ಶಿಷ್ಟಾಚಾರದ ಹೆಸರಲ್ಲಿ ವಾಗ್ಯುದ್ಧ: ಹಾಲಿ ಶಾಸಕ ಧೀರಜ್ ಮುನಿರಾಜು–ಮಾಜಿ ಶಾಸಕ ವೆಂಕಟರಮಣಯ್ಯ ನಡುವೆ ಬಹಿರಂಗ ಕಿತ್ತಾಟ

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಹಾಲಿ ಶಾಸಕ ಧೀರಜ್ ಮುನಿರಾಜು ಹಾಗೂ ಮಾಜಿ ಶಾಸಕ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಟಿ.ವೆಂಕಟರಮಣಯ್ಯ ನಡುವಿನ ರಾಜಕೀಯ ಪೈಪೋಟಿ ಇದೀಗ ಬಹಿರಂಗ ವೇದಿಕೆಗಳಿಗೂ ಕಾಲಿಟ್ಟಿರುವುದು ತಾಲೂಕಿನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಸರ್ಕಾರಿ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಶಿಷ್ಟಾಚಾರದ ವಿಚಾರವಾಗಿ ಉಭಯ ನಾಯಕರ ನಡುವೆ ನಡೆದ ಮಾತಿನ ಚಕಮಕಿ, ಕೇವಲ ಕ್ಷಣಿಕ ವಾಗ್ವಾದವೇ ಅಥವಾ ಮುಂದಿನ ದಿನಗಳಲ್ಲಿ ಕ್ಷೇತ್ರದ ರಾಜಕೀಯ ಸಂಘರ್ಷಕ್ಕೆ ಮುನ್ನುಡಿಯೇ ಎಂಬ ಪ್ರಶ್ನೆ ಮೂಡಿಸಿದೆ.

ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಲಿ ಶಾಸಕ ಧೀರಜ್ ಮುನಿರಾಜು ಹಾಗೂ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಭಾಗವಹಿಸಿದ್ದರು. ಶಾಸಕ ಧೀರಜ್ ಮುನಿರಾಜು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಶಾಸಕರು ತಮ್ಮ ಅಧ್ಯಕ್ಷೀಯ ಭಾಷಣ ಮುಗಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲು ಮುಂದಾದ ಸಂದರ್ಭದಲ್ಲಿ, ವೇದಿಕೆಯಲ್ಲಿದ್ದವರು ಮಾಜಿ ಶಾಸಕರಿಗೂ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು ಎನ್ನಲಾಗಿದೆ.

ಈ ವೇಳೆ ಉಭಯ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. ಕಾರ್ಯಕ್ರಮ ತಮ್ಮ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮದ ರೂಪುರೇಷೆಯಂತೆ ನಡೆದುಕೊಳ್ಳಲಾಗುತ್ತಿದೆ ಎಂದು ಶಾಸಕ ಧೀರಜ್ ಮುನಿರಾಜು ಪ್ರತಿಪಾದಿಸಿದರೆ, ಮಾತನಾಡಲು ಅವಕಾಶ ನೀಡುವುದು ಪ್ರಜಾಪ್ರಭುತ್ವದ ಮೂಲಭೂತ ಆಶಯ ಎಂದು ಮಾಜಿ ಶಾಸಕ ವೆಂಕಟರಮಣಯ್ಯ ವಾದಿಸಿದರು ಎನ್ನಲಾಗಿದೆ. ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆಯೂ ವೆಂಕಟರಮಣಯ್ಯ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದ್ದು, ಕೆಲಕಾಲ ವೇದಿಕೆಯಲ್ಲಿ ವಾಗ್ವಾದದ ವಾತಾವರಣ ನಿರ್ಮಾಣವಾಗಿತ್ತು.

‘ಪ್ರಜಾಪ್ರಭುತ್ವ’ ಕಾರ್ಯಕ್ರಮದಲ್ಲೇ ರಾಜಕೀಯ ಬಿಸಿ

ಪ್ರಜಾಪ್ರಭುತ್ವದ ಮಹತ್ವ ಸಾರುವ ಕಾರ್ಯಕ್ರಮದಲ್ಲೇ ಜನಪ್ರತಿನಿಧಿಗಳು ಪರಸ್ಪರ ವಾಗ್ವಾದ ನಡೆಸಿರುವುದು ಕಾರ್ಯಕ್ರಮದಲ್ಲಿದ್ದವರ ಗಮನ ಸೆಳೆಯಿತು. ವಿಶೇಷವಾಗಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆದ ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜಕಾರಣಿಗಳ ಮೇಲಿನ ಸಾರ್ವಜನಿಕರ ನಂಬಿಕೆ ಮತ್ತು ಗೌರವದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಇಂತಹ ಬಹಿರಂಗ ವಾಗ್ವಾದಗಳು ಜನರಲ್ಲಿ ಯಾವ ಸಂದೇಶ ನೀಡುತ್ತವೆ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.

ಬಾಶೆಟ್ಟಿಹಳ್ಳಿಯಲ್ಲೂ ನಡೆದಿತ್ತು ಮಾತಿನ ಚಕಮಕಿ

ಇದು ಇದೇ ಮೊದಲ ಘಟನೆಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಶನಿವಾರ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿಯೂ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರೇಮ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುವ ಸಾಧ್ಯತೆ ಕಂಡುಬಂದಿದ್ದು, ಪೊಲೀಸರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು ಎನ್ನಲಾಗಿದೆ.

ಹೀಗೆ ಸಾಲು ಸಾಲು ಸಾರ್ವಜನಿಕ ಕಾರ್ಯಕ್ರಮಗಳಲ್ಲೇ ರಾಜಕೀಯ ಮುಖಾಮುಖಿ ಕಾಣಿಸಿಕೊಳ್ಳುತ್ತಿರುವುದು ತಾಲೂಕು ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಸಂಘರ್ಷದ ಸ್ವರೂಪ ಹೇಗಿರಲಿದೆ ಎಂಬ ಕುತೂಹಲ ಮೂಡಿಸಿದೆ.

ಹಾಲಿ–ಮಾಜಿ ನಾಯಕರ ನಡುವೆ ಅಧಿಕಾರದ ಎರಡು ಕೇಂದ್ರ?

ಒಂದೆಡೆ ಕ್ಷೇತ್ರದ ಹಾಲಿ ಶಾಸಕರಾಗಿ ಧೀರಜ್ ಮುನಿರಾಜು ಅವರ ರಾಜಕೀಯ ಮತ್ತು ಜನಪ್ರತಿನಿಧಿತ್ವದ ಪಾತ್ರವಿದ್ದರೆ, ಮತ್ತೊಂದೆಡೆ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರು ಇದೀಗ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕೃತ ಸ್ಥಾನದಲ್ಲಿದ್ದಾರೆ. ಈ ಎರಡು ರಾಜಕೀಯ ಕೇಂದ್ರಗಳ ನಡುವೆ ಸಮನ್ವಯ ಮೂಡುತ್ತದೆಯೇ ಅಥವಾ ಅಂತರ ಮತ್ತಷ್ಟು ಹೆಚ್ಚುತ್ತದೆಯೇ ಎಂಬುದು ಕ್ಷೇತ್ರದ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಅಭಿವೃದ್ಧಿ ರಾಜಕೀಯದತ್ತ ಗಮನ ಹರಿಯಲಿ

ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಭಿನ್ನಾಭಿಪ್ರಾಯಗಳು ರಾಜಕೀಯ ವಲಯದಲ್ಲಿ ಸಹಜವಾಗಿರಬಹುದು. ಆದರೆ ಸರ್ಕಾರಿ ಕಾರ್ಯಕ್ರಮಗಳು ಜನರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ವೇದಿಕೆಗಳಾಗಬೇಕೇ ಹೊರತು, ಪರಸ್ಪರ ಆರೋಪ–ಪ್ರತ್ಯಾರೋಪಗಳ ವೇದಿಕೆಯಾಗಬಾರದು ಎಂಬುದು ಸಾರ್ವಜನಿಕರ ನಿರೀಕ್ಷೆ. ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ಸಂಚಾರ, ಕೈಗಾರಿಕೆ, ಉದ್ಯೋಗ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳಿವೆ. ಇಂತಹ ಸಂದರ್ಭದಲ್ಲಿ ರಾಜಕೀಯ ನಾಯಕರು ವೈಯಕ್ತಿಕ ವಾಗ್ವಾದಕ್ಕಿಂತ ಅಭಿವೃದ್ಧಿ ವಿಚಾರಗಳಿಗೆ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

Ramesh Babu

Journalist

Recent Posts

ನಿಷೇಧದ ನಡುವೆಯೂ ಡಿಜೆ ಬಳಕೆ: ವಾಹನ ವಶ, ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿ ಡಿಜೆ ಬಳಕೆಗೆ ನಿಷೇಧವಿದ್ದರೂ ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಬಳಸಿದ ಆರೋಪದ ಮೇರೆಗೆ ಡಿಜೆ ವಾಹನವನ್ನು ಜಪ್ತಿ ಮಾಡಿರುವ…

15 hours ago

ಲಾಡ್ಜ್‌ನಲ್ಲಿ ಮಹಿಳೆ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕೊಲೆ ಶಂಕಿತ ಪತಿ ಆನಂದ್ ನೇಣಿಗೆ ಶರಣು

ದೊಡ್ಡಬಳ್ಳಾಪುರ: ಪತಿಯೊಂದಿಗೆ ಲಾಡ್ಜ್‌ಗೆ ತೆರಳಿದ್ದ 21 ವರ್ಷದ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ…

17 hours ago

ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಅಗತ್ಯ- ಕೆಪಿಸಿಸಿ ಸದಸ್ಯ ಎಸ್.ಆರ್. ಮುನಿರಾಜ್

ದೊಡ್ಡಬಳ್ಳಾಪುರ: ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಅಗತ್ಯವಾಗಿದ್ದು, ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದರೆ ಮುಂಬರುವ ಎಲ್ಲ ಚುನಾವಣೆಗಳಲ್ಲೂ ಪಕ್ಷದ ಗೆಲುವು…

20 hours ago

ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿ…

2 days ago

ಬರದ ಬವಣೆಗೆ ಸಿಲುಕಿದ ದೊಡ್ಡಬಳ್ಳಾಪುರ: ಬರಪೀಡಿತ ಪಟ್ಟಿಗೆ ಸೇರ್ಪಡೆ

ಬೆಂಗಳೂರು ಗ್ರಾಮಾಂತರ: ಮಳೆ ಕೊರತೆ ಹಾಗೂ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದ ದೊಡ್ಡಬಳ್ಳಾಪುರ ತಾಲೂಕು ಇದೀಗ ಬರಪೀಡಿತ ತಾಲೂಕುಗಳ ಪಟ್ಟಿಗೆ…

2 days ago

50 ಲಕ್ಷ ಲಂಚ ಪಡೆಯುವಾಗ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ!

ಧಾರವಾಡ: ಭೂಮಿಯ ‘ಅ-ಖರಾಬ್’ ತೆರವುಗೊಳಿಸಲು 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ವಿರುದ್ಧ…

2 days ago