
ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಅವ್ಯವಸ್ಥೆ ಕಂಡು ಗ್ರಾಮಸ್ಥರು ಕಿಡಿಕಾರಿದ್ದಾರೆ.
MS ರಾಂಚ್ ಪಾಲಿಮರ್ಸ್ ಸಂಸ್ಥೆಯು ಗುತ್ತಿಗೆ ಪಡೆದು ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿದ್ದು, ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ ಸುಸ್ಥಿತಿಯಲ್ಲಿಡದೆ ಸರ್ಕಾರದ ಹಣ ಪಡೆದು ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದಲ್ಲಿರುವ ನೀರು ಸಂಸ್ಕರಿಸುವ ಯಂತ್ರಗಳು ಹಾಳಾಗಿವೆ. ನೀರು ಶೇಖರಿಸುವ ಟ್ಯಾಂಕ್ನಲ್ಲಿ ಗಲೀಜು ತುಂಬಿದೆ. ಆದ್ದರಿಂದ ನೀರು ಕುಡಿಯಲು ಯೋಗ್ಯವಾಗಿಲ್ಲ. ನೀರಿನ ಘಟಕದ ಬಾಗಿಲು ಮುರಿದು ವಾರಗಳೇ ಕಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಂತ್ರಗಳನ್ನು ಬದಲಾಯಿಸಿ ಕೊಡುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಡೇಂಘಿ ಹೆಚ್ಚುತ್ತಿದ್ದರೂ ಗುತ್ತಿಗೆ ಕಂಪನಿ ನಿರ್ಲಕ್ಷ್ಯ ತೋರಿದೆ. ಸ್ವಚ್ಚತೆ ಇಲ್ಲದೆ ಶುದ್ಧ ಕುಡಿಯುವ ನೀರಿನ ಘಟಕ ಮೂಲೆ ಸೇರುವಂತ ಪರಿಸ್ಥಿತಿ ಬಂದಿದೆ. ಸಂಬಂಧ ಪಟ್ಟ ಅಧಿಕಾರಿಗಳು ಶೀಘ್ರವೇ ಹಾಳಾಗಿರುವ ಯಂತ್ರಗಳನ್ನು ಬದಲಿಸಿ ಶುದ್ಧ ನೀರನ್ನು ಪೂರೈಸಿಕೊಡುವಂತೆ ಗುತ್ತಿಗೆ ಪಡೆದಿರುವ M/S ರಾಂಚ್ ಪಾಲಿಮರ್ಸ್ ಸಂಸ್ಥೆಗೆ ಸೂಚಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.