ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಬಳಿಗೆ ಕೆಎಂಎಫ್ ನಿರ್ದೇಶಕರ ನಿಯೋಗ ತೆರಳಿ ಹಾಲು ಉತ್ಪಾದಕ ರೈತರಿಗೆ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್ ಹಾಲಿಗೆ 5 ರೂ. ಏರಿಕೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಎರಡ್ಮೂರು ದಿನಗಳಲ್ಲಿ ಸಭೆ ಕರೆದು ರೈತರ ಪರವಾಗಿ ತೀರ್ಮಾನ ಕೈಗೊಳ್ಳುವ ಭರವಸೆ ಇದೆ ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಮಾದಗೊಂಡನಹಳ್ಳಿ ಮತ್ತು ಆಲಹಳ್ಳಿ ಹಾಲು ಉತ್ಪಾದಕ ಸಹಕಾರಿ ಸಂಘಗಳ ವಾರ್ಷಿಕ ಸಭೆ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಉತ್ಪಾದಿಸಿ ಸಹಕಾರ ಸಂಘಕ್ಕೆ ನೀಡಬೇಕು ಹಾಗೂ ತಮ್ಮ ರಾಸುವಿಗೆ ಸಮತೋಲನ ಆಹಾರ ನೀಡಿ ಮತ್ತು ಹಾಲಿನಲ್ಲಿ ಕೊಬ್ಬಿನ ಅಂಶ ಇರುವಂತೆ ಹಾಲಿನ ಗುಣಮಟ್ಟ ಕಾಪಾಡಲು ಹಾಲು ಉತ್ಪಾದಕರಲ್ಲಿ ಮನವಿ ಮಾಡಿದರು.
ಉತ್ಪಾದಕರು ತಮ್ಮ ಮನೆ ಬಳಕೆಗೆ ಅಗತ್ಯವಾದ ಹಾಲನ್ನು ಇಟ್ಟುಕೊಂಡು, ಸೇವಿಸಬೇಕು. ಇದರಿಂದ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ಹಾಲಿನಲ್ಲಿ ದೊರೆಯಲಿವೆ. ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆ, ಕೋಳಿ/ಕುರಿ ಸಾಕಣೆಯಂತಹ ಉಪ ಕಸುಬುಗಳನ್ನು ರೂಢಿಸಿಕೊಳ್ಳಬೇಕು. ಇಲ್ಲದಿದ್ದರೆ ಆರ್ಥಿಕ ಸಂಷಕ್ಟಕ್ಕೆ ಒಳಗಬೇಕಗುತ್ತದೆ ಎಂದು ಎಚ್ಚರಿಸಿದರು.
ಡೇರಿ ವ್ಯವಸ್ಥಾಪಕ ನಿರ್ದೇಶಕ ಎಲ್.ಬಿ.ನಾಗರಾಜು ಮಾತನಾಡಿ, ಉತ್ತಮ ಗುಣಮಟ್ಟದ ಹಾಲು ಸಂಘಕ್ಕೆ ನೀಡುವಂತೆ ತಿಳಿಸಿ ಸಂಘದ ಎಲ್ಲ ಸದಸ್ಯರು ನಂದಿನಿ ಪಶು ಆಹಾರ ನಂದಿನಿ ಲವಣ ಮಿಶ್ರಣ ಬಳಕೆ ಮಾಡುವಂತೆ ಮತ್ತು ಒಕ್ಕೂಟದಿಂದ ದೊರಕುವ ವಿವಿಧ ಯೋಜನೆಗಳ ವಿವರವನ್ನು ತಿಳಿಸಿದರು.
ಇದೆ ವೇಳೆ ಅತಿ ಹೆಚ್ಚು ಹಾಲು ನೀಡುವ ರೈತ ಮುನೇಗೌಡರಿಗೆ ಬಹುಮಾನ ನೀಡಲಾಯಿತು. ನಿವೃತ್ತ ಹಾಲು ಪರೀಕ್ಷಕ ನಾರಾಯಣಗೌಡ ಅವರನ್ನು ಸನ್ಮಾನಿಸಲಾಯಿತು.
ಎಂಪಿಸಿಎಸ್ ಅಧ್ಯಕ್ಷ ಮುನೇಗೌಡ, ಉಪಾಧ್ಯಕ್ಷೆ ರಾಜಮ್ಮ, ಡೇರಿ ವ್ಯವಸ್ಥಾಪಕ ನಿರ್ದೇಶಕ ಎಲ್.ಬಿ ನಾಗರಾಜು, ಮುನಿರಾಮೇಗೌಡ, ವಿಸ್ತಾರಣಾಧಿಕಾರಿ ಕುಸಮಾ ಸೇರಿದಂತೆ ಇತರರು ಇದ್ದರು.