
ಕೇಂದ್ರ ಮಾಜಿ ಸಚಿವರು, ಹಾಲಿ ರಾಜ್ಯ ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಲಿ ಎಂಬುದು ನಮ್ಮ ಅಭಿಲಾಷೆ ಎಂದು ಶ್ರೀಕ್ಷೇತ್ರ ಘಾಟಿ ಪ್ರಾಧಿಕಾರದ ಸದಸ್ಯ ಆರ್. ವಿ ಮಹೇಶ್ ಕುಮಾರ್ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಕೆಎಚ್ ಮುನಿಯಪ್ಪ ಜನ್ಮದಿನ ಪ್ರಯುಕ್ತ ಏರ್ಪಡಿಸಿದ್ದ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಹಿರಿಯರಾಗಿರುವ ಕೆಎಚ್ಎಂ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಇವರ ಸೇವೆಯನ್ನು ಗುರುತಿಸಿ ದಲಿತ ಸಮುದಾಯದ ನಾಯಕರಿಗೆ ಉನ್ನತಮಟ್ಟದ ಅವಕಾಶವನ್ನು ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಕೆಪಿಸಿಸಿ ಜಿಲ್ಲಾ ವಕ್ತಾರ ಜಿ.ಲಕ್ಷ್ಮೀಪತಿ ಮಾತನಾಡಿ, ಸರಳ ಸಜ್ಜನಿಕೆಯ ಭ್ರಷ್ಟಾಚಾರ ಮುಕ್ತವಾಗಿ ಆಡಳಿತ ನೀಡುವ ವ್ಯಕ್ತಿಯಾಗಿ ಕೆಎಚ್ ಮುನಿಯಪ್ಪ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಸೋಲಿಲ್ಲದ ಸರದಾರನಾಗಿ ಸಂಸದರಾಗಿ 7 ಬಾರಿ ಆಯ್ಕೆಯಾಗಿರುವ ಖ್ಯಾತಿ ಇವರದ್ದು. ಕಾಂಗ್ರೆಸ್ ಪಕ್ಷಕ್ಕೆ ಅವಿರತವಾಗಿ ದುಡಿದಿರುವ ಕೆಎಚ್ಎಂಗೆ ಸಿಎಂ ಸ್ಥಾನ ನೀಡುವುದು ಸೂಕ್ತವಾಗಿದೆ ಎಂದರು.

ಘಾಟಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಆರ್.ವಿ ಮಹೇಶ್ ಕುಮಾರ್, ರಂಗಪ್ಪ, ಮುಖಂಡರಾದ ಲಕ್ಷ್ಮೀಪತಿ, ಶ್ರೀಧರ್, ಆರ್ ವಿ ಮನು, ಆರ್.ವಿ ಶಿವಕುಮಾರ್, ಗೋಪಾಲನಾಯಕ್, ವೆಂಕಟೇಶ್ ಮತ್ತಿತ್ತರರು ಇದ್ದರು.