ಸಮಾಜದ ನಿರೀಕ್ಷೆಗಳಿಗೆ ಸೇವೆಯ ಮೂಲಕ ಸ್ಪಂದನೆ ಆಶಯ ಲಯನ್ಸ್‌ ಸಂಸ್ಥೆ ಹೊಂದಿದೆ – ಸಿ.ಎಂ.ನಾರಾಯಣಸ್ವಾಮಿ

ದೊಡ್ಡಬಳ್ಳಾಪುರ: ಸಮಾಜದ ನಿರೀಕ್ಷೆಗಳಿಗೆ ಸೇವೆಯ ಮೂಲಕ ಸ್ಪಂದಿಸುವ ಆಶಯವನ್ನು ಲಯನ್ಸ್‌ ಸಂಸ್ಥೆ ಹೊಂದಿದ್ದು, ವಿಶ್ವಾದ್ಯಂತ ಅಸಂಖ್ಯಾತ ಚಟುವಟಿಕೆಗಳ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿದೆ ಎಂದು ಲಯನ್ಸ್‌ ಜಿಲ್ಲೆ 317ಎಫ್‌ನ ಗೌರ್ನರ್‌ ಸಿ.ಎಂ.ನಾರಾಯಣಸ್ವಾಮಿ ಹೇಳಿದರು.

ನಗರದ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್‌ಸ್ಟಿಟ್ಯೂಷನ್ಸ್‌ಗೆ ಅಧಿಕೃತ ಭೇಟಿ ವೇಳೆ ವಿವಿಧ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಬಳಿಕ ನಡೆದ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ಮೂರೂವರೆ ವರ್ಷದ ಹಿಂದೆಯಷ್ಟೇ ಆರಂಭವಾದ ಆರ್.ಎಲ್.ಜಾಲಪ್ಪ ಲಯನ್ಸ್‌ ಸಂಸ್ಥೆ ಸೇವಾ ಹಾಗೂ ಆಡಳಿತಾತ್ಮಕವಾಗಿ ಉತ್ತಮ ಕಾರ್ಯ ನಿರ್ವಹಿಸಿ, ಸತತವಾಗಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದ ಹ್ಯಾಟ್ರಿಕ್ ಸಾಧನೆಯನ್ನು ಮಾಡಿರುವುದು ಇಲ್ಲಿನ ಸೇವಾ ಬದ್ದತೆಗೆ ಸಾಕ್ಷಿಯಾಗಿದೆ. ಈ ವರ್ಷ ಮೊದಲ 6 ತಿಂಗಳಲ್ಲೇ ದಾಖಲೆಯ 416 ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜಮುಖಿ ಆಲೋಚನೆಯನ್ನು ಪ್ರತಿಪಾದಿಸಿದೆ ಎಂದರು.

*ಸದಸ್ಯತ್ವ ದ್ವಿಗುಣ-ಶ್ಲಾಘನೀಯ:*

ಲಯನ್ಸ್‌ ಕ್ಲಬ್‌ನ ಸದಸ್ಯತ್ವ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಲಯನ್ಸ್‌ ಸಂಸ್ಥೆ ಹೊಸ ಮೈಲುಗಲ್ಲನ್ನು ದಾಟಿದೆ. ಈ ವರ್ಷ ಬರೋಬ್ಬರಿ 50 ಹೊಸ ಸದಸ್ಯರನ್ನು ನೊಂದಾಯಿಸುವ ಮೂಲಕ ತನ್ನ ಸದಸ್ಯತ್ವದ ಬಲವನ್ನು 100ಕ್ಕೆ ವೃದ್ದಿಸಿಕೊಂಡಿರುವುದು ಶ್ಲಾಘನೀಯ ವಿಚಾರವಾಗಿದ್ದು, ಈ ನಿಟ್ಟಿನಲ್ಲಿ ಶ್ರಮಿಸಿದ ಗಣ್ಯರ ಪರಿಶ್ರಮ ಅಭಿನಂದನೀಯ ಎಂದರು.

ಇದೇ ವೇಳೆ ಅವರು ವಿವಿಧ ಪುರಸ್ಕಾರ-ಗೌರವಗಳನ್ನು ಕ್ಲಬ್‌ನ ಅಧ್ಯಕ್ಷರು, ಪದಾಧಿಕಾರಿಗಳಿಗೆ ಘೋಷಿಸಿದರು. ಕ್ಲಬ್‌ನ ತ್ರೈಮಾಸಿಕ ಹಾಗೂ ವಿಶೇಷ ಸುದ್ದಿಪತ್ರ ಅನಾವರಣ ಸಂಚಿಕೆಯನ್ನು ಲೋಕಾರ್ಪಣೆ ಮಾಡಿದರು.

ಲಯನ್ಸ್‌ ಕ್ಲಬ್ ಅಧ್ಯಕ್ಷ ಜೆ.ಆರ್.ರಾಕೇಶ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ದೇವರಾಜ ಅರಸ್‌ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ, ಲಯನ್ಸ್‌ ಜಿಲ್ಲಾ ಸಂಪುಟ ಕಾರ್ಯದರ್ಶಿ ಪ್ರಸನ್ನಕುಮಾರ್‌, ಖಜಾಂಚಿ ವಿಜಯಾ, ಪ್ರಾಂತೀಯ ಅಧ್ಯಕ್ಷ ನಾಗರಾಜ್, ವಲಯ ಅಧ್ಯಕ್ಷ ರಘುಬಾಬು, ಜಿಇಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್, ಮಧುಮೇಹ ಸಂಯೋಜಕ ಎಲ್.ಎನ್.ಪ್ರದೀಪ್‌ಕುಮಾರ್, ಕ್ಲಬ್ ಕಾರ್ಯದರ್ಶಿ ಕೆ.ಸಿ.ನಾಗರಾಜ್, ಖಜಾಂಚಿ ರವಿಕುಮಾರ್, ಉಪಾಧ್ಯಕ್ಷರಾದ ಮುನಿರಾಮೇಗೌಡ, ಪ್ರೊ.ರವಿಕಿರಣ್, ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀನಿವಾಸರೆಡ್ಡಿ, ಲಿಯೋ ಲಯನ್ಸ್‌ ಕ್ಲಬ್ ಅಧ್ಯಕ್ಷ ಅಮಿತ್ ಸೇರಿದಂತೆ ಕ್ಲಬ್‌ನ ಪದಾಧಿಕಾರಿಗಳು, ಅಕ್ಷಯ ಲಿಯೋ ಕ್ಲಬ್, ಏಕಲವ್ಯ ಲಿಯೋ ಕ್ಲಬ್, ಆರ್ಯಭಟ ಲಿಯೋ ಲಯನ್ಸ್‌ ಕ್ಲಬ್‌ನ ಸದಸ್ಯರು ಹಾಜರಿದ್ದರು.

*ವಿವಿಧ ಸೇವಾ ಚಟುವಟಿಕೆಗಳಲ್ಲಿ ಭಾಗಿ:*

ಗೌರ್ನರ್‌ ಅಧಿಕೃತ ಭೇಟಿ ಹಿನ್ನಲೆ ಆಯೋಜಿಸಿದ್ದ ವಿವಿಧ ಸೇವಾ ಚಟುವಟಿಕೆಗಳಲ್ಲಿ ಅವರು ಭಾಗಿಯಾದರು. ಅಪೆರಲ್ ಪಾರ್ಕ್‌ ಹೆಬ್ಬಾಗಿಲ ಬಳಿ ಆರ್.ಎಲ್.ಜಾಲಪ್ಪ ವೃತ್ತದ ನಾಮಫಲಕ ಅನಾವರಣ, ಬಸ್‌ನಿಲ್ದಾಣ ಮತ್ತು ರೈಲ್ವೇ ನಿಲ್ದಾಣ ವೃತ್ತದಲ್ಲಿ ಸಾರ್ವಜನಿಕರಿಗೆ ಮಧುಮೇಹ ತಪಾಸಣಾ ಶಿಬಿರ, ಬ್ಯಾಂಕ್‌ ಆಫ್‌ ಬರೋಡ ಸಮೀಪ ದೃಷ್ಟಿ ತಪಾಸಣೆ ಹಾಗೂ ಐಒಎಲ್‌ ಕೇಂದ್ರದ ಉದ್ಘಾಟನೆ, ಮೆಳೇಕೋಟೆಯಲ್ಲಿ ಪಶು ಆರೋಗ್ಯ ತಪಾಸಣಾ ಶಿಬಿರ, ತೂಬಗೆರೆಯ ವೃದ್ದಾಶ್ರಮದಲ್ಲಿ ಹಸಿವು ನಿವಾರಣೆ ಸೇವಾ ಕಾರ್ಯ, ಪಾಲನಜೋಗಿಹಳ್ಳಿ ಶಾಲೆಯಲ್ಲಿ ದಂತ ತಪಾಸಣೆ ಶಿಬಿರ-ಪೆನ್ಸಿಲ್‌ ಬಾಕ್ಸ್‌ ವಿತರಣೆ, ಲಿಟ್ಲ್‌ ಮಾಸ್ಟರ್‌ ಶಾಲೆ ಹಾಗೂ ದೇವಲ ಮಹರ್ಷಿ ಶಾಲೆಯಲ್ಲಿ ಕಣ್ಣಿನ ತಪಾಸಣೆ ಶಿಬಿರ, ಸಕ್ಕರೆಗೊಲ್ಲಹಳ್ಳಿ ವಸತಿ ಶಾಲೆಯಲ್ಲಿ ಪುಲ್‌ಓವರ್‌ಗಳ ವಿತರಣೆ, ದ್ವಿಚಕ್ರ ವಾಹನಗಳಿಗೆ ಉಚಿತ ಆಯಿಲ್ ಸರ್ವೀಸ್, ವಾಯುಮಾಲಿನ್ಯ ತಪಾಸಣೆ, ವೇದಿಕೆ ಕಾರ್ಯಕ್ರಮದಲ್ಲಿ ಹಲವು ಗಣ್ಯರಿಗೆ ಸನ್ಮಾನ,ಸೇವಾ ಕಾರ್ಯ ಸೇರಿದಂತೆ ಒಂದೇ ದಿನ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

Leave a Reply

Your email address will not be published. Required fields are marked *