ಆರಂಭಿಕ ಆಟಗಾರರ ಅಬ್ಬರದ ಬ್ಯಾಟಿಂಗ್ ಹಾಗೂ ದೀಪಕ್ ಚಹರ್ ಮಾರಕ ಬೌಲಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ ವಿರುದ್ಧದ ಪಂದ್ಯವನ್ನು ಗೆಲ್ಲುವ ಮೂಲಕ ಸಿ ಎಸ್ ಕೆ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿದ ನಾಯಕ ಮಹೇಂದ್ರ ಸಿಂಗ್ ಧೋನಿಯ ನಿರ್ಧಾರಕ್ಕೆ ತಕ್ಕಂತೆ ಅರಂಭಿಕರಿಬ್ಬರು ದಿಟ್ಟ ಉತ್ತರ ನೀಡಿದರು. ಯುವ ಆಟಗಾರ ಋತುರಾಜ್ ಗಾಯಕ್ವಾಡ್ (79) ಹಾಗೂ ಡೆವೊನ್ ಕಾನ್ವೆ (87) ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು.
ಮೊದಲ ವಿಕೆಟ್ ಗೆ 141 ರನ್ ಗಳ ಜೊತೆಯಾಟ ಮೂಡಿಬಂದಿತು. ಇದರ ಜೊತೆಯಲ್ಲಿ ಮಾಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಕೂಡ ಈ ಪಂದ್ಯದಲ್ಲಿ ಮಿಂಚಿದರು. ಶಿವಂ ದುಬೆ (22) ಹಾಗೂ ಜಡೇಜಾ (20) ಅಬ್ಬರದ ಆಟದ ನೆರವಿನಿಂದ ಸಿ ಎಸ್ ಕೆ ಮೂರು ವಿಕೆಟ್ ಗಳ ನಷ್ಟಕ್ಕೆ 223 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತು.
ಡೆಲ್ಲಿ ಪರವಾಗಿ ಸಕಾರಿಯ, ನೋಕಿಯಾ, ಮತ್ತು ಖಲೀಲ್ ಅಹ್ಮದ್ ತಲಾ ಒಂದೊಂದು ವಿಕೆಟ್ ಪಡೆದರು. 224 ರನ್ ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ.
ಆರಂಭಿಕ ಆಟಗಾರ ಪೃಥ್ವಿ ಷಾ(5) ಬೇಗನೆ ತಮ್ಮ ವಿಕೆಟ್ ಒಪ್ಪಿಸಿದರು. ಒಂದೆಡೆ ನಾಯಕ ಡೇವಿಡ್ ವಾರ್ನರ್(86) ಆಕರ್ಷಕ ಅರ್ಧ ಶತಕ ಗಳಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿದರು. ಆದರೆ ಉಳಿದ ಯಾವುದೇ ಬ್ಯಾಟರ್ ಗಳಿಂದ ಉತ್ತಮ ಆಟ ಮೂಡಿಬರಲಿಲ್ಲ.
ಸಿ ಎಸ್ ಕೆ ತಂಡದ ಬೌಲರ್ ಗಳ ಉತ್ತಮ ಬೌಲಿಂಗ್ ನೆರವಿನಿಂದ 20 ಓವರ್ ಗಳ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ ಕೇವಲ 146 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ದೀಪಕ್ ಚಾಹರ್ 3 ವಿಕೆಟ್, ಪತಿರಾಣಾ ಹಾಗೂ ತೀಕ್ಷಣ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು. ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.