ಶಾಲಾ ವಾಹನ ಚಾಲಕರೇ ಸಂಚಾರಿ ನಿಯಮ ಪಾಲನೆ ಕಡ್ಡಾಯ- ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಸೂಚನೆ

ಶಾಲಾ ವಾಹನ ಚಾಲಕರು ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕರೆದುಕೊಂಡು ಹೋಗಿ, ಮನೆಗೆ ತಂದು ಬಿಡುವ  ಕಾರ್ಯವನ್ನು ಉತ್ತಮವಾಗಿ ನಿಭಾಯಿಸಬೇಕು ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರು ಸೂಚಿಸಿದರು.

ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರ ನೇತೃತ್ವದಲ್ಲಿ ಠಾಣಾ ಆವರಣದಲ್ಲಿಂದು ವಾಹನ ಚಾಲಕರಿಗೆ ಕಟ್ಟುನಿಟ್ಟಾಗಿ ಪಾಲಿಸಬೇಕಾದ ಸಂಚಾರಿ ನಿಯಮಾವಳಿಗಳ ಕುರಿತು ಜಾಗೃತಿ ಮೂಡಿಸಿದರು.

ಪೋಷಕರು, ಶಾಲಾ ಸಂಸ್ಥೆಗಳು, ವಾಹನ ಮಾಲೀಕರು ಮಕ್ಕಳು ಸುರಕ್ಷತೆಯನ್ನು ಆದ್ಯತೆಯಾಗಿ ಸ್ವೀಕರಿಸಬೇಕು. ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.

ಸುಸ್ಥಿತಿ ಯಲ್ಲಿರುವ ವಾಹನಗಳನ್ನೇ ಶಾಲಾ ವಾಹನಗಳನ್ನಾಗಿ ಬಳಸಬೇಕು. ಶಾಲಾ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸಿರಬೇಕು. ವೇಗದ ಮಿತಿ ಗಂಟೆಗೆ 40 ಕಿ.ಮೀ. ಇರಬೇಕು. ವಾಹನ 15 ವರ್ಷಗಳಿಗಿಂತ ಹಳೆಯದಿರಬಾರದು. ವಾಹನ ಹಳದಿ ಬಣ್ಣದ್ದಾಗಿರಬೇಕು ಮತ್ತು 150 ಮಿ.ಮೀ. ಅಗಲದ ಹಸಿರು ಪಟ್ಟಿ ವಾಹನದ ಮಧ್ಯದುದ್ದಕ್ಕೂ ಇರಬೇಕು. ಎಲ್ಲ ನಾಲ್ಕು ಬದಿಗಳಲ್ಲಿ ‘ಶಾಲಾ ವಾಹನ’ ಎಂದು ಸ್ಪಷ್ಟವಾಗಿ ಮತ್ತು ದೊಡ್ಡದಾಗಿ ಬರೆದಿರಬೇಕು. ಮಕ್ಕಳು 12 ವರ್ಷಕ್ಕಿಂತ ಕೆಳಗಿನವರಿದ್ದರೆ ಅನುಮತಿ ಇರುವ ಸಂಖ್ಯೆಯ ಸೀಟಿಗಿಂತ ಒಂದೂವರೆ ಪಟ್ಟಿಗಿಂತ ಮಕ್ಕಳು ಹೆಚ್ಚಿರಬಾರದು. 12 ವರ್ಷ ಮೇಲ್ಪಟ್ಟ ಮಕ್ಕಳನ್ನು ಒಬ್ಬ ವ್ಯಕ್ತಿ ಎಂದು ಪರಿಗಣಿಸಬೇಕು. ವಾಹನದಲ್ಲಿ ಎಲ್‌ಪಿಜಿ ಅಳವಡಿಸಲಾಗಿದ್ದರೆ ಸಂಬಂಧಿತ ನೋಂದಾವಣೆ ಅಧಿಕಾರಿಯಿಂದ ಪ್ರಮಾಣಪತ್ರ ಪಡೆದಿರಬೇಕು. ಮಕ್ಕಳನ್ನು ಸಿಲಿಂಡರ್ ಇರುವ ಸ್ಥಳದ ಮೇಲೆ ಕೂಡಿಸಬಾರದು ಎಂದು‌ ತಿಳಿಸಿದರು.

ವಾಹನದ ಗಾಜಿಗೆ ಬಣ್ಣದ ಶೀಟುಗಳನ್ನು ಬಳಸುವಂತಿಲ್ಲ. ಚಾಲಕನ ಬಳಿ ಕನಿಷ್ಠ ನಾಲ್ಕು ವರ್ಷ ಹಗುರ ವಾಹನ ಓಡಿಸಿದ ಅನುಭವವಿರಬೇಕು ಮತ್ತು ನ್ಯಾಯಸಮ್ಮತವಾದ ಲೈಸೆನ್ಸ್ ಇರಬೇಕು. ಸಮವಸ್ತ್ರ ಕಡ್ಡಾಯ, ಅಂಗಿಯ ಮೇಲೆ ಹೆಸರಿನ ಪ್ಲೇಟ್ ಇರಬೇಕು. ವಾಹನದ ಮೇಲೆ ಇರುವ ಕ್ಯಾರಿಯರ್ ಮೇಲೆ ಬ್ಯಾಗ್ ಇಡತಕ್ಕದ್ದಲ್ಲ ಮತ್ತು ವಾಹನದ ಹೊರಗಡೆ ಬ್ಯಾಗುಗಳನ್ನು ನೇತುಹಾಕುವಂತಿಲ್ಲ. ವಾಹನದ ಹಿಂಬದಿಯಲ್ಲಿ ಚಾಲಕನ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮುಂತಾದ ವಿವರಗಳನ್ನು ಲಗತ್ತಿಸಬೇಕು. ವಿದ್ಯಾರ್ಥಿಯ ಹೆಸರು, ವಿಳಾಸ, ರಕ್ತದ ಗುಂಪು, ತರಗತಿ, ವಾಹನ ಹತ್ತಿಳಿಯುವ ಸ್ಥಳ, ವಾಹನ ಚಲಿಸುವ ಮಾರ್ಗ ಮುಂತಾದ ವಿವರಗಳನ್ನು ಚಾಲಕ ಬರೆದಿಟ್ಟುಕೊಂಡಿರಬೇಕು ಎಂದರು.

ತುರ್ತು ಪರಿಸ್ಥಿತಿ ಎದುರಾದಾಗ ಡ್ರೈವರ್ ಅಥವಾ ಸಹಾಯಕ ಶಾಲೆಗೆ ಮಾಹಿತಿ ನೀಡಬೇಕು ಮತ್ತು ಮಕ್ಕಳನ್ನು ಸುರಕ್ಷಿತವಾಗಿರಿಸಲು ತಕ್ಕ ವ್ಯವಸ್ಥೆ ಮಾಡಬೇಕು.

ಮಗು ನರ್ಸರಿಯಲ್ಲಿ ಓದುತ್ತಿದ್ದರೆ, ಶಾಲೆ ಮತ್ತು ಪಾಲಕರು ಗುರುತಿಸುವಂಥ ವ್ಯಕ್ತಿ ಬಾರದೆಹೋದರೆ, ಮಗುವನ್ನು ಶಾಲೆಗೆ ಮರಳಿ ತರತಕ್ಕದ್ದು. ಮಗುವನ್ನು ಪಾಲಕರೇ ಶಾಲೆಗೆ ಬಂದು ಕರೆದುಕೊಂಡು ಹೋಗಬೇಕು ಎಂದು ಸೂಚಿಸಿದರು.

ಚಾಲಕ ಚಾಲನೆ ಮಾಡುವಾಗ, ಪಾನಮತ್ತನಾಗಿ, ಮೊಬೈಲ್ ಬಳಸುವುದನ್ನು ನಿರ್ಬಂಧಿಸಲಾಗಿದೆ. ತುರ್ತು ನಿರ್ಗಮನ ಕಡ್ಡಾಯ. ವಾಹನಗಳಲ್ಲಿ ಸಿಸಿಟಿವಿ, ಅಗ್ನಿ ಶಾಮಕ ಉಪಕರಣ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು. ತುರ್ತು ನಿರ್ಗಮನಕ್ಕೆ ಅನುಕೂಲಕರ ಡೋರ್‌ ಇರಬೇಕು ಎಂದು ತಿಳಿಸಿದರು.

ನಿಯಮಗಳನ್ನು ಪಾಲಿಸದ ಚಾಲಕರು ಮತ್ತು ಸಂಸ್ಥೆಗಳಿಗೆ ಮೊದಲು ದಂಡ ವಿಧಿಸುತ್ತೇವೆ. ತಪ್ಪುಗಳು ಪುನರಾವರ್ತನೆ ಆದಲ್ಲಿ ವಾಹನ ನಿಯಂತ್ರಣ ಕಾಯ್ದೆ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *