್ಪನ್ನಗಳು ದೊರೆಯುತ್ತಿವೆ. ಸಂಸ್ಥೆಯಲ್ಲಿ ನೋಂದಾಯಿಸಿಕೊಂಡಿರುವ ರೈತರಿಗೆ ಸಾವಯವ ಕೃಷಿ ಕುರಿತು ತರಬೇತಿ, ಮಾರ್ಗದರ್ಶವನ್ನು ನೀಡಲಾಗುತ್ತದೆ. ಅಲ್ಲದೆ, ರೈತರ ತೋಟಗಳಿಗೆ ಸಂಸ್ಥೆಯ ಪ್ರತಿನಿಧಿಗಳು ಭೇಟಿ ನೀಡಿ ಸಾವಯವ ವಿಧಾನದಲ್ಲೇ ಬೆಳೆ ಬೆಳೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ನಮ್ಮಲ್ಲಿನ ಮಳಿಗೆಗಳಲ್ಲಿ ಮಾರಾಟ ಮಾಡುವಷ್ಟು ಮಾತ್ರ ಕೃಷಿ ಉತ್ಪನ್ನಗಳನ್ನು ರೈತರಿಂದ ಬೆಳೆಸಿಕೊಳ್ಳಲಾಗುತ್ತದೆ. ಇದರಿಂದ ರೈತರು ತಾವು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ, ಖರೀದಿ ಇಲ್ಲದೆ ನಷ್ಟ ಅನುಭವಿಸುವುದು ತಪ್ಪುತ್ತಿದೆ ಎಂದರು.
ಸಹಜ ಸಮೃದ್ಧ ಸಾವಯವ ರೈತ ಉತ್ಪಾದಕ ಕಂಪನಿ ಪ್ರತಿ ವರ್ಷವು ಗಳಿಸುವ ಲಾಭವನ್ನು ಕಂಪನಿಯಲ್ಲಿ ನೋಂದಾಯಿಸಿಕೊಂಡಿರುವ, ಕೃಷಿ ಉತ್ಪನ್ನಗಳನ್ನು ಸಂಸ್ಥೆಗೆ ಮಾರಾಟ ಮಾಡುತ್ತಿರುವ ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ. ಎಲ್ಲಾ ಹಣಕಾಸಿನ ವ್ಯವಹಾರಗಳು ಪಾರದರ್ಶಕವಾಗಿದ್ದು, ಸಾವಯವ ಕೃಷಿಯಲ್ಲಿ ಬೆಳೆ ಬೆಳೆಯುವ ರೈತರ ಆರ್ಥಿಕ ಸ್ಥಿತಿಯು ಉತ್ತಮಗೊಂಡಿದೆ. ಈ ಬಗ್ಗೆ ಎಲ್ಲಾ ಅಂಕಿ ಅಂಶಗಳನ್ನು ಪಡೆದಿದ್ದ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ 3 ನಿಮಿಷಗಳ ಕಾಲ ಮಾತನಾಡುವ ಮೂಲಕ ಸಹಜ ಸಮೃದ್ಧ ಸಾವಯವ ರೈತ ಉತ್ಪಾದಕ ಕಂಪನಿಯ ಜವಾಬ್ದಾರಿ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ ಎಂದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿ, ಇಡೀ ವಿಶ್ವದಲ್ಲಿ ಇಂದು ನಗರಗಳ ತ್ಯಾಜ್ಯ ನೀರನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ, ನಮ್ಮಲ್ಲಿ ಸೂಕ್ತ ಶುದ್ದೀಕಣ ಇಲ್ಲದೆ ಜನರ ಬದುಕಿಗೆ ಶಾಪವಾಗಿ ಪರಿಣಮಸಿದೆ. ಕೆ.ಸಿ.ವ್ಯಾಲಿ ಯೋಜನೆ ಪ್ರಾರಂಭವಾದ ದಿನಗಳಿಂದಲು ಸಹ ದೇಶದ ವಿವಿಧ ಸರ್ಕಾರಿ ಸಂಸ್ಥೆಗಳ ನೀರಿನ ಪರೀಕ್ಷ ಕೇಂದ್ರಗಳು, ತಜ್ಞರು ನೀಡಿರುವ ವರದಿಗಳ ಆಧಾರದ ಮೇಲೆ ಯೋಜನೆಯನ್ನು ಜಾರಿಗೆ ತರುವಂತೆ ಹೋರಾಟವನ್ನು ಮಾಡುತ್ತಲೇ ಇದ್ದೇವೆ. ಆದರೆ, ಜನರಿಗೆ ಹಾಗೂ ಸರ್ಕಾರಕ್ಕೆ ಇನ್ನೂ ತ್ಯಾಜ್ಯ ನೀರಿನ ಅಪಾಯದ ತೀವ್ರತೆಯ ಬಗ್ಗೆ ಅರಿವಾಗಿಲ್ಲ. ಕೆ.ಸಿ.ವ್ಯಾಲಿ ನೀರು ಕೆರೆಗಳಿಗೆ ತುಂಬುತ್ತಿರುವ ಪ್ರದೇಶಗಳ ಜನರಲ್ಲಿ ಕಿಡ್ನಿ, ಪಾರ್ಷವಾಯು, ಕ್ಯಾನ್ಸರ್ಗಳ ಪ್ರಮಾಣ ಹೆಚ್ಚಾಗುತ್ತಿವೆ. ಆದರೆ ಜನರು ಇದೊಂದು ಪೂರ್ವಜನ್ಮದ ಕರ್ಮಫಲದ ರೋಗವೆಂದು ಪರಿಗಣಿಸುತ್ತಿದ್ದಾರೆ ವಿನಹ, ಅಂತರ್ಜಲ ಸೇರುತ್ತಿರುವ ತ್ಯಾಜ್ಯ ನೀರಿನಲ್ಲಿನ ರಾಸಾಯನಿಕದ ಕಡೆಗೆ ಯಾರೂ ಸಹ ಗಮನವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
14 ವರ್ಷಗಳ ಹಿಂದೆ ಎತ್ತಿನಹೊಳೆ ಯೋಜನೆ ಪ್ರಾರಂಭದ ದಿನಗಳಲ್ಲಿ ಹೇಳುತ್ತಿದ್ದ ಮಾತುಗಳನ್ನೇ ಈಗಲೂ ಹೇಳುತ್ತಿದ್ದೇವೆ. ಈ ಯೋಜನೆಯಿಂದ ಬಯಲು ಸೀಮೆಯ ಜನರ ಕುಡಿಯುವ ನೀರಿನ ಭವಣೆ ನೀಗುವುದಿಲ್ಲ. ಆದರೆ, ರಾಜಕೀಯ ಪಕ್ಷಗಳ ಬೆಂಬಲಿಗರು, ಜನಪ್ರತಿನಿಧಿಗಳು ಎತ್ತಿನಹೊಳೆ ಯೋಜನೆ ಕುರಿತಂತೆ ಜನರಿಗೆ ಸುಳ್ಳು ಹೇಳುತ್ತಲೇ ಬರುತ್ತಿದ್ದಾರೆ. ಚಿಕ್ಕಬಳ್ಳಾಪುರ,ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯಲ್ಲಿ ನೀರು ಬರುವುದಿಲ್ಲ. ಜನಪ್ರತಿನಿಧಿಗಳಿಗೆ ಎತ್ತಿನಹೊಳೆ ಯೋಜನೆಯಲ್ಲಿ ಪೈಪ್ಲೈನ್ಗಳನ್ನು ಹಾಕಿಸುವ ಕಡೆಗೆ ಇರುವಷ್ಟು ಆಸಕ್ತಿ ಮೂರನೇ ಹಂತದ ತ್ಯಾಜ್ಯ ನೀರು ಶುದ್ದೀಕರಣ ಮಾಡಿಸುವ ಕಡೆಗೆ ಇಲ್ಲದಾಗಿದೆ ಎಂದು ದೂರಿದರು.
ಸ್ಮರಣೆ ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ಲಕ್ಷ್ಮೀದೇವಿಪುರ ಗ್ರಾಮದ ನರಸಿಂಹರಾಜು, ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮೇಗೌಡ, ಜಿಲ್ಲಾ ಮುಖಂಡರಾದ ಕೆ.ಸುಲೋಚನಮ್ಮ ವೆಂಕಟರೆಡ್ಡಿ, ಮುತ್ತೇಗೌಡ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ನಾಯಕ್, ಕ್ಯಾನ್ಸರ್ ತಜ್ಞ ಡಾ.ವಿಷ್ಣುವರ್ಧನ್ ಇದ್ದರು.