
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯ 100ನೇ ವರ್ಷಾಚರಣೆ ವಿಶೇಷ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಯಿತು.
ಇಂದು ಸಂಜೆ 5 ಗಂಟೆಗೆ ನಗರದ ಬಯಲು ಬಸವಣ್ಣ ದೇವಾಲಯದ ಬಳಿ ಆರ್.ಎಸ್.ಎಸ್ ಗೀತೆ ಹಾಡಿದ ನಂತರ ಆರಂಭವಾದ ವಿಜಯದಶಮಿ ಪಥಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಸವಣ್ಣ ದೇವಾಲಯದ ಬಳಿ ಅಂತ್ಯಗೊಂಡಿತು.

ರಸ್ತೆಯ ಉದ್ದಕ್ಕೂ ಪಥಸಂಚಲನದ ಗಣವೇಷಧಾರಿಗಳ ಮೇಲೆ ಸಾರ್ವಜನಿಕರು ಪುಷ್ಪ ವೃಷ್ಟಿ ಸುರಿಸಿದರು. ವಿವಿಧ ಕಡೆಗಳಲ್ಲಿ ಮಹಿಳೆಯರು ರಸ್ತೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಗಣಧಾರಿಗಳಿಗೆ ಸ್ವಾಗತ ಕೋರಿದರು.

ಗಮನ ಸೆಳೆದ ಶಾಸಕ ಧೀರಜ್ ಮುನಿರಾಜ್
ಶಾಸಕ ಧೀರಜ್ ಮುನಿರಾಜು ಗಣ ವೇಷಧಾರಿಯಾಗಿ ಎಡ, ಬಲ, ಎಡ, ಬಲ ಎನ್ನುತ್ತಾ ಪಥಸಂಚಲನದಲ್ಲಿ ಪೂರ್ಣವಾಗಿ ಭಾಗಿಯಾಗಿ ಗಮನ ಸೆಳೆದರು.
ಪಥಸಂಚಲನದಲ್ಲಿ ಸುಮಾರು 600 ಕ್ಕೂ ಹೆಚ್ಚು ಗಣ ವೇಷಧಾರಿಗಳು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.