ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ

ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1946ಕ್ಕೆ ಸರಿಯಾದ ಶ್ರೀ ಕ್ರೋಧಿನಾಮ ಸಂವತ್ಸರದ ಪುಷ್ಯ ಶುದ್ಧ ಷಷ್ಠಿ ಜ.5ರ ಭಾನುವಾರ ಮಧ್ಯಾಹ್ನ 12-10 ರಿಂದ 12-20 ಗಂಟೆಗೆ ಸಲ್ಲುವ ಶುಭ (ಮೀನ) ಲಗ್ನದಲ್ಲಿ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು.

ಸ್ವಾಮಿಯ ಬ್ರಹ್ಮರಥೋತ್ಸವ ದಿನದಂದು ರಥಕ್ಕೆ ಬ್ರಹ್ಮ, ವಿಷ್ಣು, ಶಿವ ಹೆಸರಿನಲ್ಲಿ ಪೂಜೆ ಮಾಡಿ, ರಥದ ನಾಲ್ಕು ಚಕ್ರಗಳಿಗೆ ಋಗ್ವೇದ, ಸಾಮವೇದ, ಯರ್ಜುವೇದ, ಅಥರ್ವಣವೇದ ಪೂಜೆ ಮಾಡಲಾಯಿತು. ರಥವನ್ನು ಎಳೆಯುವ ಹಗ್ಗಕ್ಕೆ ವಾಸುಕಿ ಎಂಬ ಸರ್ಪವನ್ನು ಆರಾಧನೆ ಮಾಡಿ, ಮೇಲೆ ಪ್ರಧಾನ ದೇವರ ಕಳಸ ಇಡಲಾಯಿತು. ಇದಾದ ನಂತರ ಗರಡು ಪಕ್ಷಿ ಬಂದು ರಥದ ಸುತ್ತಾ ಮೂರು ಪ್ರದಕ್ಷಿಣೆ ಹಾಕಿದ ನಂತರ, ಅದೇ ಶುಭ ಗಳಿಗೆ ಎಂದು ನಂಬಿ ಮುಹೂರ್ತಕ್ಕೆ ಸರಿಯಾಗಿ ರಥವನ್ನು ಮುಂದಕ್ಕೆ ಎಳೆಯಲಾಯಿತು.

ನಾಗಾರಾಧನೆಗೆ ಪ್ರಸಿದ್ಧಿ‌ ಪಡೆದಿರುವ ತಾಲೂಕಿನ ಪುಣ್ಯಕ್ಷೇತ್ರ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ ಇಂದು ವಿಜೃಂಭಣೆಯಿಂದ ನಡೆಯಿತು. ಬ್ರಹ್ಮರಥೋತ್ಸವ ಕಣ್ತುಂಬಿಕೊಳ್ಳಲು ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಇತರೆ ರಾಜ್ಯಗಳ ನಾನಾ ಮೂಲೆಗಳಿಂದ ಭಕ್ತಾಧಿಗಳು ಸಾಗಾರೋಪಾದಿಯಲ್ಲಿ ಆಗಮಿಸಿದ್ದರು..

ಇಂದು ಮುಂಜಾನೆ ಸುಮಾರು 3 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಸುಬ್ರಹ್ಮಣ್ಯ ಹಾಗೂ ಲಕ್ಷ್ಮಿ ನರಸಿಂಹ‌ ಸ್ವಾಮಿಯ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಬ್ರಹ್ಮರಥೋತ್ಸವ ಹಿನ್ನೆಲೆ ದೇವರಿಗೆ ವಿವಿಧ ಪುಷ್ಪಗಳಿಂದ ಸಿಂಗರಿಸಿ, ನಾನಾ ರೀತಿ ಹೋಮ ಹವನ, ಪೂಜಾ ವಿಧಿ ವಿಧಾನಗಳು ಅದ್ಧೂರಿಯಾಗಿ, ವಿಜೃಂಭಣೆಯಿಂದ ನೆರವೇರಿಸಲಾಗುತ್ತು.

ಭಕ್ತಾಧಿಗಳು ಸರ್ಪದೋಷ ನಿವಾರಣೆಗಾಗಿ ಕ್ಷೇತ್ರದಲ್ಲಿರುವ ನಾಗರ ಕಲ್ಲು, ಹುತ್ತಗಳಿಗೆ ಹಾಲು, ತುಪ್ಪ ಎರೆದು, ಅರಿಶಿಣ ಕುಂಕುಮ ಹಚ್ಚಿ, ವಿಶೇಷ ಪೂಜೆ ಮಾಡುವಲ್ಲಿ ನಿರತರಾಗಿದ್ದರು.

ಬ್ರಹ್ಮರಥೋತ್ಸವವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನ ಬರಲಿದ್ದಾರೆ. ಬ್ರಹ್ಮರಥೋತ್ಸವ ವೇಳೆ ಯಾವುದೇ ಅಪಘಾತ, ಅನಾಹುತ, ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅದರಂತೆ ಭಕ್ತಾಧಿಗಳ ಸಂಚಾರಕ್ಕೆ ದೊಡ್ಡಬಳ್ಳಾಪುರ ಕೆಎಸ್ ಆರ್ ಟಿಸಿ ಘಟಕದ ವತಿಯಿಂದ ಸುಮಾರು 75 ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು.

ಜನಸಂದಣಿಯಲ್ಲಿ ಜನರ ಚಲನವಲನ ಗಮನಹರಿಸಲು ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ದೇವಸ್ಥಾನ ಸುತ್ತಾಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ವಾಹನಗಳ ನಿಲುಗಡೆಗೆ ಮಾಕಳಿ ಕಡೆಯಿಂದ ಬರುವ ವಾಹನಗಳಿಗೆ ದೇವಸ್ಥಾನ ಹಿಂಭಾಗ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಕಂಟನಕುಂಟೆ, ಹಾಡೋನಹಳ್ಳಿ ಮಾರ್ಗವಾಗಿ ಬರುವ ವಾಹನಗಳಿಗೆ ಲಘುಮೇನಹಳ್ಳಿ ಗೇಟ್ ಸಮೀಪ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ರಸ್ತೆ ಬದಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಅನುಮತಿ ಇರುವುದಿಲ್ಲ.

ಜನಸಂದಣಿಯಲ್ಲಿ ತಲೆ ಸುತ್ತು, ಇತರೆ ತೊಂದರೆಗಳು ಉಂಟಾದರೆ ವೈದ್ಯಕೀಯ ಸೇವೆ ಕಲ್ಪಿಸಲು ದೇವಸ್ಥಾನ ಬಳಿ ವೈದ್ಯರ ತಂಡ ಇರಲಿದೆ‌. ಎರಡು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ, ವೈದ್ಯರ ತಂಡದೊಂದಿಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಅವಕಾಶ ಮಾಡಲಾಗಿತ್ತು.

ಒಟ್ಟಿನಲ್ಲಿ ಘಾಟಿ ಬ್ರಹ್ಮರಥೋತ್ಸವ ಹಿನ್ನೆಲೆ ಕ್ಷೇತ್ರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿ ಸಂಭ್ರಮ, ಸಡಗರ ಮನೆ‌ ಮಾಡಿದೆ.

Leave a Reply

Your email address will not be published. Required fields are marked *

error: Content is protected !!