ದೇವಾಂಗ ಸಮುದಾಯವನ್ನು ಪ್ರತಿ ಹಂತದಲ್ಲಿಯೂ ಕಡೆಗಣನೆ ಮಾಡಿ ದೇವಾಂಗ ಸಮಾಜದ ಮುಖಂಡರನ್ನು ಬಳಸಿಕೊಂಡು ಬಳಿಕ ಮೂಲೆಗುಂಪು ಮಾಡುತ್ತಿರುವ ಶಾಸಕ ವೆಂಕಟರಮಣಯ್ಯ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಮತ್ತು 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದ ನಮ್ಮ ಸಮಾಜ ಮುಂದಿನ ದಿನಗಳಲ್ಲಿ ಶಾಸಕರಿಗೆ ತಕ್ಕಪಾಠ ಕಲಿಸುತ್ತದೆ ಎಂದು ದೇವಾಂಗ ಮಂಡಳಿ ಮಾಜಿ ಅಧ್ಯಕ್ಷ ಕೆ.ಜಿ ದಿನೇಶ್ ಹೇಳಿದರು.
ನಗರದ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ದೇವಾಂಗ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದಲ್ಲಿ ದೇವಾಂಗ ಸಮಾಜ ಅತ್ಯಂತ ಹೆಚ್ಚಿನ ಮತದಾರರನ್ನು ಹೊಂದಿದೆ. ನಮ್ಮ ಸಮಾಜದ ನಾಯಕರು ಎಲ್ಲಾ ಪಕ್ಷಗಳಲ್ಲಿ ಗುರುತಿಸಿಕೊಂಡು ಉನ್ನತ ಸ್ಥಾನದಲ್ಲಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ಮುಖಂಡರು ಮತ್ತು ದೇವಾಂಗ ಮಂಡಳಿ ಹಾಲಿ ಅಧ್ಯಕ್ಷರಾಗಿರುವ ಎಂ.ಜಿ ಶ್ರೀನಿವಾಸ್ ಅವರನ್ನು ಏಕಾಏಕಿ ಪಕ್ಷದಿಂದ ಉಚ್ಚಾಟನೆ ಮಾಡಿರುವುದು ದೇವಾಂಗ ಸಮಾಜಕ್ಕೆ ಮಾಡಿರುವ ಅಪಮಾನವಾಗಿದೆ.
2013ರ ಚುನಾವಣೆಯಲ್ಲಿ ಇದೇ ಎಂ.ಜಿ.ಶ್ರೀನಿವಾಸ್ ಅವರ ಪರಿಶ್ರಮದಿಂದ ನಗರ ಭಾಗದಲ್ಲಿ ದೇವಾಂಗ ಸಮಾಜದ ಅತ್ಯಂತ ಹೆಚ್ಚಿನ ಮತ ಕಾಂಗ್ರೆಸ್ ಕಡೆ ವಾಲಿತ್ತು. ಇದೀಗ ನಮ್ಮ ಸಮಾಜದ ಮುಖಂಡರನ್ನು ಮೂಲೆಗುಂಪು ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರಿಂದ ಒಡೆದು ಆಳುವ ನೀತಿ
ನಮ್ಮ ಸಮಾಜದ ಮುಖಂಡರನ್ನ ಶಾಸಕ ವೆಂಕಟರಮಣಯ್ಯ ಬಳಸಿಕೊಂಡು ನಮ್ಮ ಸಮಾಜದ ಮುಖಂಡರ ವಿರುದ್ಧವೇ ಎತ್ತಿ ಕಟ್ಟಿ ದೇವಾಂಗ ಸಮುದಾಯವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಇದರಿಂದ ಯುವಕರು ದಾರಿ ತಪ್ಪುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಲಬಾಂಧವರೊಂದಿಗೆ ಚರ್ಚಿಸಿ ತೀರ್ಮಾನ
ಶಾಸಕ ವೆಂಕಟರಮಣಯ್ಯ ದೇವಾಂಗ ಸಮಾಜದ ಎಲ್ಲಾ ಹಂತದ ಮುಖಂಡರನ್ನು ತುಳಿಯುವ ಹೇಯ ಕೃತ್ಯ ಮಾಡುತ್ತಿದ್ದಾರೆ. ನಗರಸಭೆ ಚುನಾವಣೆಯಲ್ಲೂ ದೇವಾಂಗ ಸಮಾಜದ ಸ್ವಪಕ್ಷೀಯ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದಾರೆ. ದೇವಾಂಗ ಸಮಾಜವನ್ನು ಹೀನಾಯವಾಗಿ ನಡೆಸುಕೊಳ್ಳುತ್ತಿದ್ದಾರೆ. ಮುಂದೆ ನಮ್ಮ ಎಲ್ಲಾ ಹಿರಿಯ ಕುಲಬಾಂಧವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ನಗರಸಭಾ ಮಾಜಿ ಉಪಾಧ್ಯಕ್ಷೆ ಜಯಲಕ್ಷ್ಮಿ ನಟರಾಜ್ ಆಕ್ರೋಶ ವ್ಯಕ್ತಪಡಿಸಿದರು.
ದೇವಾಂಗ ಸಮಾಜಕ್ಕೆ ಅಪಮಾನ
ಶಾಸಕ ವೆಂಕಟರಮಣಯ್ಯ ದೇವಾಂಗ ಸಮಾಜದ ಹಿರಿಯ ನಾಯಕರಿಗೆ ಅಪಮಾನ ಮಾಡಿದ್ದಾರೆ. ಎಂ.ಜಿ ಶ್ರೀನಿವಾಸ್ ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿ ಸಂಘಟಿಸಿದವರಲ್ಲಿ ಪ್ರಮುಖರು, ಅವರನ್ನು ಏಕಾಏಕಿ ಅವರನ್ನು ತೆಗೆದುಹಾಕಿರುವುದು ಸರಿಯಲ್ಲ. ಪಕ್ಷದ ವಿರುದ್ಧ ಅವರು ಮಾತನಾಡಿಲ್ಲ. ಬದಲಾಗಿ ಶಾಸಕರ ವಿರುದ್ಧ ಅವರು ಮಾತನಾಡಿರುವುದು. ಸ್ವಾಭಿಮಾನಿ ಕಾಂಗ್ರೆಸ್ ಮುಖಂಡರು ಮಾತನಾಡಿರುವುದನ್ನೇ ಎಂಜಿ ಶ್ರೀನಿವಾಸ್ ಮಾತನಾಡಿರುವುದು. ಆದರೆ ಅವರ ವಿರುದ್ಧ ಕ್ರಮವಿಲ್ಲ. ಸ್ವಜಾತಿ ನಾಯಕರನ್ನು ಉಳಿಸಿಕೊಂಡು ದೇವಾಂಗ ಸಮಾಜದ ನಾಯಕರ ವಿರುದ್ಧ ಕ್ರಮ ತೆಗೆದುಕೊಂಡಿರುವುದು ಸರಿಯಲ್ಲ ಎಂದು ಮಾಜಿ ತೆಲುಗು ದೇವಾಂಗ ಸಮಾಜದ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಮುಖಂಡರಾದ ಕೇಶವ ಮೂರ್ತಿ, ಅಮರನಾಥ್, ಸರೋಜಮ್ಮ,ಲಕ್ಷ್ಮಿಪತಿ, ನಿರ್ಮಲಾ, ಸುಧಾ, ನಟರಾಜ್ ಮತ್ತಿತರರು ಇದ್ದರು.